– ಮುಂದಿನ ಸಿಎಂ ʻಪರಂʼ ಅಭಿಮಾನಿಗಳ ಘೋಷಣೆ
ಚಿಕ್ಕಮಗಳೂರು: ಐದು ವರ್ಷ ಸಿದ್ದರಾಮಯ್ಯ (Siddaramaiah) ಅವರು ಯಾಕೆ ಸಿಎಂ ಆಗಿರಬಾರದು ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂಬ ಯತೀಂದ್ರ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದರೆ ಅದು ಸಂತೋಷ. ರಾಜ್ಯಕ್ಕೆ ಸದ್ಯ ಒಂದು ಸ್ಥಿರವಾದ ಆಡಳಿತ ನೀಡುತ್ತಿರುವ ಸರ್ಕಾರದ ಅವಶ್ಯಕತೆಯಿದ್ದು, ಸಿದ್ದರಾಮಯ್ಯನವರು ಅಂತಹ ಆಡಳಿತವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಹೀಗಿರುವಾಗ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು. ಇದನ್ನೂ ಓದಿ: ಹಿಟ್ & ರನ್ಗೆ ವ್ಯಕ್ತಿ ಬಲಿ – 11 ಗಂಟೆಗಳ ಕಾಲ ರಸ್ತೆಯಲ್ಲೇ ಬಿದ್ದಿದ್ದ ಶವ!
ನಾಯಕತ್ವದ ಬಗ್ಗೆ ಕಾರ್ಯಕರ್ತರ ಆಶಯಗಳ ಕುರಿತು ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ನನಗೆ ಅವರವರದ್ದೇ ಆದ ಬೆಂಬಲಿಗರು ಮತ್ತು ಕಾರ್ಯಕರ್ತರಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತ ತನ್ನ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವುದು ಸಹಜ. ಆದರೆ, ಕೇವಲ ಕಾರ್ಯಕರ್ತರು ಹೇಳಿದ ತಕ್ಷಣ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಹೈಕಮಾಂಡ್ ಎಂಬ ವ್ಯವಸ್ಥೆಯಿದೆ. ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ತಪ್ಪೇನಿದೆ. ಹೈಕಮಾಂಡ್ ಒಪ್ಪಿಗೆ ನೀಡಿದ ಮೇಲೆ ಆ ವಿಷಯ ಅಲ್ಲಿಗೆ ಮುಗಿಯಿತು ಎಂದರು.
ಪವರ್ ಶೇರಿಂಗ್ ಬಗ್ಗೆ ಏನೇ ಚರ್ಚೆಗಳು ನಡೆಯುತ್ತಿದ್ದರೂ ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಈ ನಾಯಕತ್ವದ ಗೊಂದಲಗಳು ಸರ್ಕಾರದ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಭಾಗವಹಿಸಲು ಜಿಲ್ಲೆಯ ಖಾಂಡ್ಯಕ್ಕೆ ಆಗಮಿಸಿದ ಸಚಿವರನ್ನು ಚಿಕ್ಕಮಗಳೂರು ನಗರದ ಆರಂಭದ ಹಿರೇಮಗಳೂರು ಸರ್ಕಲ್ನಲ್ಲಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ರು. ಈ ವೇಳೆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಒಕ್ಕೊರಲಿನಿಂದ ಮುಂದಿನ ಮುಖ್ಯಮಂತ್ರಿ ಜಿ.ಪರಮೇಶ್ವರ್ ಎಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಅವರ ನಂತರ ಮುಂದಿನ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರೇ ಆಗಬೇಕು ಎಂದು ಆಗ್ರಹಿಸಿ ಜೈಕಾರ ಹಾಕಿದರು. ಸಿದ್ದರಾಮಯ್ಯ ಬಳಿಕ ಪರಮೇಶ್ವರ್ ರವರೇ ಮುಖ್ಯಮಂತ್ರಿ ಆಗಬೇಕು, ಅದಕ್ಕೆ ಹೈಕಮಾಂಡ್ ಒಪ್ಪಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರದ ಕುತಂತ್ರ ವಿರೋಧಿಸಿ: ರೈತರಿಗೆ ಸಿಎಂ ಕರೆ


