ಬೆಂಗಳೂರು: ಸ್ಟೇಡಿಯಂಗೆ ಎಂಟ್ರಿ ಫ್ರೀ ಅಂದ ಮೇಲೆ ಯಾಕೆ ನೀವು 4 ಗೇಟ್ ಕೂಡಾ ಓಪನ್ ಮಾಡಿಲ್ಲ. ಯಾಕೆ ಎಲ್ಲರು 1 ಗೇಟ್ ಅಲ್ಲೇ ಸಾಯ್ಬೇಕಿತ್ತು ಎಂದು ದಿವ್ಯಾಂಶಿ ತಾಯಿ ಅಶ್ವಿನಿ (Divyanshi Mother Ashwini) ಪ್ರಶ್ನಿಸಿದ್ದಾರೆ.
ಬುಧವಾರ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಕಾಲ್ತುಳಿತ (Stampede) ಉಂಟಾದ ಬಗ್ಗೆ ಮಾತನಾಡಿದ ಅವರು, ನನ್ನ ಮಗಳಿಗೆ ವಿರಾಟ್ ಕೊಹ್ಲಿ (Virat Kohli) ಮೇಲೆ ಅಪಾರ ಅಭಿಮಾನವಿತ್ತು. ಹಾಗಾಗಿ ವಿರಾಟ್ ಕೊಹ್ಲಿಯನ್ನು ನೋಡಬೇಕು ಅಂತಾ ಹಠ ಮಾಡಿದ್ದಳು. ಅವಳಿಗೆ ಗೋಲ್ಡನ್ ಮೆಮೋರಿ ಕೋಡೋಣ ಅಂತಾ ಹೋದೆವು. ಅವಳ ಸಾವಿಗೆ ನಾನೇ ಹೊಣೆ ಬೇರೆ ಯಾರು ಅಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಇಂತಹ ಘಟನೆ ಆಗಿರಲಿಲ್ಲ: ಪರಮೇಶ್ವರ್
ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವ ವಿಖ್ಯಾತ ಕ್ರೀಡಾಂಗಣ. ದೇಶ ವಿದೇಶದಿಂದ ಆಟಗಾರರು ಬಂದು ಆಡಿದ್ದಾರೆ. ಅದು ಗಲ್ಲಿ ಕ್ರಿಕೆಟ್ ಅಲ್ಲ. ಅಲ್ಲಿನ ಜನದಟ್ಟಣೆ ಬಗ್ಗೆ ಮೊದಲೇ ಗೊತ್ತಿತ್ತು. ಆಗಲೇ ಯೋಚನೆ ಮಾಡ್ಬೇಕಿತ್ತು 1 ಗೇಟ್ನಲ್ಲಿ ಎಲ್ಲರೂ ಸ್ಟೇಡಿಯಂ ಒಳಗಡೆ ಹೋಗೋಕೆ ಆಗಲ್ಲ. ಅಲ್ಲಿದ್ದವರ ಕಣ್ಣ ಮುಂದೆಯೇ ಜನರು ಕೆಳಗೆ ಬಿದ್ದು ಸಾಯ್ತಿದ್ದಾರೆ ಎಂದು ಗೊತ್ತಾದರೂ ಗೇಟ್ ಓಪನ್ ಮಾಡಿಲ್ಲ. ಇದರ ಬಗ್ಗೆ ಏನು ಹೇಳಬೇಕು ಅಂತಾ ಗೊತ್ತಾಗ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಟೀಂ ಇಂಡಿಯಾದ್ದು 5 ದಿನ, ಸಿಎಸ್ಕೆ 3 ದಿನದ ನಂತರ ಆಚರಣೆ ಮಾಡಿದ್ರೆ ಒಂದೇ ದಿನದಲ್ಲಿ ವಿಜಯೋತ್ಸವ ಆಚರಿಸಿದ್ದು ಯಾಕೆ? – ಜೆಡಿಎಸ್ ಆಕ್ರೋಶ
ಸ್ಟೇಡಿಯಂನಲ್ಲಿ 21 ಗೇಟ್ ಇದೆ. ಅದು ಓಬವ್ವನ ಕಿಂಡಿ ಅಲ್ಲ. ಅಲ್ಲಿ ಒಂದು ಗೇಟ್ನಲ್ಲಿ ಕೇವಲ ಅರ್ಧ ಭಾಗದ ಗೇಟ್ ಮಾತ್ರ ತೆರೆದಿದ್ದರು. ಪೂರ್ತಿಯಾಗಿ ಎರಡೂ ಗೇಟ್ ತೆರೆದಿದ್ದರೆ ಜನರು ಆರಾಮಾಗಿ ಒಳಗೆ ಹೋಗಬಹುದಿತ್ತು. ಆದರೆ ಅಲ್ಲಿ ಅವರ ಉದ್ದೇಶ ಏನಿತ್ತು ಅಂತಾ ನನಗೆ ಗೊತ್ತಾಗಿಲ್ಲ. ಚಿನ್ನಸ್ವಾಮಿಗೆ ಇದೇ ಮೊದಲ ಬಾರಿ ಅಲ್ಲ ಜನ ಬರುತ್ತಿರುವುದು. ಆರ್ಸಿಬಿ ಬಗ್ಗೆ ಎಷ್ಟು ಕ್ರೇಜ್ ಇದೆ ಅಂತಾ ಎಲ್ಲರಿಗೂ ಗೊತ್ತಿದೆ. ರೋಡ್ ಶೋ ಮಾಡಿದ್ದರೆ ಈ ರೀತಿಯ ದುರ್ಘಟನೆ ನಡೆಯುತ್ತಿರಲಿಲ್ಲ. ಜನ ರಸ್ತೆ ಬದಿ ನಿಂತು ನೋಡಿಕೊಂಡು ಹೋಗುತ್ತಿದ್ದರು. ಆಗ ಜನರು ಸ್ಟೇಡಿಯಂಗೆ ಹೋಗಿ ನೋಡಬೇಕು ಅಂದ್ಕೊಳ್ಳುತ್ತಿರಲಿಲ್ಲ. ವಿಜಯಯಾತ್ರೆ ರದ್ದು ಮಾಡಿದ ಮೇಲೆ ಸರ್ಕಾರ ಒಂದು ದಿನ ಸಮಯ ತಗೊಂಡು ಸರಿಯಾದ ವ್ಯವಸ್ಥೆ ಮಾಡಿ ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ 11 ಮಂದಿ ಸಾವು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ದಿವ್ಯಾಂಶಿ ಮಗಳಗಿಂತ ಹೆಚ್ಚಾಗಿ ಬೆಸ್ಟ್ ಫ್ರೆಂಡ್ ಆಗಿದ್ದಳು. ಅವಳಿಗೆ ಯಾವುದೇ ರೀತಿಯ ಶೋಕಿ ಇರಲಿಲ್ಲ. ಯಾವಗಲೂ ಅಮ್ಮ ನಿನ್ನಿಷ್ಟ ಅಂತಿದ್ಳು. ದಿವ್ಯಾಂಶಿ ನನಗೆ ಎರಡನೇ ತಾಯಿಯಾಗಿದ್ದಳು. ಅವಳು ಸ್ವಿಮ್ಮಿಂಗ್ನಲ್ಲಿ ಗೋಲ್ಡ್ ಮೆಡಲ್ ಸಹ ಪಡೆದಿದ್ದಳು. ಮಗಳು ರಾತ್ರಿ ಆರ್ಸಿಬಿ ಕಪ್ ಗೆದ್ದ ಖುಷಿಯಲ್ಲಿದ್ದಳು. ಬೆಳಗ್ಗೆ ಸ್ಕೂಲ್ ಹೋಗೋಕೆ ರೆಡಿಯಾಗಿದ್ದಳು. ಆ ವೇಳೆ ಆರ್ಸಿಬಿ (RCB) ಟೀಮ್ ಬೆಂಗಳೂರಿಗೆ ಬರುತ್ತಿದೆ ಎಂಬ ಸುದ್ದಿ ಗೊತ್ತಾಯ್ತು. ಆಗ ಅವಳು ವಿರಾಟ್ ಕೊಹ್ಲಿನ ನೋಡ್ಬೇಕು ಅಂತಾ ಹಠ ಮಾಡಿದ್ದಳು. ಅವಳಿಗೆ ಗೋಲ್ಡನ್ ಮೆಮೋರಿ ಕೊಡೋಣ ಅಂತಾ ಕರೆದುಕೊಂಡು ಹೋದೆ. ಆದರೆ ಅಲ್ಲಿ ಸರಿಯಾಗಿ ಪೊಲೀಸ್ ಫೋರ್ಸ್ ಇರಲಿಲ್ಲ. ನಾನು ಇನ್ನೊಬ್ಬರನ್ನು ಕಾಪಾಡಳು ಹೋಗಿ ನನ್ನ ಮಗಳು ಮಿಸ್ ಆದಳು ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಪೊಲೀಸರು ಅನುಮತಿ ನೀಡದೇ ಇದ್ರೂ ಪಟ್ಟು ಹಿಡಿದು ವಿಜಯೋತ್ಸವ ಆಯೋಜನೆ!
ನನ್ನ ಮಗಳಿಗೆ ವಿರಾಟ್ ಕೊಹ್ಲಿ ಮೇಲೆ ಅಪಾರ ಅಭಿಮಾನವಿತ್ತು. ವಿರಾಟ್ ಕೊಹ್ಲಿಯ ಎಲ್ಲಾ ಕ್ರಿಕೆಟ್ ದಾಖಲೆ ಬಗ್ಗೆಯೂ ಆಕೆಗೆ ಗೊತ್ತಿತ್ತು. ಕಪಿಲ್ ದೇವ್ ದಾಖಲೆಯ ಬಗ್ಗೆಯೂ ಅವಳಿಗೆ ತಿಳಿದಿತ್ತು. ಹಾಗಾಗಿ ಅವಳ ಖುಷಿಗಾಗಿ ಸ್ಟೇಡಿಯಂಗೆ ಕರೆದುಕೊಂಡು ಹೋದೆ. ಅಲ್ಲಿ ನನ್ನ ಮಗಳು ಕಾಣೆಯಾದಳು. ಕೆಳಗೆ ಬಿದ್ದ ನನ್ನ ಮಗಳನ್ನು ಯಾರು ಕಾಪಾಡಲಿಲ್ಲ. ಅಲ್ಲಿದ್ದ ಯಾರಿಗೂ ಆ ಸಮಯದಲ್ಲಿ ಮಾನವೀಯತೆನೇ ಇರಲಿಲ್ಲ. ಅಲ್ಲಿ ಯಾವ ಭದ್ರತಾ ವ್ಯವಸ್ಥೆ ಕೂಡಾ ಇರಲಿಲ್ಲ. ದಿವ್ಯಾಂಶಿ ಕಲಿಕೆಯಲ್ಲೂ ಮುಂದಿದ್ದಳು. ಅಲ್ಲದೇ ಆಕೆ ಪೈಲೆಟ್ ಅಥವಾ ಡಾಕ್ಟರ್ ಆಗ್ಬೇಕು ಅಂತಾ ಹೇಳುತ್ತಿದ್ದಳು ಎಂದು ನೆನೆದರು.