ಭಾರತದ ಜಿಡಿಪಿಗೆ 17% ಕೊಡುಗೆ ನೀಡುವ ಕೃಷಿ, ಕೈಗಾರಿಕೆ ಸೇರಿದಂತೆ ಕಾರ್ಖಾನೆಗಳು, ನೈಸರ್ಗಿಕ ಸಂಪನ್ಮೂಲ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿವೆ. ನೀರಿಲ್ಲದೇ ಯಾವುದೂ ಕೂಡ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೆ ದೇಶವು ವೇಗವಾಗಿ ಅಂತರ್ಜಲ ಕುಸಿತದ ತುದಿಯನ್ನು ತಲುಪುತ್ತಿದೆ.
ವಿಶ್ವದಲ್ಲಿ ಅತೀ ಹೆಚ್ಚು ಅಂತರ್ಜಲದ ಬಳಕೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದ್ದು, ಅಮೆರಿಕಾ ಹಾಗೂ ಚೀನಾದ ಬಳಕೆಯನ್ನು ಮೀರಿದೆ. ದೇಶದ ವಾಯುವ್ಯ ಭಾಗವು ಕಡಿಮೆ ಅಂತರ್ಜಲ ಮಟ್ಟವನ್ನು ಹೊಂದಿದ್ದು, ಸುಮಾರು 78% ಬಾವಿಗಳು ಬಳಕೆಯಲ್ಲಿವೆ. ಈ ಮೂಲಕ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ದೇಶದ ಅಕ್ಕಿ ಪೂರೈಕೆಯ 50% ಹಾಗೂ 85% ಗೋಧಿಯನ್ನು ಉತ್ಪಾದಿಸುತ್ತವೆ.
ಭಾರತದಾದ್ಯಂತ ಅಂತರ್ಜಲ ಕುಸಿತದಿಂದಾಗಿ ಆಹಾರ ಭದ್ರತೆಗೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ. ಗಂಗಾ ಮತ್ತು ಸಿಂಧೂ ಬಯಲು ಪ್ರದೇಶಗಳನ್ನು ಒಂದು ಕಾಲದಲ್ಲಿ ಪ್ರಪಂಚದ ಅತ್ಯಂತ ಸಂಪನ್ಮೂಲ-ಸಮೃದ್ಧ ಪ್ರದೇಶಗಳೆಂದು ಪರಿಗಣಿಸಲಾಗಿತ್ತು. ವಿಶೇಷವಾಗಿ ಅಂತರ್ಜಲದ ಲಭ್ಯತೆಯ ದೃಷ್ಟಿಯಿಂದ ಪರಿಗಣಿಸಲಾಗಿತ್ತು. ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಸಾಮಾನ್ಯ ತೋಟಗಾರಿಕೆ ಉಪಕರಣಗಳನ್ನು ಬಳಸಿ ನೆಲ ಅಗೆದರೂ ನೀರು ಸಿಗುತ್ತಿತ್ತು ಎಂಬ ನಂಬಿಕೆಯಿದೆ. ಆದರೆ ಈಗಿನ ಪರಿಸ್ಥಿತಿ ಅದನ್ನು ಸುಳ್ಳು ಎಂದು ಸೂಚಿಸುವಂತೆ ಮಾಡಿದೆ.
2023ರ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಪಂಜಾಬ್ನಲ್ಲಿನ ಸುಮಾರು 78% ಬಾವಿಗಳನ್ನು ಅತಿಯಾಗಿ ಬಳಸಲಾಗಿದೆ ಎಂದು ಪರಿಗಣಿಸಲಾಗಿದೆ. ಜೊತೆಗೆ ವಾಯುವ್ಯ ಪ್ರದೇಶವು 2025ರ ವೇಳೆಗೆ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸಲಿದೆ ಎಂದು ಊಹಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ ಸರಿಸುಮಾರು 64.6 ಶತಕೋಟಿ ಘನ ಮೀಟರ್ಗಳಷ್ಟು ನೀರು ನಷ್ಟವಾಗಿದೆ.
ಭಾರತದ ಉತ್ತರ ಮತ್ತು ವಾಯುವ್ಯ ಪ್ರದೇಶಗಳು ಅಂತರ್ಜಲ ಕುಸಿತದ ಹಾಟ್ಸ್ಪಾಟ್ಗಳಾಗಿ ಗುರುತಿಸಿಕೊಳ್ಳಲಿದ್ದು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್ಗಢ, ಮತ್ತು ಕೇರಳ ನಾಲ್ಕು ಪ್ರಮುಖ ರಾಜ್ಯಗಳಾಗಲಿವೆ. ಋತುಮಾನಗಳಲ್ಲಿ ನೀರಿನ ಕೊರತೆಯನ್ನು ಪರಿಹರಿಸಲು ದೇಶವು ಅಂತರ್ಜಲವನ್ನು ತೀವ್ರವಾಗಿ ಅವಲಂಬಿಸಿದೆ. ವಿಶೇಷವಾಗಿ ಬೇಸಿಗೆಯಲ್ಲಿ, ಅನಿರೀಕ್ಷಿತ ಬರಗಾಲದಲ್ಲಿ ಅಂತರ್ಜಲವು ಸುಮಾರು 62% ನೀರಾವರಿ ಅಗತ್ಯಗಳನ್ನು, 85% ಗ್ರಾಮೀಣ ನೀರು ಸರಬರಾಜು ಹಾಗೂ 45% ನಗರಗಳಲ್ಲಿ ನೀರನ್ನು ಹರಿಸುತ್ತದೆ. ಈ ಅವಲಂಬನೆ ಅಂತರ್ಜಲ ಕುಸಿತ ತೀವ್ರ ಒತ್ತಡಕ್ಕೆ ತಳ್ಳಲಿದೆ.
ಮಿಷಿಗನ್ ವಿಶ್ವವಿದ್ಯಾನಿಲಯದ ಅಧ್ಯಯನವು ಭಾರತದಲ್ಲಿ ಅಂತರ್ಜಲ ಕುಸಿತದ ವೇಗವನ್ನು ಎತ್ತಿ ತೋರಿಸುತ್ತದೆ. ಇದು ರಾಷ್ಟ್ರದ ಭವಿಷ್ಯದಲ್ಲಿ ನೀರಿನ ಭದ್ರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಪ್ರಸ್ತುತ ಸ್ಥಿತಿ ಮುಂದುವರಿದರೆ, ಅಂತರ್ಜಲ ಕುಸಿತದ ದರ 2080ರ ವೇಳೆಗೆ ಮೂರು ಪಟ್ಟು ಹೆಚ್ಚಾಗಬಹುದು. ಇದು ಆಹಾರ ಮತ್ತು ನೀರಿನ ಭದ್ರತೆಗೆ ಗಮನಾರ್ಹವಾಗಿ ಅಪಾಯವನ್ನುಂಟುಮಾಡುತ್ತದೆ ಎಂದು ವರದಿ ಊಹಿಸಿದೆ. ಈ ಸ್ಥಿತಿಗೆ ಮೂಲ ಕಾರಣವೆಂದರೆ ತಾಪಮಾನ ಏರಿಕೆ, ಇದು ದೇಶದ ರೈತರನ್ನು ನೀರಾವರಿಗಾಗಿ ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸುವಂತೆ ಮಾಡಿದೆ.
ಅಂತರ್ಜಲ ಸಂಪನ್ಮೂಲದ ಕುಸಿತವನ್ನು ತಡೆಯಲು ಸರ್ಕಾರವು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದಾದ್ಯಂತ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು ದೇಶದ ಆಹಾರ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಭಾರತದ ದೊಡ್ಡ ಪ್ರದೇಶಗಳು ಮರುಭೂಮಿಯಾಗುವುದನ್ನು ತಡೆಯಲು ಅಂತರ್ಜಲ ಸಂರಕ್ಷಣೆಗಾಗಿ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರುವುದು ಬಹಳ ಮುಖ್ಯ. ಇದು ಅಂತರ್ಜಲದ ಅನಿಯಂತ್ರಿತ ಬಳಕೆಯನ್ನು ಉತ್ತೇಜಿಸುವ ನೀತಿಗಳು ಮತ್ತು ಸಬ್ಸಿಡಿಗಳನ್ನು ಮರುಪರಿಶೀಲಿಸಬೇಕು.