ಇತ್ತೀಚಿನ ದಿನಗಳಲ್ಲಿ ಅಲ್ಲ…. ಮೊದಲಿನಿಂದಲೂ ನೈನಿತಾಲ್ಗೆ ಪ್ರವಾಸಕ್ಕೆಂದು ಹೊರಡುವ ಜನರ ಸಂಖ್ಯೆ ಹೆಚ್ಚು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ನೈನಿತಾಲ್ ಸೇರಿದಂತೆ ಉತ್ತರ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಪ್ರವಾಸಿಗರನ್ನು ನಂಬಿಕೊಂಡ ಅಲ್ಲಿನ ಜನರ ಆರ್ಥಿಕ ಸ್ಥಿತಿ ಸಮಸ್ಯೆಗೀಡಾಗುತ್ತಿದೆ.
ನೈನಿತಾಲ್:
ಉತ್ತರಾಖಂಡದ (Uttarakhand) ಕುಮಾವುನ್ ಪ್ರದೇಶದಲ್ಲಿ ಕಂಡುಬರುವ ಒಂದು ಪ್ರವಾಸಿ ತಾಣವೆಂದರೆ ಅದು ನೈನಿತಾಲ್. ಇದನ್ನು ಸರೋವರಗಳ ನಗರ ಎಂದು ಕರೆಯಲಾಗುತ್ತದೆ. ಜೊತೆಗೆ ಸುಂದರವಾದ ಗಿರಿಧಾಮವನ್ನು ಇದು ಒಳಗೊಂಡಿದೆ. ಇಲ್ಲಿರುವ ಹಿಮಪರ್ವತಗಳು ಈ ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ನೈನಾದೇವಿ ದೇವಾಲಯ ದೇವಿಯ ಶಕ್ತಿಪೀಠಗಳಲ್ಲಿ ಒಂದು. ಇನ್ನೂ ನವವಿವಾಹಿತರಿಗೆ ಇದು ಹನಿಮೂನ್ಗೆ ಒಂದು ಬೆಸ್ಟ್ ಆಯ್ಕೆ ಅಂತಾನೆ ಹೇಳಬಹುದು. ನೈನಿತಾಲ್ ಸರೋವರ ಸಿಹಿ ನೀರಿನ ಸರೋವರವಾಗಿದ್ದು, ಈ ಸರೋವರದಲ್ಲಿ ದೋಣಿ ವಿಹಾರ ಒಳ್ಳೆಯ ಅನುಭವವನ್ನು ನೀಡುತ್ತದೆ. ಈ ಸರೋವರ ಹಚ್ಚಹಸಿರಿನ ಪರ್ವತ ಶ್ರೇಣಿಗಳಿಂದ ಆವೃತ್ತವಾಗಿದ್ದು, ಅರ್ಧಚಂದ್ರನಂತೆ ಹರಿದು ಹೋಗುತ್ತದೆ. ನೈನಿತಾಲ್ನಲ್ಲಿ ಔಲಿ ಎಂಬ ತಾಣ, ನಂದಾದೇವಿ ರಾಷ್ಟ್ರೀಯ ಉದ್ಯಾನವನ, ಕೌಸನಿ, ಬಿನ್ಸರ್ ವನ್ಯಜೀವಿಧಾಮ, ಅಲ್ಮೋರಾ ಹೀಗೆ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಬಹುದು.
ನೈನಿತಾಲ್ಗೆ ಹೋಗುವುದಾದರೆ ಉತ್ತರಾಖಂಡದ ಪಂತನಗರದ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಟ್ಯಾಕ್ಸಿಗಳ ಮೂಲಕ ತಲುಪಬಹುದು. ಇನ್ನೂ ರೈಲಿನ ಮೂಲಕ ಹೋಗುವುದಾದರೆ ಕತ್ಗೊಡಮ್ ರೈಲ್ವೆ ನಿಲ್ದಾಣಕ್ಕಿಳಿದು ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು. ಇನ್ನೂ ದೆಹಲಿಯಿಂದ 6-7 ಗಂಟೆಗಳಲ್ಲಿ ಕಾರು ಅಥವಾ ಇನ್ನಿತರ ವಾಹನಗಳ ಮೂಲಕ ತಲುಪಬಹುದು. ಇಂತಹ ಅದ್ಭುತ ತಾಣಗಳನ್ನು ಒಳಗೊಂಡಿರುವ ನೈನಿತಾಲ್ಗೆ ಬೇಸಿಗೆ ತಿಂಗಳಲ್ಲಿ (ಮೇ-ಜೂನ್) ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಈ ಕುರಿತು ನೈನಿತಾಲ್ ಅಸೋಸಿಯೇಷನ್ನ ಅಧ್ಯಕ್ಷ ದಿಗ್ವಿಜಯ ಸಿಂಗ್ ಮಿಷ್ತ ಮಾತನಾಡಿ, ಈ ಬಾರಿ ಇಲ್ಲಿನ ಹೋಟೆಲ್ ಮತ್ತು ರೆಸಾರ್ಟ್ ಬುಕ್ಕಿಂಗ್ಗಳಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡ 90ರಷ್ಟು ಕುಸಿತ ಕಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಅಡ್ವಾನ್ಸ್ ಬುಕಿಂಗ್ ಮಾಡಿದ್ದ ಪ್ರವಾಸಿಗರು ತಮ್ಮ ಬುಕಿಂಗ್ಗಳನ್ನು ರದ್ದುಗೊಳಿಸಿದ್ದಾರೆ. ಈ ಬಾರಿ ಕುಸಿತ ಕಂಡ ಹಾಗೆ ಈತನಕ ನೈನಿತಾಲ್ನಲ್ಲಿ ಯಾವತ್ತೂ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.
ಹೌದು, ಇದಕ್ಕೆಲ್ಲ ಒಂದು ಭೀಕರ ಕಾರಣವಿದೆ. ಈ ಬಾರಿ ಏ.22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ಹಿಂದೂಗಳ ನರಮೇಧದಲ್ಲಿ 26 ನಾಗರಿಕರು ಸಾವನ್ನಪ್ಪಿದರು. ಇದು ದೇಶಾದ್ಯಂತ ಭಯದ ವಾತಾವರಣ ಸೃಷ್ಟಿಸಿತ್ತು. ಜೊತೆಗೆ ಈ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಹೀಗಾಗಿ ಪ್ರಾಣ ಭಯದಿಂದಾಗಿ ಈ ಕುಸಿತ ಉಂಟಾಗಿದೆ. ಇದೇ ಮೇ 1ರಂದು ನೈನಿತಾಲ್ನಲ್ಲಿ 12 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧರೊಬ್ಬರು ಹಲ್ಲೆ ನಡೆಸಿದ್ದರು. ಈ ಕಾರಣದಿಂದಾಗಿ ಅಲ್ಲಿ ಕೋಮುಗಲಭೆ ಉಂಟಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಪ್ರತಿಭಟನೆಗಳು ಹಾಗೂ ಕೃತ್ಯಗಳಿಗೆ ಕಾರಣವಾಯಿತು. ಈ ಪ್ರತಿಭಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ, ಭಯ ಸೃಷ್ಟಿಸಿತ್ತು. ಹೀಗಾಗಿ ಈ ಕುಸಿತ ಕಂಡು ಬಂದಿದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೈನಿತಾಲ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದರೂ, ಕೆಲವು ಕಾರಣಗಳಿಂದ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ನೈನಿತಾಲ್ಗೆ ತೆರಳಲು ಸುಮಾರು 10 ಕಿ.ಮೀ ದೂರದಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶವಿದೆ. ಹೀಗಾಗಿ ಅನೇಕರಿಗೆ ಇದು ಅನಾನುಕೂಲತೆ ಉಂಟು ಮಾಡಿದೆ. ಸರ್ಕಾರಿ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕ ದಿನಕ್ಕೆ 130 ರೂ.ಯಿಂದ 500 ರೂ.ಗೆ ಏರಿಕೆಯಾಗಿದೆ. ಜೊತೆಗೆ ಟೋಲ್ಗಳನ್ನು ಹೆಚ್ಚಿಸಲಾಗಿದೆ. ಹೀಗಾಗಿ ನೈನಿತಾಲ್ ಪ್ರಯಾಣ ಹಲವು ಸಮಸ್ಯೆಗಳಿಂದ ಕೂಡಿದೆ. ಇದೆಲ್ಲಾ ಕಾರಣಗಳಿಂದಾಗಿ ಪ್ರವಾಸಿಗರು ಕಾಶ್ಮೀರದ ಹಲವು ಪ್ರವಾಸಿ ತಾಣಗಳು ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಿಗೆ ಪ್ರವಾಸಕ್ಕೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ.