ಬೆಂಗಳೂರು: ಭಾರತದ 14ನೇ ರಾಷ್ಟ್ರಪತಿ ಆಯ್ಕೆಯ ಮತ ಎಣಿಕೆ ಇಂದು ನಡೆಯಲಿದ್ದು, ಸಂಜೆ ವೇಳೆಗೆ ರಾಷ್ಟ್ರಪತಿ ಯಾರು ಅನ್ನೋ ಕುತೂಹಲಕ್ಕೆ ತೆರೆ ಬೀಳಲಿದೆ.
ರಾಷ್ಟ್ರಪತಿಯಾಗಿ ಎನ್ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಆಯ್ಕೆ ಬಹುತೇಕ ಖಚಿತವಾಗಿದ್ದು, ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾಕುಮಾರ್ ಅಚ್ಚರಿ ರೀತಿಯಲ್ಲಿ ಗೆದ್ದು ಬರ್ತಾರ ಅನ್ನೋ ಕುತೂಹಲವೂ ಇದೆ. ಜುಲೈ 17ರಂದು ಮತದಾನ ನಡೆದಿದ್ದು ಸಂಸತ್ ಸೇರಿ ಒಟ್ಟು 32 ಮತಕೇಂದ್ರಗಳ ಸ್ಥಾಪನೆ ಮಾಡಲಾಗಿತ್ತು.
ಶೇಕಡ 99ರಷ್ಟು ಮತದಾನ ನಡೆದಿತ್ತು. ಒಟ್ಟು 4,896 ಮತ ಚಲಾವಣೆಯಾಗಿದ್ದು, 4,120 ಶಾಸಕರು ಹಾಗೂ 776 ಸಂಸದರು ಮತ ಚಲಾಯಿಸಿದ್ದಾರೆ. ಪ್ರತಿ ಸಂಸದರ ಮತಮೌಲ್ಯ 708 ಆಗಿದ್ದು, ಒಟ್ಟು ಮತಗಳ ಮೌಲ್ಯ 5 ಲಕ್ಷದ 49 ಸಾವಿರದ 408 ಆಗಿದೆ. 4,120 ಶಾಸಕರ ಮತಗಳ ಮೌಲ್ಯ ಒಗ್ಗೂಡಿಸಿದಾಗ ಒಟ್ಟು 5 ಲಕ್ಷದ 49 ಸಾವಿರದ 474 ಆಗುತ್ತದೆ.
ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಆಲ್ಫಬೆಟ್ ಪ್ರಕಾರ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ 4 ಹಂತದಲ್ಲಿ 8 ರೌಂಡ್ಗಳಲ್ಲಿ ನಡೆಯಲಿದೆ. ಗೆದ್ದ ಪ್ರಥಮ ಪ್ರಜೆ ಸೋಮವಾರ ಅಂದ್ರೆ 24ರಂದು ಅಧಿಕಾರಕ್ಕೆ ಏರಲಿದ್ದಾರೆ. ಈಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೆಹಲಿಯ 10 ರಾಜಾಜಿ ಮಾರ್ಗ್ನಲ್ಲಿ ಇನ್ಮುಂದೆ ವಾಸ್ತವ್ಯ ಹೂಡಲಿದ್ದಾರೆ.