ಏರುತ್ತಿರುವ ಸಮುದ್ರ ಮಟ್ಟ ಮತ್ತು ಹವಾಮಾನ ಬಿಕ್ಕಟ್ಟನ್ನು ಹೆಚ್ಚಾಗಿ ಜಗತ್ತಿನ ಕಡಲ ತೀರದ ಪ್ರದೇಶಗಳು ಎದುರಿಸುತ್ತಿವೆ. ಅದೇ ರೀತಿ ಕೇರಳದ ಕೊಚ್ಚಿಯ ಕರಾವಳಿ ಉಪನಗರಗಳು ಮತ್ತು ಹಳ್ಳಿಗಳು ಹಲವು ವರ್ಷಗಳಿಂದ ನಿಧಾನವಾಗಿ ನಿರಂತರ ಕಡಲ ಉಬ್ಬರವಿಳಿತದ ಪ್ರವಾಹವನ್ನು ಎದುರಿಸುತ್ತಿವೆ. ಇದರಿಂದ ಜನರಿಗೆ ಉಂಟಾಗುವ ಸಮಸ್ಯೆ ಪರಿಗಣಿಸಿ ದೇಶದಲ್ಲಿ ಮೊದಲ ಬಾರಿಗೆ ಉಬ್ಬರವಿಳಿತದ ಪ್ರವಾಹವನ್ನು ರಾಜ್ಯ ವಿಪತ್ತು ಎಂದು ಕೇರಳ ಘೋಷಿಸಿದೆ. ಇದರಿಂದ ಪ್ರಕೃತಿ ವಿಕೋಪಕ್ಕೆ ಸಿಗುವ ಪರಿಹಾರ ಕಡಲ ಪ್ರವಾಹಕ್ಕೂ ಸಿಗಲಿದೆ.

ಕಡಲ ಪ್ರವಾಹಕ್ಕೆ ಕಾರಣವೇನು?
ಸಾಗರಗಳು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಹೆಚ್ಚುವರಿ ಶಾಖದ 90%ಗಿಂತ ಹೆಚ್ಚಿನದನ್ನು ಹೀರಿಕೊಳ್ಳುತ್ತವೆ. ಇದು ಹಿಮ ಕರಗುವಿಕೆ ಕಾರಣವಾಗುತ್ತಿದೆ. ಅಲ್ಲದೇ ಸಮುದ್ರ ಮಟ್ಟ ವರ್ಷಕ್ಕೆ ಸುಮಾರು 5 ಮಿಲಿಮೀಟರ್ಗಳಷ್ಟು ಏರುತ್ತಿದೆ. ಇದು ಕಡಲ ಉಬ್ಬರವಿಳಿತದ ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಭಾರತ, ಬಾಂಗ್ಲಾದೇಶ ಮತ್ತು ಚೀನಾ ಹೆಚ್ಚಿನ ಹೊಡೆತ ತಿನ್ನುತ್ತಿವೆ.
15 ಕಿಮೀ ನೀರು ನುಗ್ಗೋ ಭೀತಿ!
ಉಬ್ಬರವಿಳಿತ ಹೆಚ್ಚಾದಾಗ ಕೇರಳದ ಪುಥೇನ್ವೇಲಿಕ್ಕರ, ಚೆಲ್ಲಾನಂ, ಕುಂಬಳಂಗಿ ಮತ್ತು ಪರವೂರು ಮುಂತಾದ ಪ್ರದೇಶಗಳಲ್ಲಿ ಹೆಚ್ಚಿನ ಹಾನಿಗಳು ಸಂಭವಿಸುತ್ತಿವೆ. ಹಲವೆಡೆ ಸಮುದ್ರದ ನೀರು ಮನೆಗಳು, ಅಂಗಳಗಳು ಮತ್ತು ಕೃಷಿಭೂಮಿಗೆ ನುಗ್ಗುತ್ತದೆ. ಒಳನಾಡಿನ 15 ಕಿಲೋಮೀಟರ್ಗಳವರೆಗೆ ಸಮುದ್ರದ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಸಹ ವರದಿಯಾಗಿದೆ.

ಮಳೆಗಾಲಕ್ಕೂ ಮುನ್ನವೇ ಪ್ರವಾಹ!
2012 ರಿಂದ ಕೇರಳದ ಎರ್ನಾಕುಲಂ ಜಿಲ್ಲೆಯ ಕೆಲವು ಭಾಗಗಳು ಉಬ್ಬರವಿಳಿತ ಪ್ರವಾಹದ ಪರಿಣಾಮವನ್ನು ಎದುರಿಸುತ್ತಿವೆ. ಕೊಚ್ಚಿಯ ಈಕ್ವಿನಾಕ್ಟ್ ಸಂಸ್ಥೆ ಅಧ್ಯಯನದ ಪ್ರಕಾರ ಮಾನ್ಸೂನ್ ಪ್ರಾರಂಭವಾಗುವ ಬಹಳ ಮೊದಲೇ, ಅಂದರೆ ನವೆಂಬರ್ ನಿಂದ ಜೂನ್ ವರೆಗೆ 20,000 ಕ್ಕೂ ಹೆಚ್ಚು ಮನೆಗಳಿಗೆ ಈ ಪ್ರವಾಹದಿಂದ ಹಾನಿಯಾಗುತ್ತಿದೆ ಎಂದು ಅಂದಾಜಿಸಿದೆ. ಇದರಿಂದ ಜನರಿಗೆ ಉಂಟಾಗುವ ನಷ್ಟಗಳನ್ನು ಭರಿಸಲು ಇಲ್ಲಿಯವರೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ.

ಪರಿಹಾರ – 17 ಗ್ರಾಮಗಳ ಹೋರಾಟದ ಫಲ
ಜನವರಿ 30, 2026 ರಂದು, ಕೇರಳ ಸರ್ಕಾರವು ಕರಾವಳಿಯ ಉಬ್ಬರವಿಳಿತದ ಪ್ರವಾಹವನ್ನು (Coastal High-Tide Flooding/Sea Incursion) ಅಧಿಕೃತವಾಗಿ ರಾಜ್ಯ ವಿಪತ್ತು ಎಂದು ಘೋಷಿಸಿದೆ. ಈ ನಿರ್ಧಾರದಿಂದಾಗಿ, ಸಮುದ್ರದ ಅಲೆಗಳು ಜನವಸತಿ ಪ್ರದೇಶಗಳು, ಮನೆಗಳು ಮತ್ತು ಕೃಷಿ ಭೂಮಿಗೆ ಆಗುವ ಹಾನಿಗೆ ಜನ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (SDRF) ಪರಿಹಾರ ಪಡೆಯಬಹುದಾಗಿದೆ. ಭಾರತದಲ್ಲೇ ಮೊದಲ ಬಾರಿಗೆ ಕರಾವಳಿ ಉಬ್ಬರವಿಳಿತದ ಪ್ರವಾಹವನ್ನು ರಾಜ್ಯ ವಿಪತ್ತು ಎಂದು ಘೋಷಿಸಿದ ಹೆಗ್ಗಳಿಕೆ ಕೇರಳ ಸರ್ಕಾರದ್ದು.
ಈ ಕ್ರಮವು 17 ಗ್ರಾಮಸಭೆಗಳು ಸಲ್ಲಿಸಿದ ಅರ್ಜಿಗಳು ಮತ್ತು ಸಮುದಾಯಗಳ ಒತ್ತಡದ ಫಲಿತಾಂಶವಾಗಿದೆ. ಈ ಹೊಸ ನಿಯಮದಡಿ, ಮಳೆ, ಉಬ್ಬರವಿಳಿತ ಅಥವಾ ಅಲೆಗಳಿಂದ ಉಂಟಾಗುವ ಪ್ರವಾಹವಾಗಿದ್ದರೂ, ಬಾಧಿತರಿಗೆ ಪರಿಹಾರ ಲಭ್ಯವಾಗಲಿದೆ.

ಉಬ್ಬರವಿಳಿತದ ಪ್ರವಾಹ
ಉಬ್ಬರವಿಳಿತದ ಪ್ರವಾಹಗಳು ಚಂದ್ರ ಮತ್ತು ಸೂರ್ಯನ ಗುರುತ್ವಾಕರ್ಷಣೆಯಿಂದ ಉಂಟಾಗುವ ಸಾಗರ ನೀರಿನ ಆವರ್ತಕ ಏರಿಳಿತಗಳಾಗಿವೆ. ಇವು ದಿನಕ್ಕೆ ಎರಡು ಬಾರಿ ಸಂಭವಿಸುವ (ಅರೆ-ದೈನಿಕ) ನೀರಿನ ಹರಿವಿನ ಬದಲಾವಣೆಗಳಾಗಿದ್ದು, ಕರಾವಳಿ ಸವೆತ, ಕೆಸರು ಸಾಗಣೆ ಮತ್ತು ಮ್ಯಾಂಗ್ರೋವ್ ಕಾಡುಗಳ ಜೀವನ ಚಕ್ರಕ್ಕೆ ಅತ್ಯಗತ್ಯ. ಉಬ್ಬರವಿಳಿತದ ತೀವ್ರತೆ (ರಾಜ ಉಬ್ಬರ) ತಗ್ಗು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ಹೆಚ್ಚಾಗಿ ಹುಣ್ಣಿಮೆ ಹಾಗೂ ಅಮಾವಾಸ್ಯೆಯ ಸಮಯದಲ್ಲಿ ಎತ್ತರದ ಉಬ್ಬರವಿಳಿತವು ಕರಾವಳಿ ತಗ್ಗು ಪ್ರದೇಶಗಳಲ್ಲಿ ಪ್ರವಾಹವನ್ನು ಉಂಟುಮಾಡುತ್ತದೆ. ಇದರಿಂದ ಉಪ್ಪು ನೀರು ಕೃಷಿ ಭೂಮಿ ಮತ್ತು ವಸತಿ ಪ್ರದೇಶಗಳಿಗೆ ನುಗ್ಗಿ ಹಾನಿ ಉಂಟುಮಾಡುತ್ತದೆ. ಪ್ರವಾಹದ ವೇಗದಿಂದಾಗಿ ಕಡಲ ತೀರದ ಮಣ್ಣು ಸವೆದು ಹೋಗುತ್ತದೆ. ಇದಕ್ಕೆ ಪರಿಹಾರವಾಗಿ ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ವಿಶ್ವದೆಲ್ಲೆಡೆ ಚರ್ಚೆ ನಡೆಯುತ್ತಿದೆ.

