ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿರುವ ಗ್ಯಾಂಗ್ನ ಮುಖ್ಯಸ್ಥ ಲಾರೆನ್ಸ್ ಬಿಷ್ಣೋಯ್ನನ್ನು (Lawrence Bishnoi) ಗುಜರಾತ್ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಆತನ ಹೆಸರು ಹೈ-ಪ್ರೊಫೈಲ್ ಪ್ರಕರಣಗಳಲ್ಲಿ ಕೇಳಿಬರುತ್ತಿದ್ದು ಆತನನ್ನು ಕಸ್ಟಡಿಗೆ ಪಡೆಯುವಲ್ಲಿ ಮುಂಬೈ ಪೊಲೀಸರು (Mumbai Police) ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಈ ವರ್ಷದ ಏಪ್ರಿಲ್ನಲ್ಲಿ ಸಲ್ಮಾನ್ ಖಾನ್ (Salman Khan) ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಆತನ ಗ್ಯಾಂಗ್ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ವೇಳೆ ಮುಂಬೈ ಪೊಲೀಸರು ಅನೇಕ ಅರ್ಜಿಗಳನ್ನು ಸಲ್ಲಿಸಿ ಆತನನ್ನು ಕಸ್ಟಡಿಗೆ ಪಡೆಯಲು ಯತ್ನಿಸಿದ್ದರೂ ಸಹ ಪೊಲೀಸರ ಯತ್ನ ಫಲಿಸಿರಲಿಲ್ಲ. ಇನ್ನೂ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯ ಹೊಣೆಯನ್ನೂ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.
ಇದೀಗ ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್ಸಿಪಿ ನಾಯಕ ಬಾಬಾ ಸಿದ್ದಿಕಿಯವರ ಹತ್ಯೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಈಗಾಗಲೇ ಬಂಧಿತ ಶೂಟರ್ಗಳು ಬಿಷ್ಣೋಯ್ ಗ್ಯಾಂಗ್ನವರು ಎಂದು ಹೇಳಿಕೊಂಡಿದ್ದಾರೆ. ಮುಂಬೈ ಪೊಲೀಸರು ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆತನ ಗ್ಯಾಂಗ್ನಲ್ಲಿ ಸುಮಾರು 700 ಜನ ಶೂಟರ್ಗಳಿದ್ದಾರೆ. ಅಲ್ಲದೇ ಸಣ್ಣ ಮತ್ತು ದೊಡ್ಡ ಕ್ರಿಮಿನಲ್ಗಳ ಜೊತೆ ಆತ ಸಂಪರ್ಕದಲ್ಲಿದ್ದಾನೆ ಎಂಬ ಅಂಶವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಬಿಷ್ಣೋಯ್ನನ್ನು ಅಹಮದಾಬಾದ್ನ ಸಬರಮತಿ ಕಾರಾಗೃಹದಿಂದ ವರ್ಗಾಯಿಸುವುದನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿ ಆದೇಶ ಹೊರಡಿಸಿದೆ. ಇದು ಆತನನ್ನು ಮುಂಬೈ ಪೊಲೀಸರು ಕಸ್ಟಡಿಗೆ ಪಡೆಯದಂತೆ ತಡೆದಿದೆ. ಈ ಆದೇಶವು ಆರಂಭದಲ್ಲಿ ಆಗಸ್ಟ್ 2024 ರವರೆಗೆ ಜಾರಿಯಲ್ಲಿತ್ತು. ಈಗ ಆ ಆದೇಶವನ್ನು ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ.
ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಣೋಯ್ನನ್ನು ಆಗಸ್ಟ್ 2023 ರಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ಸಬರಮತಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಈತನ ಬಂಧನದ ಬಳಿಕ ವಿದೇಶದಲ್ಲಿ ನೆಲೆಸಿರುವ ಮೂವರು ವಾಂಟೆಡ್ ದರೋಡೆಕೋರರು ಈತನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆತನ ಸಹೋದರ ಅನ್ಮೋಲ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದರ್ ಎಂಬವರು ಗ್ಯಾಂಗ್ನ್ನು ಮುನ್ನಡೆಸುತ್ತಿದ್ದಾರೆ ಎನ್ನಲಾಗಿದೆ.