ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಮಹಾಭಿಯೋಗಕ್ಕೆ ಅವಕಾಶ ಕಲ್ಪಿಸುವಂತೆ ಸಂಸತ್ ನ ವಿರೋಧ ಪಕ್ಷಗಳ ಸದಸ್ಯರ ನಿಯೋಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ ಅವರಿಗೆ ಮನವಿ ಸಲ್ಲಿಸಿವೆ.
ಕಾಂಗ್ರೆಸ್ ಸೇರಿದಂತೆ 71 ಸದಸ್ಯರು ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗಕ್ಕೆ ಅವಕಾಶ ನೀಡುವಂತೆ ಪತ್ರ ಬರೆದು ಸಹಿ ಮಾಡಿದ್ದಾರೆ. ಆದರೆ ಈ ಪತ್ರಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹಿ ಹಾಕಿರಲಿಲ್ಲ. ಮಾಜಿ ಪ್ರಧಾನಿಗಳು ಮಹತ್ವದ ಪತ್ರಕ್ಕೆ ಸಹಿ ಮಾಡಿಲ್ಲ ಯಾಕೆ ಎನ್ನುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮನಮೋಹನ್ ಸಿಂಗ್ ದೇಶದ ಮಾಜಿ ಪ್ರಧಾನಿಗಳಾಗಿರುವ ಕಾರಣ ಅವರನ್ನು ಈ ವಿಚಾರದಿಂದ ಅಂತರ ಕಾಯ್ದು ಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪರಾಷ್ಟ್ರಪತಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ಕಳೆದ ಜನವರಿಯಲ್ಲಿ ನಡೆಸಿದ್ದ ಮಾಧ್ಯಮ ಸುದ್ದಿಗೋಷ್ಠಿಯಲ್ಲಿನ ಅಂಶಗಳನ್ನು ಉಲ್ಲೇಖಿಸಿರುವುದಾಗಿ ಸಿಬಲ್ ಹೇಳಿದರು. ಉಪರಾಷ್ಟ್ರ ಪತಿಗಳಿಗೆ ಸಲ್ಲಿಸಲಾಗಿರುವ ಈ ಪತ್ರಕ್ಕೆ ಸಂಸತ್ ನ ವಿರೋಧ ಪಕ್ಷಗಳಾದ ಕಾಂಗ್ರೆಸ್, ಎನ್ಸಿಪಿ, ಸಿಪಿಎಂ, ಸಿಪಿಐ, ಎಸ್ಪಿ, ಬಿಎಸ್ಪಿ ಮತ್ತು ಮುಸ್ಲಿಂ ಲೀಗ್ ಪಕ್ಷಗಳ ಒಟ್ಟು 71 ಸಂಸದರು ಸಹಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಗುರುವಾರ ನ್ಯಾ. ಬಿಎಚ್ ಲೋಯಾ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಮಾಡಿದ್ದ ಮನವಿಯನ್ನು ನಿರಾಕರಿಸಿದ ಬಳಿಕ ವಿರೋಧ ಪಕ್ಷಗಳು ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗಕ್ಕೆ ಮನವಿ ಸಲ್ಲಿಸಿದೆ.
ವಿರೋಧಿ ಪಕ್ಷಗಗಳ ಸದಸ್ಯರು ಸಲ್ಲಿಸಿರುವ ಪತ್ರವನ್ನು ಸ್ವೀಕರಿಸಿರುವ ಉಪರಾಷ್ಟ್ರಪತಿಗಳು ಮುಂದಿನ ಕ್ರಮ ನಡೆಸಲು ಕಾನೂನು ಸಲಹೆಯ ಮೊರೆ ಹೋಗಿದ್ದಾರೆ ಎನ್ನಲಾಗಿದೆ.