ಬೆಂಗಳೂರು: ಫೆ.16ರಂದು ಸ್ತ್ರೀತಜ್ಞೆ ಧನ್ಯತಾ ಅವರೊಂದಿಗೆ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ (Daali Dhananjaya) ಹಸೆಮಣೆ ಏರಲಿದ್ದಾರೆ. ಈ ಹಿನ್ನೆಲೆ ಗಣ್ಯರನ್ನು ಭೇಟಿ ಮಾಡಿ ಆಮಂತ್ರಣವನ್ನೂ ನೀಡುತ್ತಿದ್ದಾರೆ. ಇನ್ನು ಮದುವೆ ಕುರಿತು ಡಾಲಿ ಜೋಡಿ ಇಂದು ಸುದ್ದಿಗೋಷ್ಠಿ ನಡೆಸಿದ್ದು, ದರ್ಶನ್ರನ್ನು (Darshan) ತಮ್ಮ ಮದುವೆಗೆ ಏಕೆ ಕರೆದಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಡಾಲಿ ಧನಂಜಯ್ ದರ್ಶನ್ರನ್ನ ಮದುವೆಗೆ ಕರೆದಿಲ್ಲ ಎಂಬ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ಇಂದು ಸುದ್ದಿಗೋಷ್ಠಿಯಲ್ಲಿ ಡಾಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ದರ್ಶನ್ರನ್ನ ಸಂಪರ್ಕಿಸಲು ಪ್ರಯತ್ನ ಪಟ್ಟೆ, ಆದರೆ ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡುತ್ತೇನೆ. ಯಾರನ್ನೂ ಬಿಟ್ಟಿಲ್ಲ, ಎಲ್ಲರನ್ನೂ ಕರೆದಿದ್ದೇನೆ. ಅವರನ್ನೂ ಕರೆಯುವ ಆಸೆ ಇತ್ತು, ಆದರೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶೀಘ್ರದಲ್ಲೇ ಅದೂ ನೆರವೇರುತ್ತದೆ. ಅದು ಬಿಟ್ಟು ಏನೂ ಇಲ್ಲ ಎಂದು ಡಾಲಿ ಧನಂಜಯ್ ತಿಳಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳದ ಮೊನಾಲಿಸಾ ಸಿನಿಮಾ ಆಫರ್ ಒಪ್ಪಿದ್ಹೇಗೆ?
ದರ್ಶನ್ ನಟನೆಯ ‘ಯಜಮಾನ’ ಚಿತ್ರದಲ್ಲಿ ಡಾಲಿ ಧನಂಜಯ್ ಮಿಠಾಯಿ ಸೂರಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಆ ಮಟ್ಟಿಗೆ ಇವರಿಬ್ಬರ ನಡುವೆ ಅನ್ಯೋನ್ಯತೆಯಿದೆ. ಆದರೆ ದರ್ಶನ್ ಅವರನ್ನು ಆಹ್ವಾನಿಸದೇ ಇರುವುದು ಹಲವರ ಅನುಮಾನಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಡಾಕ್ಟರ್ ಧನ್ಯತಾರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ?- ಲವ್ ಸ್ಟೋರಿ ಬಿಚ್ಚಿಟ್ಟ ಡಾಲಿ
ಇನ್ನು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರನ್ನು ಕರೆಯದೇ ಇರುವುದಕ್ಕೆ ಬೇರೆಬೇರೆ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾಲಿ, ದರ್ಶನ್ ಅವರಿಂದ ತಪ್ಪು ಆಗಿದ್ದರೆ ಶಿಕ್ಷೆಯಾಗಲಿ, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದರು. ಇದರಿಂದ ಅವರಿಬ್ಬರ ಮಧ್ಯೆ ಅಂತರ ಉಂಟಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಅನ್ ಲಾಕ್ ರಾಘವನ ಬಗ್ಗೆ ನಿರ್ಮಾಪಕ ಮಂಜುನಾಥ್ ಹೇಳಿದ್ದಿಷ್ಟು!