ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ, ಒಳ್ಳೆ ಕೆಲಸ ಮಾಡುವ ವ್ಯಕ್ತಿ ಮತ್ತೆ ಸಿಎಂ ಯಾಕೆ ಆಗಬಾರದು ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ಸಂಬಂಧಿ ಪ್ರೊ.ಕೆ.ಎಸ್. ರಂಗಪ್ಪ ಪ್ರಶ್ನೆ ಮಾಡಿದ್ದಾರೆ.
ಇಂದು ಸಿದ್ದರಾಮಯ್ಯ ಅವರು ರಂಗಪ್ಪ ಅವರ ಮನೆಗೆ ಭೇಟಿ ನೀಡಿದ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಮತ್ತು ಸಿದ್ದರಾಮಯ್ಯ ಬಹಳ ವರ್ಷದ ಸ್ನೇಹಿತರು, ಮನೆಗೆ ತಿಂಡಿಗೆ ಆಹ್ವಾನ ಮಾಡಿದ್ದೆ ಬಂದಿದ್ದರು. ಅವರಿಗೆ ಅಪಾರ ಜ್ಞಾನ ಮತ್ತು ಆಡಳಿತ ಚತರುತೆ ಇದೆ. ಅವರು ಮತ್ತೆ ಸಿಎಂ ಆಗಬೇಕು ಎಂದು ಹೇಳಿದರು.
ಇದೇ ವೇಳೆ ಜಿಡಿಎಸ್ ಪಕ್ಷದ ಬಗ್ಗೆ ಮಾತನಾಡಿದ ರಂಗಪ್ಪ, ನಾನು ಸೋತ ಮೇಲೆ ಜೆಡಿಎಸ್ಗೆ ನನ್ನ ಅವಶ್ಯಕತೆ ಇಲ್ಲ. ನನ್ನ ಅವಶ್ಯಕತೆ ಇಲ್ಲದ ಮೇಲೆ ಅಲ್ಲಿಗೆ ಹೋಗಿ ಏನೂ ಮಾಡಲಿ? ನನ್ನನ್ನು ಯಾವುದೇ ಸಭೆಗೂ ಅವರು ಕರೆದಿಲ್ಲ. ಕರೆಯದಿದ್ದ ಮೇಲೆ ಹೋಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಈ ವಿಚಾರದ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ನಾನು ರಂಗಪ್ಪ ಒಳ್ಳೆಯ ಸ್ನೇಹಿತರು, ಅವರು ತಿಂಡಿಗೆ ಬಾ ಎಂದು ಕರೆದಿದ್ದರು. ಅದಕ್ಕೆ ಬಂದಿದ್ದೆ. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದ್ದರು.