ಮಂಡ್ಯ: ಮಂಡ್ಯ (Mandya) ಜಿಲ್ಲೆಯ ಮದ್ದೂರು (Maddur) ತಾಲೂಕಿನ ಸೋಮನಹಳ್ಳಿಯಲ್ಲಿ (Somanahalli) ಇಂದು (ಡಿ.11) ಮಾಜಿ ಸಿಎಂ ಎಸ್ಎಂ ಕೃಷ್ಣ (SM Krishna) ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಎಸ್ಎಂಕೆ ಅವರ ಇಷ್ಟದ ಸ್ಥಳ ಸೋಮನಹಳ್ಳಿ ಹೊರವಲಯದ ಕಾಫಿ ಡೇ (Cafe Coffee Day) ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು ಸಂಜೆ 4 ಗಂಟೆಯ ನಂತರ ಅಂತ್ಯಸಂಸ್ಕಾರ ನಡೆಯಲಿದೆ.ಇದನ್ನೂ ಓದಿ: ಯಾರನ್ನೂ ದ್ವೇಷಿಸಲಿಲ್ಲ – ಎಸ್.ಎಂ ಕೃಷ್ಣ ಅಗಲಿಕೆಯ ಕುರಿತು ನೋವು ಹಂಚಿಕೊಂಡ ನಟಿ ರಮ್ಯಾ
ಕೆಫೆ ಡೇ ಅವರಣದಲ್ಲಿಯೇ ಅಂತ್ಯಸಂಸ್ಕಾರ ಯಾಕೆ?
ಎಸ್ಎಂ ಕೃಷ್ಣ ಅವರ ಮೂಲ ಮನೆ ಸೋಮನಹಳ್ಳಿ ಒಳಗಡೆ ಇದೆ. ಕೃಷ್ಣ ಅವರು ರಾಜ್ಯ ಸಚಿವರಾಗಿದ್ದ ವೇಳೆ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದು ಗೆಸ್ಟ್ ಹೌಸ್ ನಿರ್ಮಿಸಿದ್ದರು.
ಬೆಂಗಳೂರಿನಲ್ಲಿ (Bengaluru) ನೆಲೆಸಿದ್ದ ಕಾರಣ ಈ ಮನೆಯನ್ನು ಹೆಚ್ಚಾಗಿ ಕೃಷ್ಣ ಬಳಸುತ್ತಿರಲಿಲ್ಲ. ಆದರೆ ಆ ಮನೆಯ ಒಂದು ಕೋಣೆ ಎಸ್ಎಂಕೆ ಅವರ ನೆಚ್ಚಿನ ಜಾಗವಾಗಿತ್ತು. ಮಂಡ್ಯ, ಮೈಸೂರಿಗೆ ಭೇಟಿ ಕೊಟ್ಟಾಗ ಇದೇ ಮನೆಗೆ ಬಂದು ಆ ಕೋಣೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು.
ಅದೇ ನೆಚ್ಚಿನ ಮನೆಯನ್ನು ತಮ್ಮ ಅಳಿಯ ಸಿದ್ದಾರ್ಥ ಅವರಿಗೆ ಕಾಫಿ ಡೇಗಾಗಿ ಬಿಟ್ಟುಕೊಟ್ಟಿದ್ದರು. ಕಾಫಿ ಡೇಗೆ ನವೀಕರಣ ಮಾಡಿದ್ದರೂ ಕೃಷ್ಣ ಅವರ ಪ್ರೀತಿಯ ಕೊಠಡಿಯನ್ನು ಅವರಿಗಾಗಿಯೇ ಬಿಡಲಾಗಿತ್ತು. ಮೈಸೂರು, ಮಂಡ್ಯ ಕಡೆಗೆ ಹೋದಾಗ ಕಾಫಿ ಡೇಯಲ್ಲಿರುವ ಆ ಒಂದು ಕೋಣೆಯಲ್ಲಿ ಕಾಲ ಕಳೆದು ಬಳಿಕ ಮನೆಗೆ ತೆರಳುತ್ತಿದ್ದರು. ಇದೀಗ ಅದೇ ಕಾಫಿ ಡೇ ಆವರಣದಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಜಿಲ್ಲಾಡಳಿತ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಸಿದೆ.ಇದನ್ನೂ ಓದಿ: ಯುದ್ಧಪೀಡಿತ ಸಿರಿಯಾದಿಂದ 75 ಭಾರತೀಯರು ಸ್ಥಳಾಂತರ