ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ಆಪ್ತರ ನಡುವಿನ ಮಾತಿನ ಗುದ್ದಾಟದಲ್ಲಿ ಮಧ್ಯಪ್ರವೇಶಕ್ಕೆ ಸಿಎಂ ನಿರಾಕರಿಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಡಿಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಡಿನ್ನರ್ ಪಾಲಿಟಿಕ್ಸ್ ನೆಪದಲ್ಲಿ ಆರಂಭಗೊಂಡ ಮಾತಿನ ಕಿತ್ತಾಟ ಫೆಬ್ರವರಿಯಲ್ಲಿ ಮತ್ತಷ್ಟು ಜೋರಾಗಿದೆ.
ಸಿಎಂ ಆಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಅವರು ನೇರನೇರವಾಗಿಯೇ ಡಿಕೆಶಿಗೆ ಮಾತಿನ ಗುದ್ದು ನೀಡುತ್ತಿದ್ದಾರೆ. ಇನ್ನೊಂದು ಕಡೆ ಡಿಕೆಶಿ ಬಣದ ಶಾಸಕರು ಸಿಎಂ ಆಪ್ತ ಶಾಸಕರಿಗೆ ಮಾತಿನ ಮೂಲಕವೇ ಟಾಂಗ್ ನೀಡುವ ಕೆಲಸ ಮಾಡುತ್ತಿದ್ದಾರೆ.
ನಾವಾ? ನೀವಾ? ನೋಡೇಬಿಡೋಣ ಎಂಬಂತೆ ಈಗ ಬಹಿರಂಗ ಗುದ್ದಾಟ ಜಾಸ್ತಿಯಾಗುತ್ತಿದ್ದು ಹೈಕಮಾಂಡ್ಗೆ ತಲೆನೋವು ತಂದಿಟ್ಟಿದೆ. ಹೀಗಾಗಿ ಆಪ್ತ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರ ಬಳಿ ಪಕ್ಷದ ವಿಚಾರ ಸಂಬಂಧ ಬಹಿರಂಗ ಹೇಳಿಕೆ ನೀಡದಂತೆ ಶಾಸಕರಿಗೆ ಸೂಚಿಸಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ 150 ಕೋಟಿ ವೆಚ್ಚದಲ್ಲಿ RSS ಕಚೇರಿ ಅನಾವರಣ; ವಿಶೇಷತೆಗಳೇನು?
ಇದಕ್ಕೆ ಸಿಎಂ ಸಿದ್ದರಾಮಯ್ಯ, ಅವರವರ ನಡುವೆ ನಡೆಯುತ್ತಿರುವ ಮಾತಿನ ಸಮರದಲ್ಲಿ ನಾನು ಯಾಕೆ ಮಧ್ಯಪ್ರವೇಶಿಸಲಿ. ಇಲ್ಲಿ ನ್ಯೂಟನ್ನ ಪ್ರತಿ ಕ್ರಿಯೆ ಸಮಾನದ ಪ್ರತಿಕ್ರಿಯೆ ಇರುತ್ತದೆ ಎಂಬಂತೆ ಹೇಳಿಕೆಗಳು ಬರುತ್ತಿದೆ. ಸಂಬಂಧವೇ ಇಲ್ಲದ್ದಕ್ಕೆ ನಾನು ಯಾಕೆ ಮಧ್ಯಪ್ರವೇಶ ಮಾಡಬೇಕು? ನಾನು ಆ ಕೆಲಸ ಮಾಡುವುದಿಲ್ಲ. ಆ ರೀತಿಯ ರಾಜಕೀಯಕ್ಕೆ ಹೋಗುವುದಿಲ್ಲ ಎಂದು ತಿಳಿಸಿರುವುದಾಗಿ ಸಿಎಂ ಆಪ್ತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.