– ಐಟಿ ದಾಳಿಯಿಂದ ನಮಗೆ ಶೇ.10ರಷ್ಟು ವೋಟು ಹೆಚ್ಚಾಗಲಿದೆ
– ಬಿಜೆಪಿ ರಾಮಜಪ ಬಿಟ್ಟು ದೇವೇಗೌಡರ ಜಪ ಶುರುಮಾಡಿದ್ದಾರೆ
ಹಾಸನ: ಮೈತ್ರಿ ಸರ್ಕಾರ ಬೀಳಿಸುವುದಕ್ಕೆ ನನ್ನ ಲೋಕೋಪಯೋಗಿ ಇಲಾಖೆ ಮೇಲೆ ರೇಡ್ ಮಾಡಿಸಿದ್ದಾರೆ. ಇದಕ್ಕೆಲ್ಲ ನಾನು ಹೆದರಲ್ಲ. ನನ್ನ ಮೇಲೆ ಶೃಂಗೇರಿ ಶಾರದೆಯ ಆಶೀರ್ವಾದ ಇದೆ. ನನ್ನದು ಸ್ವಾತಿ ನಕ್ಷತ್ರ, ಈ ನಕ್ಷತ್ರಕ್ಕೆ ಕೈಹಾಕುವರಿಗೆ ರಿವರ್ಸ್ ಆಗುತ್ತದೆ ಎಂದು ಫುಲ್ ಜ್ಯೋತಿಷಿಗಳ ಸ್ಟೈಲ್ನಲ್ಲಿ ಸಚಿವ ರೇವಣ್ಣ ಭವಿಷ್ಯ ನುಡಿದಿದ್ದಾರೆ.
ತನ್ನ ಆಪ್ತರ ಮನೆ ಮೇಲೆ ದಾಳಿ ನಡೆಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ನಾಚಿಕೆ ಆಗಬೇಕು. 9 ತಿಂಗಳು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಮನೆ ಸುತ್ತಿದ್ದಾರೆ. ಆದರೂ ಸರ್ಕಾರ ಬೀಳಿಸುವ ತಂತ್ರ ಫಲ ನೀಡಲಿಲ್ಲ. ಈಗ ಚುನಾವಣೆಯ ಸಮಯದಲ್ಲಿ ನನ್ನ ಇಲಾಖೆಯ ಮೇಲೆ ದಾಳಿ ಮಾಡಿದ್ದಾರೆ. ಐಟಿ ಮುಖ್ಯಸ್ಥರು ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಮಗೆ ನಷ್ಟವಿಲ್ಲ, ಚುನಾವಣೆಯಲ್ಲಿ ಶೇ.10ರಷ್ಟು ಹೆಚ್ಚು ಮತಗಳಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:ನಾನು ನುಡಿದಂತೆ ಆಗುತ್ತೆ – ದೇಶದ ರಾಜಕೀಯ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ ರೇವಣ್ಣ!
ಐಟಿ ದಾಳಿ ನಡೆಸಿ ನಮ್ಮನ್ನ ಹೆದರಿಸಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಇಂತಹದ್ದು ನೋಡಿಕೊಂಡು ನಾವು ಬಂದಿದ್ದೇವೆ. ಇದು ಬಿಜೆಪಿಯ ಅಂತ್ಯಕಾಲ. ಐಟಿ ದಾಳಿಯಿಂದ ನಮಗೆ ಅನುಕೂಲವೇ ಆಗಲಿದೆ. ಜನ ಎಲ್ಲವನ್ನೂ ಗಮನಿಸುತ್ತಾರೆ. ಐಟಿ ಮುಖ್ಯಸ್ಥ ಮೋದಿ ಏಜೆಂಟ್. ಅವರು ಐಟಿ ಇಲಾಖೆ ಕೆಲಸ ಬಿಟ್ಟು ಬಿಜೆಪಿ ಸೇರಲಿ ಎಂದು ಕಿಡಿಕಾರಿದರು. ಇದನ್ನೂ ಓದಿ:‘ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ’ – ಸಚಿವ ರೇವಣ್ಣ ಎಡವಟ್ಟು
ದೇವೇಗೌಡರ ಕುಟುಂಬ ಇಷ್ಟು ವರ್ಷದ ರಾಜಕಾರಣದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದೆ. ಐಟಿ ದಾಳಿಗೆ ಯಾರು ಬೇಡ ಅಂದಿಲ್ಲ. ಎಲ್ಲಿ ಬೇಕಾದರು ರೇಡ್ ಮಾಡಲಿ. ಅಕ್ರಮ ಹಣ ಇದ್ದರೆ ಹೊತ್ತುಕೊಂಡು ಹೋಗಲಿ. ಇದರಿಂದಾಗಿ ದೇವೇಗೌಡರನ್ನು, ಕುಮಾರಸ್ವಾಮಿಯವರನ್ನು ಹೆದರಿಸಬಹುದು ಎಂದಿದ್ದರೆ ಅದು ಬರೀ ಕನಸು. ಮೋದಿಯವರ ಸಮಯ ಮುಗಿಯಿತು. ಅವರು ಏನೂ ಕೆಲಸ ಮಾಡಿಲ್ಲ ಅದಕ್ಕೆ ಯುದ್ಧ ಮಾಡಿದ್ವಿ ಎಂದರು ಆದ್ರೆ ಜನರು ಗುರುತಿಸಲಿಲ್ಲ. ಅದಕ್ಕೆ ಈ ರೀತಿ ನಾಟಕ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ರಾಮನ ಜಪಮಾಡಿ ಈಗ ದೇವೇಗೌಡರ ಜಪದಲ್ಲಿ ಬ್ಯುಸಿಯಾಗಿದ್ದಾರೆ. ಟಿವಿಯಲ್ಲಿ ನೋಡಿ ಈಶ್ವರಪ್ಪ, ಯಡಿಯೂರಪ್ಪ ಎಲ್ಲರಿಗೂ ದೇವೇಗೌಡರದ್ದೇ ಜಪ. ಇದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವುದಕ್ಕೆ ನನ್ನ ಕೃತಜ್ಞತೆ ಸಲ್ಲಿಸುತ್ತೆನೆ. ಪುಕ್ಸಟ್ಟೆ ನಮಗೆ ಜಾಹಿರಾತು ನೀಡುತ್ತಿರುವ ಟಿವಿ ಮಾಲೀಕರಿಗೆ ಒಳ್ಳೆದಾಗಲಿ ಎಂದು ಹೇಳಿದರು.