ಹೈದರಾಬಾದ್: ವ್ಯಕ್ತಿಯೊಬ್ಬ ಪತ್ನಿಯ ಮೇಲೆ ಅನುಮಾನಗೊಂಡು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಅಶ್ವಿನಿ ಕೊಲೆಯಾದ ಪತ್ನಿ. ಆರೋಪಿ ಪತಿ ಸೋಮೇಲು ಪತ್ನಿ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಗೊಂಡು ದೊಣ್ಣೆಯಿಂದ ಹೊಡೆದ ಕೊಲೆ ಮಾಡಿದ್ದಾನೆ.
ನಡೆದಿದ್ದೇನು?
ಆರೋಪಿ ನಿಡ್ಮನೂರ್ ರಾಮ್ನಗರದಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ಪತ್ನಿ ಅಶ್ವಿನಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸ ಮಾಡುತ್ತಿದ್ದನು. ಆದರೆ ಕಳೆದ ಕೆಲವು ದಿನಗಳಿಂದ ಪತಿ ಅಶ್ವಿನಿ ಇನ್ನೊಬ್ಬನ ಜೊತೆ ಸಂಬಂಧ ಹೊಂದಿದ್ದಾಳೆಂದು ಅನುಮಾನಗೊಂಡು ಜಗಳವಾಡುತ್ತಿದ್ದನು. ಇದೇ ವಿಚಾರದ ಬಗ್ಗೆ ಶುಕ್ರವಾರ ರಾತ್ರಿ ಕೂಡ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಪತಿ ಸೋಮೇಲು ಮನೆಯಿಂದ ಹೊರ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ವಾಪಸ್ ಮನೆಗೆ ಬಂದು ಪತ್ನಿಯನ್ನು ನೋಡಿ ಕೋಪಗೊಂಡು ಅಲ್ಲೆ ಪಕ್ಕದಲ್ಲಿದ್ದ ದೊಣ್ಣೆ ತೆಗೆದುಕೊಂಡು ಆಕೆಯ ತಲೆಗೆ ಹೊಡೆದಿದ್ದಾನೆ. ಪರಿಣಾಮ ಅಶ್ವಿನಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ನಂತರ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಅಷ್ಟೇ ಅಲ್ಲದೇ ಪತ್ನಿ ಬೇರೆಯೊಂದಿಗಿದ್ದ ಫೋಟೋಗಳನ್ನು ಕೊಟ್ಟಿದ್ದಾನೆ.
ನಾನು ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ ಎಂದು ನನಗೆ ಫೋನ್ ಮಾಡಿ ತಿಳಿಸಿದ್ದನು. ಆದರೆ ನಾನು ಗಂಡ-ಹೆಂಡತಿ ಏನೋ ಜಗಳ ಮಾಡಿಕೊಂಡಿದ್ದಾರೆ. ಆದ್ದರಿಂದ ಕೋಪಗೊಂಡು ಅಳಿಯ ಹೇಳುತ್ತಿದ್ದಾನೆ ಎಂದುಕೊಂಡಿದ್ದೆ. ಆದರೆ ಈ ರೀತಿ ಕೊಲೆ ಮಾಡಿರುತ್ತಾನೆ ಅಂದುಕೊಂಡಿರಲಿಲ್ಲ ಎಂದು ಮೃತ ಅಶ್ವಿನಿ ತಾಯಿ ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಸದ್ಯಕ್ಕೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.