ಬಿಗ್ ಬಾಸ್ ಗೆಲ್ಲೋದು ಯಾರು?: ಎಲಿಮಿನೇಟ್ ಆದ ಸ್ಪರ್ಧಿಗಳು ಹೇಳೋದೇನು?

Public TV
5 Min Read
bigg boss kannada 10

ಹುನಿರೀಕ್ಷಿತ ಬಿಗ್‌ಬಾಸ್‌ (Bigg Boss Kannada) ಕನ್ನಡ ಸೀಸನ್‌ 10 ಬಹುದೊಡ್ಡ ಯಶಸ್ಸಿನೊಂದಿಗೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇದೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಈ ಫಿನಾಲೆ ವಾರದಲ್ಲಿ ಬಿಗ್‌ಬಾಸ್ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹೀಗೆ ಒಟ್ಟು ಆರು ಸದಸ್ಯರು ಇದ್ದಾರೆ. ಅಷ್ಟೇ ಅಲ್ಲ, ಮಿಡ್‌ ವೀಕ್ ಎಲಿಮಿನೇಷನ್  (Elimination)ಇರುವುದಿಲ್ಲ ಎಂದು ನಿನ್ನೆಯ ಎಪಿಸೋಡಿನಲ್ಲಿ ಬಿಗ್‌ಬಾಸ್ ಹೇಳಿದ್ದಾರೆ. ಹಾಗಾಗಿ ಕುತೂಹಲ ಇನ್ನಷ್ಟು ಗರಿಗೆದರಿದೆ.

Bigg Boss 1 2

ಈ ಸಲ ಯಾರು ಬಿಗ್‌ಬಾಸ್ ಗೆಲ್ಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ವಾಗ್ವಾದಗಳು ನಡೆಯುತ್ತಿವೆ. ಪ್ರತಿಯೊಬ್ಬ ಸದಸ್ಯರ ಅಭಿಮಾನಿಗಳೂ ತಮ್ಮ ನೆಚ್ಚಿನ ಸ್ಪರ್ಧಿಯ ಪರವಾಗಿ ಜೋರಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರತಿ ವಾರ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಸ್ಪರ್ಧಿಗಳು ಹೊರಗೆ ಬರುತ್ತಿದ್ದ ಹಾಗೆಯೇ ಜಿಯೊಸಿನಿಮಾ ಅವರೊಂದಿಗೆ ಎಕ್ಸ್‌ಕ್ಲೂಸೀವ್ “ಬಿಗ್‌ಬ್ಯಾಂಗ್‌’ ಸಂದರ್ಶನ ಮಾಡುತ್ತಿತ್ತು. ಆ ಎಲ್ಲ ಸಂದರ್ಶನಗಳು ಜಿಯೊಸಿನಿಮಾದಲ್ಲಿ ಈಗ ಉಚಿತವಾಗಿ ವೀಕ್ಷಣೆಗೆ ಲಭ್ಯ.

Bigg Boss 2 3

ಪ್ರತಿಯೊಬ್ಬ ಸ್ಪರ್ಧಿಯ ಬಿಗ್‌ಬ್ಯಾಂಗ್ ಸಂದರ್ಶನದಲ್ಲಿಯೂ ಕೇಳಲಾಗಿದ್ದ ಒಂದು ಸಾಮಾನ್ಯ ಪ್ರಶ್ನೆ, ‘ಈ ಸಲ ಬಿಗ್‌ಬಾಸ್‌ ಷೋದ ಅಂತಿಮ ಹಂತದಲ್ಲಿ ಇರುವ ಐವರು ಸ್ಪರ್ಧಿಗಳು ಯಾರು?’ಎಂಬುದಾಗಿತ್ತು. ಹಾಗೆಯೇ ಯಾರು ಗೆಲ್ಲಬಹುದು ಎಂಬ ತಮ್ಮ ಊಹೆಯನ್ನೂ ಹಲವು ಸ್ಪರ್ಧಿಗಳು ಈ ಸಂದರ್ಶನಗಳಲ್ಲಿ ಮಾಡಿದ್ದಾರೆ. ಈ ಎಲ್ಲ ಸ್ಪರ್ಧಿಗಳ ಊಹೆಯ ಪ್ರಕಾರ ಈ ಸಲದ ಬಿಗ್‌ಬಾಸ್‌ ಅನ್ನು ಯಾರು ಗೆಲ್ಲುತ್ತಾರೆ? ಕಪ್ ಯಾರ ಕೈಯಲ್ಲಿ ಸೇರಲಿದೆ ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. ಇದು ಪೂರ್ತಿಯಾಗಿ ಜಿಯೊಸಿನಿಮಾದಲ್ಲಿ ಎವಿಕ್ಟೆಡ್ ಸ್ಪರ್ಧಿಗಳ ಊಹೆಯ ಆಧಾರದ ಮೇಲೆ ರೂಪಿಸಲಾದ ವರದಿ.

Bigg Boss 9

ಈ ಸಲದ ಬಿಗ್‌ಬಾಸ್‌ ಸೀಸನ್‌ನ ಟಾಪ್‌ 5ನಲ್ಲಿ ಯಾರು ಇರುತ್ತಾರೆ ಎಂದು ಎವಿಕ್ಟೆಡ್ ಕಂಟೆಸ್ಟೆಂಟ್ಸ್‌ಗೆ ಕೇಳಲಾದ ಪ್ರಶ್ನೆಗೆ ಅವರು ನೀಡಿದ ಉತ್ತರದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿತರಾದವರು ಸಂಗೀತಾ ಶೃಂಗೇರಿ. ಒಟ್ಟೂ ಒಂಬತ್ತು ಜನ ಎಲಿಮಿನೇಟೆಡ್ ಸ್ಪರ್ಧಿಗಳು ಜಿಯೊ ಸಿನಿಮಾ ಸಂದರ್ಶನದಲ್ಲಿ ಸಂಗೀತಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಕಾರ್ತಿಕ್ ಮಹೇಶ್ ಅವರು ಆರು ಬಾರಿ ಉಲ್ಲೇಖಿತರಾಗಿದ್ದಾರೆ. ತುಕಾಲಿ ಸಂತೋಷ್ ಕೂಡ ಆರು ಸಲವೇ ಉಲ್ಲೇಖಿತರಾಗಿ ಕಾರ್ತಿಕ್ ಸಮಕ್ಕೆ ನಿಂತಿದ್ದಾರೆ. ವಿನಯ್ ಕೂಡ ಪದೇ ಪದೇ ಉಲ್ಲೇಖಿತಗೊಂಡಿರುವ ಸ್ಪರ್ಧಿಗಳಲ್ಲಿ ಒಬ್ಬರು. ನಮ್ರತಾ, ಮೈಕಲ್, ಪವಿ, ಸ್ನೇಹಿತ್‌ ಎಲ್ಲವೂ ವಿನಯ್ ಹೆಸರನ್ನು ಉಲ್ಲೇಖಿಸಿದ್ದಾರೆ.

Bigg Boss 1 12

ಸಂಗೀತಾ ಶೃಂಗೇರಿ

ಅಸಮರ್ಥರಾಗಿ ಒಳಗೆ ಹೋಗಿದ್ದರೂ, ಮೊದಲ ವಾರದಿಂದಲೇ ಮನೆಯ ಕೇಂದ್ರಬಿಂದುಗಳಲ್ಲಿ ಒಬ್ಬರಾಗಿದ್ದವರು ಸಂಗೀತಾ ಶೃಂಗೇರಿ. ನಂತರದ ದಿನಗಳಲ್ಲಿಯೂ ಟಾಸ್ಕ್‌ಗಳಲ್ಲಾಗಲಿ, ಮನೆಯ ಕೆಲಸಗಳಲ್ಲಾಗಲಿ, ಚಟುವಟಿಕೆಗಳಲ್ಲಾಗಲಿ, ನಾಮಿನೇಷನ್‌ ಪ್ರಕ್ರಿಯೆಯಲ್ಲಾಗಲಿ ಸಂಗೀತಾ ಹೆಸರು ಮುಂಚೂಣಿಯಲ್ಲಿ ಇದ್ದೇ ಇರುತ್ತಿತ್ತು. ಜಿದ್ದು, ಜಗಳ, ಸ್ಟ್ರಾಟಜಿ ಎಲ್ಲದರಲ್ಲಿಯೂ ಸಂಗೀತಾ ಮುಂದಿರುತ್ತಿದ್ದರು. ಹೀಗಾಗಿಯೇ ಅವರನ್ನು ಮನೆಯೊಳಗೆ ವಿರೋಧಿಸುತ್ತಿದ್ದವರೂ ಟಾಪ್‌ 5ನಲ್ಲಿ ಅವರು ಇರುತ್ತಾರೆ ಎಂದು ಊಹಿಸಿದ್ದರು. ಭಾಗ್ಯಶ್ರೀ, ನೀತು, ಸ್ನೇಹಿತ್, ಪವಿ ಪೂವಪ್ಪ, ಅವಿನಾಶ್, ಸಿರಿ, ತನಿಷಾ ನಮೃತಾ ಇವರೆಲ್ಲರೂ ಟಾಪ್‌ 5ನಲ್ಲಿ ಇರುತ್ತಾರೆ ಎಂದು ಊಹಿಸಿದ್ದರು. ಅದರಲ್ಲಿ ತನಿಷಾ ಮತ್ತು ನಮೃತಾ  ಅವರು ಈ ಸಲದ ಬಿಗ್‌ಬಾಸ್‌ ಅನ್ನು ಸಂಗೀತಾ ಅವರೇ ಗೆಲ್ಲಬಹುದು ಎಂದು ಊಹಿಸಿದ್ದಾರೆ.

bigg boss 1 16

ತುಕಾಲಿ ಸಂತೋಷ್

ರಂಜನೆ ಮತ್ತು ತಂತ್ರಗಾರಿಕೆ ಎರಡರ ಮಿಶ್ರಣದಂತಿರುವ ತುಕಾಲಿ ಸಂತೋಷ್ ತಮ್ಮ ಜಾಣತನದಿಂದಲೇ ಬಿಗ್‌ಬಾಸ್ ಮನೆಯೊಳಗೆ ಸ್ಥಾನವನ್ನು ಭದ್ರ ಮಾಡಿಕೊಳ್ಳುತ್ತ ಬಂದರು. ವರ್ತೂರು ಸಂತೋಷ್ ಜೊತೆಗಿನ ಅವರ ಸ್ನೇಹಸಂಬಂಧವಂತೂ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಮನೆಯೊಳಗೆ ಅವರ ವರ್ತನೆ, ತಂತ್ರಗಾರಿಕೆಯನ್ನು ಗಮನಿಸಿದ ಉಳಿದ ಸದಸ್ಯರು ತುಕಾಲಿ ಟಾಪ್‌ 5ನಲ್ಲಿ ಇರುತ್ತಾರೆ ಎಂದು ಊಹಿಸಿದ್ದರು. ನಮೃತಾ, ಮೈಕಲ್, ಸಿರಿ, ಸ್ನೇಹಿತ್, ಭಾಗ್ಯಶ್ರೀ  ಮತ್ತು ನೀತು ಅವರು ತುಕಾಲಿ ಅವರನ್ನು ಟಾಪ್‌ 5ನಲ್ಲಿ ನೋಡುತ್ತೇವೆ ಎಂದು ಹೇಳಿದ್ದರು. ಅವರ ಊಹೆಯಂತೆ ತುಕಾಲಿ ಟಾಪ್‌6ನಿಂದ ಟಾಪ್‌ 5ಗೆ ಜಿಗಿಯುತ್ತಾರೆ ಎಂದು ಕಾದುನೋಡಬೇಕಷ್ಟೆ.

Bigg Boss 2 8

ಕಾರ್ತಿಕ್ ಮಹೇಶ್‌

ಲವಲವಿಕೆಯ ವ್ಯಕ್ತಿತ್ವ, ಎಲ್ಲದರಲ್ಲಿಯೂ ಪಾಲ್ಗೊಳ್ಳುವ ಉತ್ಸಾಹ, ಸ್ನೆಹಪರ, ಭಾವುಕ ಮನಸ್ಸು ಈ ಎಲ್ಲವೂ ಕಾರ್ತಿಕ್ ಮಹೇಶ್ ಅವರನ್ನು ಮನೆಯ ಬಹುತೇಕ ಸದಸ್ಯರ ಮನಸಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದವು. ಕಾರ್ತಿಕ್ ಅವರನ್ನು ಫೇಕ್‌ ಎಂದು ಉಳಿದ ಸದಸ್ಯರು ಉಲ್ಲೇಖಿಸಿದ್ದು ತುಂಬವೇ ವಿರಳ. ಇದು ಅವರ ವ್ಯಕ್ತಿತ್ವದ ಇನ್ನೊಂದು ಆಯಾಮವನ್ನು ಸೂಚಿಸುವಂತಿದೆ. ತನಿಷಾ, ಮೈಕಲ್, ಪವಿ, ಸಿರಿ, ಸ್ನೇಹಿತ್, ಭಾಗ್ಯಶ್ರೀ, ನೀತು ಅವರುಕಾರ್ತಿಕ್ ಅವರನ್ನು ಟಾಪ್ 5ನಲ್ಲಿ ನೋಡುತ್ತೇವೆ ಎಂದು ಊಹಿಸಿದ್ದರು. ಅದರಲ್ಲಿಯೂ ಮನೆಯೊಳಗೆ ಆಪ್ತಸ್ನೇಹವನ್ನು ಕಾಪಾಡಿಕೊಂಡಿದ್ದ ತನಿಷಾ ಅವರು, ‘ಕಾರ್ತಿಕ್ ಗೆಲ್ಲಬೇಕು ಎಂಬ ಆಸೆ ಇದೆ.  ಆದರೆ ಸಂಗೀತಾ ಗೆಲ್ಲಬಹುದು ಅನಿಸುತ್ತಿದೆ’ ಎಂದು ಹೇಳಿದ್ದರು. ಸಿರಿ ಕೂಡ,  ‘ಕಾರ್ತಿಕ್ ಗೆಲ್ಲಬೇಕು’ ಎಂದು ಹೇಳಿದ್ದರು. ಅದಕ್ಕೆ ಕಾರಣ ಕಾರ್ತೀಕ್ ಜೆನ್ಯೂನ್‌ ಎಂಬುದು.

Bigg Boss 1
ವಿನಯ್ ಗೌಡ

‘ಐ ಆಮ್ ವಿಲನ್’ ಎನ್ನುತ್ತಲೇ ಒಳಹೋದ ವಿನಯ್ ಗೌಡ ಮನೆಯೊಳಗಿನ ಹಲವರ ಪಾಲಿಗೆ ಹೀರೊ ಆಗಿದ್ದೂ ಸತ್ಯ. ಒಂದು ಹಂತದಲ್ಲಿಯಂತೂ ಸ್ವತಃ ಸುದೀಪ್‌ ಅವರೇ, ‘ನಮ್ಮ ಕಣ್ಣಿಗೆ ಒಬ್ಬರು ಮಾತ್ರ ಫಿನಾಲೆ ವೀಕ್‌ಗೆ ಹೋಗುವ ಕಂಟೆಸ್ಟೆಂಟ್ ಆಗಿ ಕಾಣಿಸುತ್ತಿದ್ದಾರೆ. ಉಳಿದವರು ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತಿರುವ ಹಾಗೆ ಕಾಣಿಸುತ್ತಿದೆ’ ಎಂದೇ ನೇರವಾಗಿ ಹೇಳಿದ್ದರು. ಅವರು ಹೇಳಿದ್ದು ವಿನಯ್ ಅವರ ಬಗ್ಗೆಯೇ. ನಂತರದ ವಾರಗಳಲ್ಲಿಈ ಲೆಕ್ಕಾಚಾರ ಬದಲಾಯಿತಾದರೂ, ವಿನಯ್ ಅವರು ತಮ್ಮದೇ ದಾರಿಯಲ್ಲಿ ಮುಂದೆ ನಡೆಯುತ್ತಲೇ ಬಂದರು. ಜಿಯೊಸಿನಿಮಾ ಸಂದರ್ಶನಗಳಲ್ಲಿ ನಮ್ರತಾ, ಮೈಕಲ್, ಪವಿ, ಸ್ನೇಹಿತ್‌ ಎಲ್ಲವೂ ವಿನಯ್ ಹೆಸರನ್ನು ಉಲ್ಲೇಖಿಸಿದ್ದಾರೆ. ಮೈಕಲ್‌, ನಮೃತಾ ಮತ್ತು ಸ್ನೇಹಿತ್ ‘ವಿನಯ್ ಗೆಲ್ಲಬೇಕು ಎಂಬುದು ನನ್ನ ಆಸೆ’ ಎಂದು ಹೇಳಿಕೊಂಡಿದ್ದಾರೆ.  ಮನೆಯಿಂದ ಹೊರಬಂದ ಸ್ಪರ್ಧಿಗಳ ಊಹೆ ಏನೇ ಇದ್ದರೂ ಅದು ಊಹೆ ಮಾತ್ರವೇ. ಅದು ನಿರ್ಧಾರಾತ್ಮಕ ಅಲ್ಲವೇ ಅಲ್ಲ. ಯಾಕೆಂದರೆ ಕೊನೆಗೂ ಒಬ್ಬ ಸ್ಪರ್ಧಿ ಬಿಗ್‌ಬಾಸ್ ಗೆಲ್ಲಲು ಸಾಧ್ಯವಾಗುವುದು ಜನರ ವೋಟ್‌ನಿಂದ. ಮನೆಯಿಂದಾಚೆಗೆ ಜನರ ಕಣ್ಣಿಗೆ ಅವರ ವ್ಯಕ್ತಿತ್ವ ಹೇಗೆ ಕಾಣಿಸುತ್ತಿದೆ, ಅದನ್ನು ಅವರು ಎಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ, ಆ ಮೆಚ್ಚುಗೆ ಎಷ್ಟರಮಟ್ಟಿಗೆ ಮತಗಳಾಗಿ ಬದಲಾಗುತ್ತಿವೆ ಎನ್ನುವುದೇ ಗೆಲುವಿನ ನಿರ್ಣಾಯಕ ಸಂಗತಿ. ಹಾಗೆ ನೋಡಿದಾಗ, ಮನೆಯೊಳಗೆ ಉಳಿದಿರುವ ಪ್ರತಾಪ್, ವರ್ತೂರು ಸಂತೋಷ್ ಅವರ ಜನಪ್ರಿಯತೆ ಏನೂ ಕಮ್ಮಿಯದಲ್ಲ. ಹಾಗಾಗಿ ಎಲಿಮಿನೇಟೆಡ್ ಸ್ಪರ್ಧಿಗಳ ಊಹೆಯನ್ನು ಸುಳ್ಳಾಗಿಸಿ ಇವರಿಬ್ಬರಲ್ಲಿ ಒಬ್ಬರು ‘ಈ ಸಲ ಕಪ್ ನಮ್ದೆ’ ಎಂದು ಗೆಲುವಿನ ನಗು ಬೀರಿದರೂ ಅಚ್ಚರಿಯಿಲ್ಲ.

 

ಈ ಎಲ್ಲ ಊಹೆ, ನಿರೀಕ್ಷೆ, ಆತಂಕಗಳಿಗೆ ಉತ್ತರ ಸಿಗಲು ತುಂಬ ಕಾಯಬೇಕಾಗಿಲ್ಲ. ಈ ಭಾನುವಾರ ನಡೆಯಲಿರುವ ಫಿನಾಲೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಫಿನಾಲೆಯ ನೇರಪ್ರಸಾರ ಜಿಯೊಸಿನಿಮಾದಲ್ಲಿ ವೀಕ್ಷಿಸಬಹುದು.

Share This Article