ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿ ನಡೆದಿದೆ.
27 ವರ್ಷದ ಕೀರ್ತಿ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಕಳೆದ ರಾತ್ರಿ ಮನೆಯ ರೂಂ ನಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಕೀರ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಕೋಲಾರ ನಗರದ ಕೀರ್ತಿ ಹಾಗೂ ಕೆನರಾ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಚಿಕ್ಕಬಳ್ಳಾಪುರ ಮೂಲದ ರಾಜೇಶ್ ಗೆ ಮದುವೆಯಾಗಿ ಎರಡೂವರೆ ವರ್ಷ ಕಳೆದಿದ್ದು, ಒಂದು ವರ್ಷದ ಮುದ್ದಾದ ಗಂಡು ಮಗು ಕೂಡ ಇದೆ.
ತಡರಾತ್ರಿ ಮಗನನ್ನ ಕೀರ್ತಿ ಹೊಡೆದ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಜಗಳ ಅರಂಭವಾಗಿದ್ದು ಈ ವೇಳೆ ನಾನು ತವರು ಮನೆಗೆ ಹೋಗ್ತೀನಿ ಅಂತ ಕೀರ್ತಿ ಗಲಾಟೆ ಮಾಡಿಕೊಂಡಳು. ಕೊನೆಗೆ ಗಲಾಟೆ ವಿಕೋಪಕ್ಕೆ ತಿರುಗಿ ಕೀರ್ತೀ ರೂಂ ಗೆ ಹೋಗಿ ಬಾಗಿಲು ಹಾಕಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಗಂಡ ರಾಜೇಶ್ ಪೊಲೀಸರಿಗೆ ಹೇಳಿದ್ದಾನೆ.
ಆದ್ರೆ ವರದಕ್ಷಿಣೆಗಾಗಿ ಮೊದಲಿನಿಂದಲೂ ಕಿರುಕುಳ ನೀಡುತ್ತಿದ್ದರು. ಕೀರ್ತಿಯನ್ನ ಗಂಡ ರಾಜೇಶ್ ಕೊಲೆ ಮಾಡಿದ್ದಾನೆ ಅಂತ ಮೃತ ಕೀರ್ತಿಯ ಸಂಬಂಧಿಕರು ದೂರಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಂಡ ರಾಜೇಶ್ ನನ್ನ ಪೊಲೀಸರು ಬಂಧಿಸಿದ್ದಾರೆ.