ಬೆಂಗಳೂರು: ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಸ್ಸು. ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಬಂಡಾಯದ ಬಿರುಗಾಳಿಯಿಂದ ತಾತ್ಕಾಲಿಕವಾಗಿ ಪಾರಾಗಿದೆ. ಬಂಡೆದ್ದು ಬಿಜೆಪಿಗೆ ಜಿಗಿಯಲು ಹೋಗಿದ್ದ ಶಾಸಕರು ಮತ್ತೆ ಕೈ ಪಾಳಯಕ್ಕೆ ಮರಳಿದ್ದಾರೆ.
ಕೈ ನಾಯಕರು ಮುನಿಸಿಕೊಂಡಿದ್ದ ಶಾಸಕರನ್ನು ಸಮಾಧಾನಿಸಿದ್ದು ಹೇಗೆ..? ಯಾವ ಮಾತುಗಳನ್ನಾಡಿ ಅತೃಪ್ತರು ಕಾಂಗ್ರೆಸ್ ತೆಕ್ಕೆಗೆ ವಾಪಸ್ಸಾದ್ರು ಎಂಬುದರ ಇನ್ಸೈಡ್ ಸ್ಟೋರಿ ಇಲ್ಲಿದೆ. ಕನಿಷ್ಠ 16 ಶಾಸಕರ ರಾಜೀನಾಮೆ ಕೊಟ್ಟರಷ್ಟೇ ನಮ್ಮ ಸರ್ಕಾರ ಬೀಳುತ್ತೆ, ಬಿಜೆಪಿ ಕೈಯಲ್ಲಿ ಇದೆಲ್ಲಾ ಸಾಧ್ಯನಾ…? ಎಂಬುದನ್ನು ಮನವರಿಕೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಬಿಜೆಪಿ ನಂಬಿಕೊಂಡು ಹೋಗಿ ಕೊನೆಗೂ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅಂತಾದ್ರೆ ನಿಮ್ಮ ಕ್ಷೇತ್ರದ ಅಭಿವೃದ್ಧಿಯ ಕಥೆ ಏನು..? ನಿಮ್ಮದೇ ಸರ್ಕಾರವಿದೆ, ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿ. ಬಿಜೆಪಿಯಲ್ಲೇ 104 ಮಂದಿ ಶಾಸಕರಿದ್ದು, ಅವರಲ್ಲೇ ಸ್ಥಾನಮಾನಕ್ಕಾಗಿ ಪೈಪೋಟಿಯ ಸ್ಥಿತಿ ಇದೆ. ಪಕ್ಷಕ್ಕೆ ಕೈ ಕೊಟ್ಟು ನೀವು ಬಿಜೆಪಿಗೆ ಹೋದರೆ ನಿಮಗೆ ಸೂಕ್ತ ಸ್ಥಾನಮಾನ ಸಿಗುತ್ತೆ ಅನ್ನೋದಕ್ಕೆ ಗ್ಯಾರಂಟಿ ಏನು..? ನಮ್ಮಲ್ಲಿ ಸಚಿವ ಸ್ಥಾನ ಬೇಕಾದ್ರೆ ಇನ್ನೂ ಒಂದೂವರೆ ವರ್ಷ ಕಾಯಲೇಬೇಕು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕೇಸಿಗುತ್ತೆ, 2ನೇ ಹಂತದಲ್ಲಿ ನಿಗಮ ಮಂಡಳಿಯಲ್ಲಿ ನಿಮಗೆ ಅವಕಾಶ ಕೊಡಲಾಗುತ್ತೆ ಎಂದು ಹೇಳಿ ಕಾಂಗ್ರೆಸ್ ಹಿರಿಯ ನಾಯಕರು ಮುನಿಸಿಕೊಂಡಿದ್ದ ಶಾಸಕರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದು ಇಬ್ಬರೇ ಪಕ್ಷೇತರ ಶಾಸಕರು. ಅದರಲ್ಲಿ ಒಬ್ಬರು ರಾಣೇಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್. ಅದೃಷ್ಟದ ಆಟದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರೂ ಆದರು. ಕೊಪ್ಪಳ ಜಿಲ್ಲೆಯ ಉಸ್ತುವಾರಿಯೂ ಸಿಕ್ಕಿತ್ತು. ಗೆದ್ದು ಬಂದ ಬಳಿಕ ಸಾಹೇಬ್ರು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. ಆಗೊಮ್ಮೆ ಈಗೊಮ್ಮೆ ಅನ್ನೋದನ್ನ ಬಿಟ್ಟರೆ ಮತದಾರರಿಗೆ ಇವರ ದರ್ಶನ ಭಾಗ್ಯವೇ ಆಗಿಲ್ಲ. ಈಗ ಮಂತ್ರಿ ಸ್ಥಾನ ಕೈ ತಪ್ಪಿದ್ದಕ್ಕೆ ಕ್ಷೇತ್ರವನ್ನೇ ಮರೆತು ಆ ಹೋಟೆಲ್ ಈ ಹೋಟೆಲ್ ಅಂತ ಅಲೆದಾಡ್ತಿದ್ದಾರೆ ಅಂತ ಕ್ಷೇತ್ರದ ಜನರು ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv