-ದೋಸ್ತಿ ಸರ್ಕಾರಕ್ಕೆ ‘ಕೈ’ ಕೊಡ್ತಾರಾ ಮಿತ್ರರು?
ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸಿ ಕೈ ಸುಟ್ಟುಕೊಂಡಿದ್ದ ಬಿಜೆಪಿ ನಾಯಕರು ದೆಹಲಿ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರಂತೆ. ನವದೆಹಲಿ ತಮ್ಮ ಶಾಸಕರೊಂದಿಗೆ ವಾಸ್ತವ್ಯ ಹೂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಕಮಲದ ರೂಪುರೇಷಗಳನ್ನು ಹಿಡಿದುಕೊಂಡು ಸಿದ್ಧರಾಗಿದ್ದಾರಂತೆ. ಯೋಜನೆಯಂತೆ ಒಟ್ಟು ಮೂರು ಹಂತಗಳಲ್ಲಿ ಆಪರೇಷನ್ ನಡೆಸಿ ದೋಸ್ತಿಗಳಿಗೆ ಶಾಕ್ ನೀಡಲಿದ್ದಾರಂತೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಗ್ರೀನ್ ಸಿಗ್ನಲ್ ಗಾಗಿ ರಾಜ್ಯಾಧ್ಯಕ್ಷರು ಕಾಯುತ್ತಿದ್ದಾರಂತೆ.
ಆಪರೇಷನ್ ಹಂತ 1: ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಶಾಸಕರನ್ನು ಸೆಳೆಯುವುದು. ಅವರ ಮೂಲಕವೇ ಬೆಂಬಲ ವಾಪಾಸ್ ಪಡೆದಿದ್ದರ ಬಗ್ಗೆ ರಾಜ್ಯಪಾಲರಿಗೆ ಪತ್ರ ರವಾನಿಸುವುದು. ಮುಳಬಾಗಿಲು ಶಾಸಕ ನಾಗೇಶ್ ಮತ್ತು ಮಾಜಿ ಸಚಿವ, ರಾಣೇಬೆನ್ನೂರು ಶಾಸಕ ಆರ್.ಶಂಕರ್ ಅವರಿಂದಲೂ ಬೆಂಬಲ ವಾಪಾಸ್ ಪಡೆಯಲು ಸೂಚಿಸಲಾಗುವುದು. ಈಗಾಗಲೇ ಈ ಇಬ್ಬರು ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆಪರೇಷನ್ ಹಂತ 2: 2ನೇ ಹಂತದಲ್ಲಿ ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸುವುದು. ಸಚಿವ ಮತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರನ್ನು ಸೆಳೆಯುವುದು. ಶಾಸಕರಾದ ನಾಗೇಂದ್ರ, ಆನಂದ್ ಸಿಂಗ್, ಕಂಪ್ಲಿ ಗಣೇಶ್, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ಶಿವರಾಮ್ ಹೆಬ್ಬಾರ್ ಸೇರಿ ಹಲವರಿಂದ ರಾಜೀನಾಮೆ ಕೊಡಿಸಲು ಪ್ಲಾನ್ ರೂಪಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆಪರೇಷನ್ ಹಂತ 3: ಅತೃಪ್ತರಲ್ಲದೇ ಇತರೆ ಶಾಸಕರನ್ನು ಸೆಳೆಯುವುದು. ಮ್ಯಾಜಿಕ್ ನಂಬರ್ ತಲುಪವರೆಗಗೂ ಆಪರೇಷನ್ ಕಮಲ ತೆರೆಮರೆಯಲ್ಲಿ ನಡೆಸುವುದು. ಈಗಾಗಲೇ ಬಿಜೆಪಿ ಅತೃಪ್ತ ಶಾಸಕರನ್ನು ಎರಡು ಗುಂಪುಳಾಗಿ ಬಿಡುಗಡೆ ಮಾಡಿದ್ದು, ಮೊದಲ ಗುಂಪಿನಲ್ಲಿರುವ ಶಾಸಕರು ಕಮಲ ಹಿಡಿಯಲು ಸಿದ್ಧರಾದವರು. ಮೊದಲ ಗುಂಪಿನ ಶಾಸಕರ ಸಹಾಯದಿಂದ ಎರಡನೇ ಗುಂಪಿನಲ್ಲಿರುವ ನಾಯಕರನ್ನು ಸೆಳೆದುಕೊಳ್ಳುವುದು. ಹೀಗೆ ಇದು ಸರ್ಕಾರ ರಚನೆಯಾಗುವರೆಗೂ ಆಪರೇಷನ್ ಹಂತ 3 ಚಾಲನೆಯಲ್ಲಿರಲಿದೆಯಂತೆ.
ಒಂದು ವೇಳೆ ಕಾಂಗ್ರೆಸ್ ತಿರುಗೇಟು ನೀಡಲು ಸಿದ್ಧವಾದ್ರೆ ತಮ್ಮ ಶಾಸಕರನ್ನು ಉಳಿಸಿಕೊಳ್ಳುವದಕ್ಕಾಗಿ ಯಡಿಯೂರಪ್ಪ ತಮ್ಮ ತಂಡದೊಂದಿಗೆ ದೆಹಲಿ ತಲುಪಿದ್ದಾರೆ. ಮೊದಲು ನಮ್ಮವರನ್ನು ರಕ್ಷಿಸಿ, ಬೇರೆ ಪಕ್ಷದವರನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ಇದ್ದಂತೆ ಕಾಣುತ್ತಿದೆ. ದೆಹಲಿ ತಲುಪಿರುವ ಶಾಸಕರು ಮಾತ್ರ ಇದು ಕೇವಲ ಲೋಕಸಭಾ ಚುನಾವಣೆ ಸಿದ್ಧತೆಗಾಗಿ ಸಭೆ ನಡೆಯುತ್ತಿದ್ದರಿಂದ ರಾಜಧಾನಿಗೆ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv