ರಾಜ್ಕೋಟ್: ಇಲ್ಲಿನ ಸೌರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆಯುವ ಮೂಲಕ ತವರಿನಲ್ಲಿ ಆಡಿದ ಟೆಸ್ಟ್ ನಲ್ಲಿ 100ನೇ ಗೆಲುವು ತನ್ನದಾಗಿಸಿಕೊಂಡಿದೆ. ಇದರ ನಡುವೆ ನಾಯಕ ವಿರಾಟ್ ಕೊಹ್ಲಿ ಐಸಿಸಿ ನಿಯಮದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಹ್ಲಿ, ಪಂದ್ಯದ ವೇಳೆ ಆಟಗಾರರಿಗೆ ವಾಟರ್ ಬ್ರೇಕ್ ಅವಕಾಶವನ್ನು ವಿಕೆಟ್ ಉರುಳಿದ ವೇಳೆ ಹಾಗೂ ನಿಗದಿತ ಓವರ್ ಗಳ ಮುಕ್ತಾಯದ ವೇಳೆ ಅಂಪೈರ್ ನೀಡುವ ಸೂಚನೆ ಮೇರೆಗೆ ಮಾತ್ರ ಪಡೆಯಲು ಐಸಿಸಿ ಅವಕಾಶ ಕಲ್ಪಿಸಿದೆ. ಆದರೆ ಕೆಲ ಪಂದ್ಯಗಳ ವೇಳೆ ಅಧಿಕ ತಾಪಮಾನವಿದ್ದರೂ ಬ್ಯಾಟ್ಸ್ ಮನ್ಗಳಿಗೆ ಹೆಚ್ಚಿನ ಬ್ರೇಕ್ ಪಡೆಯಲು ಅವಕಾಶವಿಲ್ಲ. ಅದ್ದರಿಂದ ಈ ನಿಯಮವನ್ನು ಬದಲಿಸಬೇಕು ಎಂದು ಕೊಹ್ಲಿ ತಿಳಿಸಿದ್ದಾರೆ.
ಬ್ಯಾಟ್ಸ್ ಮನ್ 40 ರಿಂದ 45 ನಿಮಿಷಗಳ ಅಂತರದಲ್ಲಿ ಅಂಪೈರ್ ಗಳ ಅನುಮತಿ ಮೇರೆಗೆ ಮಾತ್ರ ವಾಟರ್ ಬ್ರೇಕ್ ಪಡೆಯಲು ಅವಕಾಶವಿದೆ. ಇದರಿಂದ ಈ ಪಂದ್ಯದ ವೇಳೆಯೂ ಎರಡು ತಂಡದ ಆಟಗಾರರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಈ ಕುರಿತು ಐಸಿಸಿ ಗಮನಹರಿಸಿ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ತಮ್ಮ ಪಾಕೆಟ್ನಲ್ಲಿ ವಾಟರ್ ಬಾಟಲ್ ತೆಗೆದುಕೊಂಡು ಬಂದ ಘಟನೆಯನ್ನು ಇಲ್ಲಿ ನೆನಪು ಮಾಡಬಹುದಾಗಿದೆ. ಪಂದ್ಯದ ನಡುವೆ ವಿರಾಮ ಇಲ್ಲದಿದ್ದರೂ ನೀರಿನ ಬಾಟಲಿ ತಂದು ನೀರು ಕುಡಿದ ಚೇತೇಶ್ವರ ಪೂಜಾರ ಅವರನ್ನು ನೋಡಿ ಪ್ರೇಕ್ಷಕರು ಕ್ಷಣ ಕಾಲ ಅಚ್ಚರಿಗೊಂಡಿದ್ದರು. ಈ ವಿಡಿಯೋವನ್ನು ಬಿಸಿಸಿಐ ಕೂಡ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://twitter.com/KabaliOf/status/1047725468076531712