Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೆನಡಾ ಪ್ರಧಾನಿ ಸ್ಥಾನಕ್ಕೆ ಟ್ರುಡೊ ರಾಜೀನಾಮೆ – ಭಾರತದ ಇಂಪ್ಯಾಕ್ಟ್ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕೆನಡಾ ಪ್ರಧಾನಿ ಸ್ಥಾನಕ್ಕೆ ಟ್ರುಡೊ ರಾಜೀನಾಮೆ – ಭಾರತದ ಇಂಪ್ಯಾಕ್ಟ್ ಏನು?

Latest

ಕೆನಡಾ ಪ್ರಧಾನಿ ಸ್ಥಾನಕ್ಕೆ ಟ್ರುಡೊ ರಾಜೀನಾಮೆ – ಭಾರತದ ಇಂಪ್ಯಾಕ್ಟ್ ಏನು?

Public TV
Last updated: January 11, 2025 8:35 am
Public TV
Share
7 Min Read
Canada Justin Trudeau
SHARE

– ಕೆನಡಾ ಪ್ರಧಾನಿ ರೇಸ್‌ನಲ್ಲಿ ಮೂವರು ಭಾರತೀಯರು!

ಕುಸಿತ ಕಂಡ ಜನಪ್ರಿಯತೆ, ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿ, ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ, ಹಳಸಿದ ಭಾರತ ಜೊತೆಗಿನ ಸಂಬಂಧ, ಕೆನಡಾ ಬಗೆಗಿನ ಅಮೆರಿಕ ನಿಲುವು… ಹೀಗೆ ಅನೇಕ ಕಾರಣಗಳು ಕೆನಡಾ ಪ್ರಧಾನಿ ಹುದ್ದಗೆ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡುವಂತಹ ಮಾತುಗಳನ್ನಾಡಿಸಿವೆ. ದೇಶದ ಉನ್ನತ ಹುದ್ದೆಯನ್ನು ತೊರೆಯುತ್ತೇನೆ ಎಂದು ಟ್ರುಡೊ ಈಚೆಗೆ ಘೋಷಿಸಿದ್ದಾರೆ. ಅವರ ನಿಲುವು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಅಷ್ಟಕ್ಕೂ ಕೆನಡಾದಲ್ಲಿ ಆಡಳಿತ ಪಕ್ಷವೊಂದರ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವೇನು? ಟ್ರುಡೊ ರಾಜೀನಾಮೆ ಘೋಷಿಸುವ ಒತ್ತಡ ಸೃಷ್ಟಿಯಾಗಿದ್ಯಾಕೆ? ಈ ಬೆಳವಣಿಗೆಯಲ್ಲಿ ಭಾರತದ ಇಂಪ್ಯಾಕ್ಟ್ ಇದೆಯಾ? ಟ್ರುಡೊ ರಾಜೀನಾಮೆ ನಂತರ ಮುಂದೇನು ಎಂಬ ಅನೇಕ ಪ್ರಶ್ನೆಗಳು ಮೂಡಬಹುದು. ಎಲ್ಲವನ್ನೂ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಕುಸಿದ ಟ್ರುಡೊ ವರ್ಚಸ್ಸು
44 ವರ್ಷ ವಯಸ್ಸಿನ ಟ್ರುಡೊ ಅವರ ಆಶಾವಾದಿ ರಾಜಕೀಯ ಸಂದೇಶ ಮತ್ತು ಯುವ ವರ್ಚಸ್ಸು 2015ರಲ್ಲಿ ಲಿಬರಲ್ ಪಕ್ಷಕ್ಕೆ ಸಂಸತ್ತಿನಲ್ಲಿ ಅಭೂತಪೂರ್ವ ಬಹುಮತ ತಂದುಕೊಟ್ಟಿತ್ತು. ಆದರೆ, ಈಚೆಗೆ ಆಂಗಸ್ ಇನ್‌ಸ್ಟಿಟ್ಯೂಟ್ ನಡೆಸಿದ ಸಮೀಕ್ಷೆಯಲ್ಲಿ 2024ರ ಡಿಸೆಂಬರ್ ಹೊತ್ತಿಗೆ, ಅವರ ಪರವಾದ ಬೆಂಬಲ ರೇಟಿಂಗ್ ದಾಖಲೆಯ ಕನಿಷ್ಠ 24%ಗೆ ಕುಸಿದಿದೆ. ಲಿಬರಲ್ ಪಕ್ಷಕ್ಕೆ ಬೆಂಬಲ 16%ಗೆ ಇಳಿದಿದೆ. ಇದು ಪಕ್ಷಕ್ಕೆ 157 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಚುನಾವಣಾ ಸಾಧನೆಯಾಗಿದೆ.

ಕಳೆದ 50 ವರ್ಷಗಳಲ್ಲಿ ಯಾವುದೇ ಕೆನಡಾದ ಪ್ರಧಾನಿ ಸತತ ಮೂರನೇ ಅವಧಿಗೆ ಗೆದ್ದಿಲ್ಲ. ಇತ್ತೀಚಿನ ವರ್ಷಗಳಲ್ಲಿ 8-9 ವರ್ಷಗಳ ಅವಧಿಯಲ್ಲಿ ಆಡಳಿತ ಪಕ್ಷದಲ್ಲಿರುವ ಜನಪ್ರತಿನಿಧಿಗಳ ಸಾಮರ್ಥ್ಯ ಕುಂದಿದೆ. ಜನರು ಒಂಬತ್ತು ವರ್ಷಗಳ ಬಳಿಕವೂ ಅವರನ್ನು ಪ್ರೀತಿಸಲು ಸಾಧ್ಯವಿಲ್ಲ. ಟ್ರುಡೊ ಸಮಯ ಮುಗಿದಿದೆ ಅಂತ ಕಳೆದ ಎರಡು ವರ್ಷಗಳಿಂದ ಸಮೀಕ್ಷಾ ತಜ್ಞರು ಹೇಳುತ್ತಿದ್ದಾರೆಂದು ಕೆನಡಾದ ಪತ್ರಕರ್ತ ಟರ‍್ರಿ ಮಿಲೆವ್ಸಿ÷್ಕ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಸಮಸ್ಯೆಗಳಿಂದಾಗಿ ಟ್ರುಡೊ ವಿರುದ್ಧದ ಅಸಮಾಧಾನವು ದೇಶದಲ್ಲಿ ಉತ್ತುಂಗಕ್ಕೇರಿದೆ. ಅವರ ಎರಡನೇ ಅವಧಿಯಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆ ನಿಧಾನವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ವೇತನವು ದಾಖಲೆಯ ಹಣದುಬ್ಬರವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಣದುಬ್ಬರವು ‘ಸರ್ಕಾರದ ಹಂತಕ’ ಎಂದು 2019ರ ವರೆಗೆ ಟ್ರುಡೊ ಅವರ ಪ್ರಧಾನಿ ಕಾರ್ಯದರ್ಶಿಯಾಗಿದ್ದ ಯುರೇಷಿಯಾ ಗ್ರೂಪ್‌ನ ರಾಜಕೀಯ ಸಲಹೆಗಾರ ಜೆರಾಲ್ಡ್ ಬಟ್ಸ್ ಹೇಳಿದ್ದರು. ಹಿಂದಿನ ಸರ್ಕಾರಗಳಂತೆಯೇ, ಟ್ರುಡೊ ಅವರು ಹಣದುಬ್ಬರ ಸಂಗತಿ ಮತ್ತು ಅಗತ್ಯವಿರುವ ಪರಿಹಾರ ಮಾರ್ಗಗಳನ್ನು ಗುರುತಿಸುವಲ್ಲಿ ವಿಫಲರಾದರು ಎಂದು ತಿಳಿಸಿದ್ದರು.

ಇದರ ಜೊತೆಗೆ, ರಾಜಕೀಯ ಹಗರಣಗಳ ಸರಣಿಯು ಟ್ರುಡೊ ಅವರ ವೈಯಕ್ತಿಕ ಜನಪ್ರಿಯತೆ ಕುಸಿಯುವಂತೆ ಮಾಡಿತು. 2017ರಲ್ಲಿ ಹೆಚ್ಚಿನ ಗಿಫ್ಟ್ಗಳ ಸ್ವೀಕಾರ, 2020ರಲ್ಲಿ ಟ್ರುಡೊ ಕುಟುಂಬಕ್ಕೆ ಡಬ್ಲ್ಯೂಇ ಚಾರಿಟಿಯಿಂದ ಲಕ್ಷಾಂತರ ಡಾಲರ್‌ಗಳ ಪಾವತಿಯಾಗಿದೆ ಎಂಬ ಆರೋಪಗಳು ಕೇಳಿಬಂದವು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ದೇಶಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಿತು. ದಾಖಲೆ ಸಂಖ್ಯೆಯ ವಲಸಿಗರಿಗೆ ಅವಕಾಶ ನೀಡುವ ಸರ್ಕಾರದ ನೀತಿಯು ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿತು. ಇದರಿಂದ ಎಚ್ಚೆತ್ತು ಟ್ರುಡೊ ವಲಸೆ ನೀತಿಯಿಂದ ಹಿಂದೆ ಸರಿದರು. ಆದರೆ, ಅಷ್ಟೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು.

ಪಕ್ಷದ ಬೆಂಬಲ ಕಳೆದುಕೊಂಡ ನಾಯಕ
ಟ್ರಡೊ ಮೈತ್ರಿಕೂಟದ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಪಕ್ಷವು ಸಂಸತ್ತಿನ 338 ಸ್ಥಾನಗಳಲ್ಲಿ 153 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಸಣ್ಣ ಪಕ್ಷಗಳ ಬೆಂಬಲದಿಂದ ಸರ್ಕಾರ ರಚನೆಗೊಂಡಿತು. ಬ್ಲಾಕ್ ಕ್ವಿಬೆಕೊಯಿಸ್ ಮತ್ತು ಜಗ್ಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಕ್ಷ ಬೆಂಬಲ ನೀಡಿದ್ದವು. ಈಗ ಟ್ರುಡೊ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕೆಂದು ಅವರ ಲಿಬರಲ್ ಪಕ್ಷದೊಳಗಿನಿಂದಲೇ ದೊಡ್ಡ ಕೂಗು ಕೇಳಿಬರುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಮಾರು ಲಿಬರಲ್ ಪಕ್ಷದ ಎರಡು ಡಜನ್ ಬ್ಯಾಕ್‌ಬೆಂಚರ್‌ಗಳು, ಟ್ರುಡೊ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವ ಪತ್ರಕ್ಕೆ ಸಹಿ ಹಾಕಿವೆ.

ಹಣಕಾಸು ಸಚಿವ ರಾಜೀನಾಮೆ
ಡಿಸೆಂಬರ್ ಮಧ್ಯದಲ್ಲಿ ಟ್ರುಡೊ ಅವರ ಆಪ್ತ ಸಹಾಯಕ, ಕೆನಡಾದ ಹಣಕಾಸು ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ ಕೊಟ್ಟರು. ‘ಕೆನಡಾವನ್ನು ಅಮೆರಿಕಕ್ಕೆ ವಿಲೀನಗೊಳಿಸಲಾಗುವುದು. ಯುಎಸ್ ರಾಜ್ಯವನ್ನಾಗಿ ಮಾಡಿಕೊಳ್ಳಲಾಗುವುದು’ ಎಂಬ ಟ್ರಂಪ್ ಹೇಳಿಕೆಗೆ ಕ್ರಿಸ್ಟಿಯಾ ಆಕ್ರೋಶ ಹೊರಹಾಕಿದ್ದರು. ಈ ವಿಚಾರದಲ್ಲಿ ಟ್ರುಡೊ ಅವರ ಜಾಣಕುರುಡು ನಡೆಯನ್ನೂ ಖಂಡಿಸಿದರು. ಹೊಸ ನಾಯಕರ ಹುಟ್ಟಿಗೆ ಇದು ಸರಿಯಾದ ಸಮಯ ಎಂದು ಲಿಬರಲ್ ಪಕ್ಷದ ಅನೇಕ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರ ಬರೆದವರು ಮಾತ್ರವಲ್ಲ ಪಕ್ಷದ ಉಳಿದ ಸಂಸದರೂ ಟ್ರುಡೊಗೆ ಬೆಂಬಲ ನೀಡಲು ಹಿಂಜರಿಯುತ್ತಿದ್ದಾರೆ.

ಮುಂದೆ ಏನಾಗುತ್ತೆ?
ಲಿಬರಲ್ ಪಕ್ಷವು ಮತ್ತೊಬ್ಬ ನಾಯಕನನ್ನು ಆಯ್ಕೆ ಮಾಡುವವರೆಗೆ ಟ್ರುಡೊ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ರಾಜನ ಪ್ರತಿನಿಧಿಯಾದ ಗವರ್ನರ್ ಜನರಲ್ 3ನೇ ಕಿಂಗ್ ಚಾರ್ಲ್ಸ್, ಮಾರ್ಚ್ 24 ರವರೆಗೆ ಎಲ್ಲಾ ಕಲಾಪಗಳನ್ನು ಸ್ಥಗಿತಗೊಳಿಸುವ ಮೂಲಕ ಸಂಸತ್ತನ್ನು ಮುಂದೂಡುವ ಟ್ರುಡೊ ಮನವಿಯನ್ನು ಅಂಗೀಕರಿಸಿದ್ದಾರೆ. ಇದು ಲಿಬರಲ್ ಪಕ್ಷಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಸಮಯ ನೀಡುತ್ತದೆ. ಆದರೆ, ಮುಂದಿನ ಪ್ರಧಾನಿ ಯಾರಾಗಿರಬಹುದು ಎಂಬುದು ಸ್ಪಷ್ಟವಾಗಿಲ್ಲ. ಸಾರಿಗೆ ಸಚಿವೆ ಅನಿತಾ ಆನಂದ್ ಮತ್ತು ಮಾಜಿ ಕೇಂದ್ರ ಬ್ಯಾಂಕರ್ ಮಾರ್ಕ್ ಕಾರ್ನಿ ಅವರನ್ನು ಸಂಭಾವ್ಯ ಸ್ಪರ್ಧಿಗಳೆಂದು ಗುರುತಿಸಲಾಗಿದೆ. ಸಂಸತ್ತಿನ ಚುನಾವಣೆ 2025ರ ಅಕ್ಟೋಬರ್ ಒಳಗೆ ನಡೆಯಬೇಕು. ಆದರೆ ಅದು ಇನ್ನೂ ಮುಂಚೆಯೇ ಆಗಬಹುದು. ಪ್ರಮುಖ ವಿರೋಧ ಪಕ್ಷವಾದ ಕನ್ಸರ್ವೇಟಿವ್ ಪಕ್ಷವು ಮೇ ತಿಂಗಳೊಳಗೆ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಸಾಧ್ಯತೆಯಿದೆ. ಇದು ಚುನಾವಣೆಗೆ ಕಾರಣವಾಗಬಹುದು. ಪಿಯರೆ ಪೊಯ್ಲಿವ್ರೆ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲಿಬರಲ್ ಪಕ್ಷದವರಿಗಿಂತ 29 ಅಂಕಗಳ ಮುನ್ನಡೆಯನ್ನು ಹೊಂದಿದೆ. ಪಕ್ಷದ ನಾಯಕರಾಗಿ ಟ್ರೂಡೊ ಅವರ ನಂತರ ಯಾರು ಬಂದರೂ ಸಹ ಅವರು ಗೆಲ್ಲುವ ಸಾಧ್ಯತೆಯಿದೆ.

ಕೆನಡಾ-ಭಾರತ ತಿಕ್ಕಾಟ
ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಟ್ರೂಡೊ ಆರೋಪಿಸಿದ್ದರಿಂದ (ಸೆಪ್ಟೆಂಬರ್ 2023ರಿಂದ) ಭಾರತ-ಕೆನಡಾ ಸಂಬಂಧಗಳು ಹದಗೆಟ್ಟಿತು. ಆಗಿನಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕತೆಯಲ್ಲಿ ಬಿಕ್ಕಟ್ಟು ತಲೆದೋರಿದೆ. ಎರಡೂ ದೇಶಗಳು ತಮ್ಮ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದವು. ‘ಕೆನಡಾದಲ್ಲಿ ಹೊಸಬರು ಅಧಿಕಾರಕ್ಕೆ ಬಂದಿರುವುದರಿಂದ ಸಂಬಂಧಗಳನ್ನು ಸುಧಾರಿಸಲು ಅವಕಾಶವಿರುತ್ತದೆ. ಭಾರತವನ್ನು ದೃಷ್ಟಿಯಾಗಿಟ್ಟುಕೊಂಡು ಟ್ರುಡೊ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಮಿಲೆವ್ಸ್ಕಿ ಹೇಳಿದ್ದಾರೆ.

ಬ್ರಾಂಪ್ಟನ್‌ನಲ್ಲಿ ಸಿಖ್ ಪ್ರತ್ಯೇಕತಾವಾದಿಗಳು ಮತ್ತು ಹಿಂದೂಗಳ ನಡುವೆ ಘರ್ಷಣೆ ಮೂಲಕ ಟ್ರುಡೊ ವಿಭಜನೆಯನ್ನು ಬಿತ್ತುತ್ತಿದ್ದಾರೆ ಎಂದು ಪೊಯ್ಲಿವ್ರೆ ಆರೋಪಿಸಿದ್ದರು. ಟ್ರುಡೊ ಆಗಸ್ಟ್ನಲ್ಲಿ ಖಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸಲು ಕಾರಣವಾಯಿತು.

ಕೆನಡಾ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಸಂಜಾತರು
ಕೆನಡಾದಲ್ಲಿ ಅಕ್ಟೋಬರ್ ಕೊನೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮುಂಬರುವ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ ಹೀನಾಯ ಸೋಲನುಭವಿಸಲಿದ್ದು, ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೇರಲಿದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಟ್ರುಡೊ ರಾಜೀನಾಮೆ ಘೋಷಣೆ ಬೆನ್ನಲ್ಲೇ ಕೆನಡಾ ಪ್ರಧಾನಿ ಸ್ಥಾನಕ್ಕೆ ಹೊಸ ನಾಯಕರ ಹುಡುಕಾಟ ಶುರುವಾಗಿದೆ. ಪ್ರಧಾನಿ ರೇಸ್‌ನಲ್ಲಿರುವ ನಾಯಕರ ಪಟ್ಟಿಯಲ್ಲಿ ಮೂವರು ಭಾರತೀಯ ಸಂಜಾತರು ಸೇರಿರುವುದು ವಿಶೇಷ.

ಟ್ರೂಡೊ ಅವರ ಸಂಪುಟದಲ್ಲಿ ಮಾಜಿ ರಕ್ಷಣಾ ಸಚಿವೆ ಹಾಗೂ ಪ್ರಸ್ತುತ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಸಚಿವೆಯಾಗಿರುವ ಅನಿತಾ ಆನಂದ್ ಅವರನ್ನು ಪಕ್ಷವನ್ನು ಮುನ್ನಡೆಸುವ ಸಂಭಾವ್ಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗುತ್ತಿದೆ. ಅನಿತಾ ಅವರ ಪೋಷಕರು ತಮಿಳುನಾಡು ಮತ್ತು ಪಂಜಾಬ್‌ನ ಭಾರತೀಯ ವೈದ್ಯರಾಗಿದ್ದರು. 2019 ರಿಂದ 2021 ರವರೆಗೆ ಸಾರ್ವಜನಿಕ ಸೇವೆಗಳು ಮತ್ತು ಖರೀದಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳನ್ನು ಪಡೆದುಕೊಳ್ಳಲು ಒಪ್ಪಂದದ ಮಾತುಕತೆ ಮುನ್ನಡೆಸಿದ್ದರಿಂದ ಆನಂದ್ ರಾಜಕೀಯದಲ್ಲಿ ಗಮನಾರ್ಹ ಅನುಭವವನ್ನು ಹೊಂದಿದ್ದಾರೆ.

ಸಂಸದರಾಗಿರುವ ಭಾರತೀಯ ಮೂಲದ ಮತ್ತೊಬ್ಬ ವ್ಯಕ್ತಿ ಜಾರ್ಜ್ ಚಾಹಲ್ ಹೆಸರು ಕೂಡ ಪ್ರಧಾನಿ ರೇಸ್‌ನಲ್ಲಿ ಕೇಳಿಬರುತ್ತಿದೆ. ಆಲ್ಬರ್ಟಾ ಲಿಬರಲ್ ಸಂಸದರಾಗಿರುವ ಜಾರ್ಜ್ ಬಗ್ಗೆ ಹಲವು ನಾಯಕರು ಒಲವು ವ್ಯಕ್ತಪಡಿಸಿದ್ದಾರೆ. ವಕೀಲ ಮತ್ತು ಸಿಖ್ ಕಾಕಸ್ ಸಮುದಾಯದ ನಾಯಕರಾಗಿರುವ ಚಾಹಲ್, ವಾರ್ಡ್ 5 ರ ಕ್ಯಾಲ್‌ಗರಿ ನಗರ ಕೌನ್ಸಿಲರ್ ಆಗಿ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳ ಸ್ಥಾಯಿ ಸಮಿತಿಯ ಅಧ್ಯಕ್ಷರು ಮತ್ತು ಸಿಖ್ ಕಾಕಸ್‌ನ ಅಧ್ಯಕ್ಷರೂ ಆಗಿದ್ದಾರೆ.

ಕೆನಡಾದ ಮುಂದಿನ ಪ್ರಧಾನಿಯಾಗಲು ಭಾರತೀಯ ಮೂಲದ ಕೆನಡಾದ ಸಂಸದ ಚಂದ್ರ ಆರ್ಯ ಅಧಿಕೃತವಾಗಿ ಸ್ಪರ್ಧೆಗೆ ಇಳಿದಿದ್ದಾರೆ. ನೇಪಿಯನ್ ಅನ್ನು ಪ್ರತಿನಿಧಿಸುವ ಲಿಬರಲ್ ಸಂಸದರಾದ ಆರ್ಯ, ಕೆನಡಾವನ್ನು ‘ಸಾರ್ವಭೌಮ ಗಣರಾಜ್ಯ’ ಮಾಡುವ, ನಿವೃತ್ತಿ ವಯಸ್ಸನ್ನು ಹೆಚ್ಚಿಸುವ, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಮತ್ತು ಪ್ಯಾಲೆಸ್ತೀನ್ ರಾಜ್ಯವನ್ನು ಅಧಿಕೃತವಾಗಿ ಗುರುತಿಸುವ ತಮ್ಮ ಯೋಜನೆಗಳನ್ನು ವಿವರಿಸಿದ್ದಾರೆ. ಚಂದ್ರ ಆರ್ಯ ಕರ್ನಾಟಕದ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ದ್ವಾರಲು ಗ್ರಾಮದವರು. ಧಾರವಾಡದ ಕೌಸಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. 2022ರಲ್ಲಿ ಕೆನಡಾದ ಪಾರ್ಲಿಮೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ಚಂದ್ರ ಆರ್ಯ ಗಮನ ಸೆಳೆದಿದ್ದರು. ಅವರು ಕೂಡ ಈಗ ಕೆನಡಾ ಪ್ರಧಾನಿ ರೇಸ್‌ನಲ್ಲಿದ್ದಾರೆ.

ಟ್ರಂಪ್ ಕಾರ್ಡ್
ಕೆನಡಾವನ್ನು ಅಮೆರಿಕದ ಜೊತೆಗೆ ವಿಲೀನಗೊಳಿಸಿ ರಾಷ್ಟ್ರದ 51ನೇ ರಾಜ್ಯವನ್ನಾಗಿಸಲಾಗುವುದು ಎಂದು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಕಳೆದ ವರ್ಷದ ನವೆಂಬರ್ ಕೊನೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಜೊತೆಗಿನ ಮಾರ್-ಎ-ಲಾಗೊದಲ್ಲಿ ನಡೆಸಿದ ಔತಣ ಕೂಟದಲ್ಲಿ ಟ್ರಂಪ್ ಮೊದಲ ಬಾರಿಗೆ ತಮಾಷೆಯಾಗಿ ಹೇಳಿದ್ದರು. ಈ ರೀತಿ ಹೇಳಿಕೆ ನೀಡುವಾಗ ಟ್ರಂಪ್ ನಗುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ವಿಚಾರವನ್ನು ಕೆನಡಾ ಆಡಳಿತ ಪಕ್ಷದ ನಾಯಕರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಟ್ರಂಪ್ ಮಾತಿನಲ್ಲಿ ಮಿತ್ರರಾಷ್ಟçವನ್ನು ದುರ್ಬಲಗೊಳಿಸುವ ಉದ್ದೇಶವಿದೆ ಎಂದು ಕೆನಡಾದ ಹಣಕಾಸು ಸಚಿವರು ಅಸಮಾಧಾನ ಹೊರಹಾಕಿದ್ದಾರೆ.

ಅಷ್ಟೇ ಅಲ್ಲ, ಈ ಹಿಂದಿನಿಂದಲೂ ಕೆನಡಾ ಮೇಲೆ ಟ್ರಂಪ್ ಕಾರ್ಡ್ ಬಳಕೆಯಾಗಿದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ (2016 ರಿಂದ) ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಸುಂಕ ವಿಧಿಸುವುದು ಸೇರಿದಂತೆ ‘ಅಮೆರಿಕ ಮೊದಲು’ ನೀತಿಯಿಂದಾಗಿ ಕೆನಡಾ ಜೊತೆಗಿನ ಸಂಬಂಧ ಹದಗೆಟ್ಟಿತ್ತು. ಈಗ ಮತ್ತೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಚುನಾಯಿತರಾಗಿದ್ದಾರೆ. ಗೆಲುವಿನ ಬೆನ್ನಲ್ಲೇ, ಕೆನಡಾದ ಎಲ್ಲ ಉತ್ಪನ್ನಗಳ ಮೇಲೆ ಶೇ.25 ರಷ್ಟು ಸುಂಕ ಹೇರುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಟ್ರಂಪ್ ಗೆಲುವು ಒಟ್ಟಾರೆಯಾಗಿ ಕೆನಡಾದಲ್ಲಿ ಟ್ರುಡೊ ರಾಜಕೀಯ ಕಂಪನಕ್ಕೆ ಕಾರಣವಾಗಿದೆ.

TAGGED:canadaindiaJustin Trudeaupolitics
Share This Article
Facebook Whatsapp Whatsapp Telegram

Cinema news

Gilli Rakshita Raghu Kavya
ಬಿಗ್‌ ಬಾಸ್‌ ಸ್ಪರ್ಧಿಗಳ ಪರ ರಾಜಕೀಯ ನಾಯಕರ ಮತಯಾಚನೆ – ಯಾರಿಗೆ ಯಾರ ಬೆಂಬಲ?
Bengaluru City Cinema Districts Karnataka Latest Mandya Top Stories TV Shows Udupi
Bigg Boss
6 ಮಂದಿಯಲ್ಲಿ ಕಪ್ ಗೆಲ್ಲೋರು ಯಾರು? ಯಾರ ಪರ ಅಭಿಮಾನಿಗಳ ಬಹುಪರಾಕ್?
Cinema Latest Main Post TV Shows
AR Rahman
8 ವರ್ಷಗಳಿಂದ ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿಲ್ಲ, ಇದಕ್ಕೆ ಕೋಮುವಾದಿ ಮನಸ್ಥಿತಿ ಕಾರಣವಿರಬಹುದು: ಎ.ಆರ್ ರೆಹಮಾನ್
Bollywood Cinema Latest Main Post National
Khushi Mukherjee 2
ʻನನಗೆ ಸೂರ್ಯಕುಮಾರ್‌ ತುಂಬಾ ಮೆಸೇಜ್ ಕಳಿಸ್ತಿದ್ದʼ ಎಂದಿದ್ದ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!
Bollywood Cinema Cricket Latest Sports Top Stories

You Might Also Like

3 Students killed in bike tipper collision in Chikkaballapura
Chikkaballapur

ಡಿವೈಡರ್ ಹಾರಿ ಟಿಪ್ಪರ್‌ಗೆ ಡಿಕ್ಕಿಯಾದ ಬೈಕ್ – ಮೂವರು ವಿದ್ಯಾರ್ಥಿಗಳ ತಲೆ ಛಿದ್ರ

Public TV
By Public TV
4 minutes ago
Bheemanna Khandre Siddaganga Swamiji
Districts

ಭೀಮಣ್ಣ ಖಂಡ್ರೆ ನಿಧನಕ್ಕೆ ಸಿದ್ದಗಂಗಾ ಶ್ರೀ ಸಂತಾಪ

Public TV
By Public TV
10 minutes ago
MB Patil 2
Bengaluru City

1.53 ಲಕ್ಷ ಕೋಟಿ ಹೊಸ ಹೂಡಿಕೆ ಆಕರ್ಷಣೆ: ಎಂಬಿ ಪಾಟೀಲ್

Public TV
By Public TV
16 minutes ago
Excavation at Lakkundi gadag Ancient Shivalinga Model Artifact Discovered
Districts

ಲಕ್ಕುಂಡಿಯಲ್ಲಿ ಉತ್ಖನನ – ಪ್ರಾಚೀನ ಕಾಲದ ಶಿಲಾಕೃತಿ ಪತ್ತೆ

Public TV
By Public TV
26 minutes ago
DK Shivakumar 7
Bengaluru City

ಡಿಸಿಎಂ ಡಿಕೆಶಿಯ ದಾವೋಸ್‌ ಪ್ರವಾಸ ರದ್ದು

Public TV
By Public TV
45 minutes ago
threat to women officer
Latest

ಸಿಎಂ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ

Public TV
By Public TV
60 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?