ಕನ್ನಡದ ಹೆಸರಾಂತ ನಟ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಹಾಗೂ ನಿರ್ಮಾಪಕಿ ಸ್ಪಂದನಾ (Spandana) ಸೋಮವಾರ ಬೆಳಗ್ಗೆ ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೂ ಈವರೆಗೂ ಅವರ ಮೃತದೇಹ ಭಾರತಕ್ಕೆ ತರಲಾಗಿಲ್ಲ. ಕಾರಣ, ವಿದೇಶದಲ್ಲಿ ಯಾವುದೇ ಪ್ರಜೆ ನಿಧನ ಹೊಂದಿದರೂ, ಅವರ ಮೃತದೇಹ ತರುವುದು ಸುಲಭವಲ್ಲ. ಅದರಲ್ಲೂ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ನಿಧನ ಹೊಂದಿದರೆ ಪ್ರಕ್ರಿಯೆ ಇನ್ನೂ ಕಠಿಣವಾಗಿರುತ್ತದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪ್ರವಾಸಕ್ಕೆಂದು ಬಂದು ಮೃತರಾದ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ (Postmortem) ತಡವಾಗುವುದು ಸಾಮಾನ್ಯ. ಭಾರತದಂತೆಯೇ ಅಲ್ಲಿಯೂ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಆ ವರದಿಯನ್ನು ಮೊದಲು ಪೊಲೀಸರು ಪಡೆದುಕೊಳ್ಳುತ್ತಾರೆ. ಸಾವಿಗೆ ಕಾರಣ ಏನು ಎನ್ನುವುದು ಮೊದಲು ಗೊತ್ತಾಗುವುದು ಅಲ್ಲಿನ ಪೊಲೀಸ್ ವ್ಯವಸ್ಥೆಗೆ.
ಪೊಲೀಸರಿಗೆ ಮರಣೋತ್ತರ ವರದಿ ಬಂದ ತಕ್ಷಣವೇ ಪರಿಶೀಲಿಸಿ ಅದು ಸಹಜ ಸಾವು ಅಂದ ಬಳಿಕವಷ್ಟೇ ಕುಟುಂಬಸ್ಥರಿಗೆ ಮೃತದೇಹವನ್ನು ನೀಡಲಾಗುತ್ತದೆ. ನಂತರ ಕುಟುಂಬದವರು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುತ್ತಾರೆ. ಮರಣೋತ್ತರ ವರದಿ, ಮರಣ ಪ್ರಮಾಣ ಪತ್ರ ಹಾಗೂ ಪೊಲೀಸ್ ವರದಿಗಳನ್ನು ಪಡೆದುಕೊಂಡು ಆಯಾ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಬೇಕಾಗುತ್ತದೆ.
ಸ್ಪಂದನಾ ಬ್ಯಾಂಕಾಕ್ (Bangkok) ನಲ್ಲಿ ನಿಧನರಾಗಿದ್ದರಿಂದ ಅವರ ಕುಟುಂಬವು ಈ ಎಲ್ಲ ವರದಿಗಳನ್ನು ಪಡೆದುಕೊಂಡು ಬ್ಯಾಂಕಾಕ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ನೀಡಬೇಕು. ರಾಯಭಾರಿ ಕಚೇರಿ ಮತ್ತು ಸ್ಥಳೀಯ ಆಡಳಿತ ಸೇರಿಕೊಂಡು ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಲಾಗುತ್ತದೆ.
ಈ ಸಮಯದಲ್ಲಿ ಸ್ಪಂದನಾ ಅವರ ಪಾಸ್ ಪೋರ್ಟ್ ಮತ್ತೆ ವೀಸಾವನ್ನು ವಾಪಸ್ ಪಡೆದುಕೊಳ್ಳಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರವಷ್ಟೇ ಮೃತದೇಹವನ್ನು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲು ಅನುಮತಿಸಲಾಗುತ್ತದೆ.
ಏರ್ಪೋರ್ಟ್ಗೆ ಮೃತದೇಹ ತಂದ ತಕ್ಷಣವೇ ಅಲ್ಲೂ ಹಲವು ಪ್ರಕ್ರಿಯೆಗಳು ನಡೆಯಲಿವೆ. ಅಲ್ಲಿಯೂ ಕೂಡ ರಾಯಭಾರಿ ಕಚೇರಿಯಿಂದ ಪಡೆದಿರುವಂತಹ ಎಲ್ಲ ವರದಿಗಳನ್ನೂ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನೀಡಬೇಕು. ಆನಂತರವಷ್ಟೇ ಮೃತದೇಹವನ್ನು ವಿಮಾನದಲ್ಲಿ ಸಾಗಿಸಲು ಪರವಾನಿಗೆ ದೊರೆಯುತ್ತದೆ. ಈ ಎಲ್ಲಾ ಕಾರಣದಿಂದಾಗಿ ಸ್ಪಂದನಾ ಅವರ ಮೃತ ದೇಹ ಬೆಂಗಳೂರಿಗೆ ತರಲು ತಡವಾಗುತ್ತಿದೆ.
Web Stories