ದರ್ಶನ್ ಹುಟ್ಟು ಹಬ್ಬದ ದಿನದಂದು ವೀರ ಸಿಂಧೂರ ಲಕ್ಷ್ಮಣ ಸಿನಿಮಾದ ಅನೌನ್ಸ್ ಮೆಂಟ್ ಆಗಿದೆ. ಈ ಸಿನಿಮಾವನ್ನು ಮೀಡಿಯಾ ಹೌಸ್ ನಿರ್ಮಾಣ ಸಂಸ್ಥೆ ಮಾಡಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಈ ವಿಷಯ ಆಚೆ ಬರುತ್ತಿದ್ದಂತೆಯೇ ಈ ಹಿಂದೆ ಇದೇ ಸಿನಿಮಾಗೆ ಪೂಜೆ ಸಲ್ಲಿಸಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ (Umapati Srinivas Gowda) ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಜೊತೆಗೆ ರಾಧಾ ಕೃಷ್ಣ ಪಲ್ಲಕ್ಕಿ ಎನ್ನುವವರು ಕೂಡ ಇದೇ ಹೆಸರಿನ ಸಿನಿಮಾ ಮಾಡಲು ಮುಂದಾಗಿದ್ದರು.
ಮೂರು ವರ್ಷಗಳ ಹಿಂದೆಯೇ ವೀರ ಸಿಂಧೂರ ಲಕ್ಷ್ಮಣ ಸಿನಿಮಾ ಕುರಿತಂತೆ ಸುದ್ದಿ ಹೊರ ಬಿದ್ದಿತ್ತು. ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗಿತ್ತು. ಸ್ಕ್ರಿಪ್ಟ್ ಪೂಜೆ ಕೂಡ ಮಾಡಲಾಗಿತ್ತು. ಆದರೆ, ಕಾಲ ಉರುಳಿದಂತೆ ಈ ಸಿನಿಮಾದ ಅಪ್ ಡೇಟ್ ಕೂಡ ಸಿಗಲಿಲ್ಲ. ಮೂರು ವರ್ಷಗಳ ನಂತರ ಮತ್ತೆ ಈ ಸಿನಿಮಾ ಸುದ್ದಿಗೆ ಸಿಕ್ಕಿದೆ. ಹಾಗಾಗಿ ಈ ಸಿನಿಮಾ ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಶೈಲಜಾ ನಾಗ್, ದರ್ಶನ್, ತರುಣ್ ಕಾಂಬಿನೇಷನ್ ಪಕ್ಕಾ
ಈಗಾಗಲೇ ಯಜಮಾನ ಮತ್ತು ಕ್ರಾಂತಿ ಸಿನಿಮಾದಂತಹ ಎರಡು ಸೂಪರ್ ಹಿಟ್ ಚಿತ್ರಗಳನ್ನು ದರ್ಶನ್ (Darshan) ಅವರಿಗೆ ನೀಡಿರುವ ಮೀಡಿಯಾ ಹೌಸ್ ನ ಶೈಲಜಾ ನಾಗ್ (Shailaja Nag) ಮತ್ತು ಬಿ.ಸುರೇಶ ಮತ್ತೊಂದು ಕ್ರಾಂತಿಕಾರಿ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ವೀರಯೋಧ ಸಿಂಧೂರ ಲಕ್ಷ್ಮಣ (Veera Sindhoora Laxman) ಅವರ ಜೀವನವನ್ನು ಆಧರಿಸಿದ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಕನ್ನಡ ಸಿನಿಮಾ ರಂಗಕ್ಕೆ ಯಜಮಾನ ಮತ್ತು ಕ್ರಾಂತಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು ಶೈಲಜಾ ನಾಗ್ ಮತ್ತು ಬಿ. ಸುರೇಶ. ಇದೇ ಮೊದಲ ಬಾರಿಗೆ ಅವರು ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಕಿಡಿ ವೀರ ಸಿಂಧೂರ ಲಕ್ಷ್ಮಣನಂಥ ಐತಿಹಾಸಿಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕಾಟೇರ ಖ್ಯಾತಿಯ ತರುಣ್ ಸುಧೀರ್ (Tarun Sudhir) ನಿರ್ದೇಶನ ಮಾಡುತ್ತಿದ್ದಾರೆ.
ವೀರ ಸಿಂಧೂರ ಲಕ್ಷ್ಮಣ ಅಂದಾಕ್ಷಣ ಥಟ್ಟನೆ ನೆನಪಾಗೋದು ಹಿರಿಯ ನಟ ಸುಧೀರ್. ಸಿಂಧೂರ ಲಕ್ಷ್ಮಣ ನಾಟಕವನ್ನು ಜನಪ್ರಿಯಗೊಳಿಸಿದ ಮಹಾನ್ ಕಲಾವಿದ ಸುಧೀರ್. ತಮ್ಮ ತಂದೆಯ ಅಭಿನಯದ ಅಪರೂಪದ ಪಾತ್ರವನ್ನು ತೆರೆಗೆ ತರಲು ರೆಡಿಯಾಗುತ್ತಿದ್ದಾರೆ ತರುಣ್ ಸುಧೀರ್. ಕ್ರಾಂತಿ ಪುರುಷ ಲಕ್ಷ್ಮಣನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಗೆ ಸಾಕಷ್ಟು ಕೊಡುಗೆ ನೀಡಿದ ಮೀಡಿಯಾ ಹೌಸ್ ಸ್ಟುಡಿಯೋ, ಈಗಾಗಲೇ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳನ್ನು ತಯಾರಿಸಿದೆ. ಜೊತೆಗೆ ಭಾರೀ ಬಜೆಟ್ ಸಿನಿಮಾಗಳನ್ನೂ ನಿರ್ಮಾಣ ಮಾಡಿದೆ. ಇದೀಗ ಮತ್ತೊಂದು ಅದ್ಧೂರಿ ಬಜೆಟ್ ಚಿತ್ರಕ್ಕೆ ಕೈ ಹಾಕಿದೆ.