ಗದಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ಪತಿಗೆ ಚೂರಿ ಇರಿದು ಬಳಿಕ ತಾನೂ ಚುಚ್ಚಿಕೊಂಡಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯಲ್ಲಿ ನಡೆದಿದೆ.
ಪತ್ನಿ ಶ್ರೀದೇವಿಯಿಂದ ಈ ಕೃತ್ಯ ನಡೆದಿದ್ದು, ಪತಿ ಶ್ರೀಕಾಂತನ ಹೊಟ್ಟೆಗೆ ತೀವ್ರವಾಗಿ ಗಾಯವಾಗಿದೆ. ಸದ್ಯ ಅವರನ್ನು ಗದಗ ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀದೇವಿ ತಾನೂ ಸಹ ಚಾಕು ಚುಚ್ಚಿಕೊಂಡಿದ್ದರಿಂದ ಆಕೆಗೂ ಸಣ್ಣಪುಟ್ಟ ಗಾಯಗಳಾಗಿದೆ.
ಗಲಾಟೆ ನಡೆಯುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ಸರಿಯಾಗಿ ಇಬ್ಬರ ಜಗಳ ಬಿಡಿಸಿದ್ದು, ಹೆಚ್ಚಿನ ಅನಾಹುತವಾಗದಂತೆ ತಡೆದಂತಾಗಿದೆ. ತನ್ನ ಪತ್ನಿ ನನ್ನ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದಳು. ಅದಕ್ಕೆ ಈ ರೀತಿಯಾಗಿ ಮಾಡಿರುವುದು ಎಂದು ಸ್ವತಃ ಶ್ರೀಕಾಂತನೇ ಆರೋಪಿಸುತ್ತಿದ್ದಾನೆ.
ಶ್ರೀದೇವಿ ಇತ್ತೀಚೆಗೆ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಳು ಅನ್ನೋ ಆರೋಪವೂ ಕೇಳಿಬಂದಿದೆ. ಈ ಘಟನೆ ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.