ಇದೇ ಮೊದಲ ಬಾರಿಗೆ ತೆಲುಗಿನ ಇಬ್ಬರೂ ಸ್ಟಾರ್ ನಟರು ಒಂದಾಗಿ ‘ಆರ್.ಆರ್.ಆರ್’ ಸಿನಿಮಾ ಮಾಡಿದ್ದಾರೆ. ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಈ ಇಬ್ಬರೂ ಕಲಾವಿದರ ಅಭಿಮಾನಿಗಳಿಗೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರೆ, ರಾಜಮೌಳಿ ಈ ಸಿನಿಮಾದಲ್ಲಿ ಇಬ್ಬರನ್ನೂ ಒಟ್ಟಾಗಿಸಿಕೊಂಡು ಸಿನಿಮಾ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಯಾರು ಹೀರೋ, ಯಾರು ವಿಲನ್ ಎಂಬ ಚರ್ಚೆ ಶುರುವಾಗಿದೆ.
ಇಂದು ಆರ್.ಆರ್.ಆರ್ ಚಿತ್ರತಂಡ ಕರ್ನಾಟಕಕ್ಕೆ ಆಗಮಿಸಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಗವಹಿಸುತ್ತಿದೆ. ಅದಕ್ಕೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ಚಿತ್ರತಂಡ ಹಲವು ವಿಷಯಗಳನ್ನು ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಇಬ್ಬರೂ ನಾಯಕರಾ? ಅಥವಾ ಒಬ್ಬರು ವಿಲನ್ ಮತ್ತೊಬ್ಬರು ಹೀರೋನಾ ಎಂಬ ಪ್ರಶ್ನೆ ನಿರ್ದೇಶಕರಿಗೆ ಎದುರಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ
ಸಿನಿಮಾದ ಟ್ರೇಲರ್ ನೋಡಿದರೆ, ಒಬ್ಬರು ಖಳನಟರಂತೆ ಮತ್ತೊಬ್ಬರು ನಟರಂತೆ ಬಿಂಬಿಸಲಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಯಾರು, ಯಾವ ಪಾತ್ರ ಮಾಡಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಹೀಗಾಗಿ ನಿರ್ದೇಶಕ ರಾಜಮೌಳಿಗೆ ಮಾಧ್ಯಮದವರು ಈ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ನಿರ್ದೇಶಕರಿಂದ ಬಂದ ಉತ್ತರ ಮಜವಾಗಿದೆ. ಈ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? ಎಂದು ಕೇಳಲಾದ ಪ್ರಶ್ನೆಗೆ, ಜಾಣತನದಿಂದಲೇ ಉತ್ತರ ನೀಡಿದ್ದಾರೆ ರಾಜಮೌಳಿ. ‘ಈ ಪ್ರಶ್ನೆಗೆ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಅವರೇ ಉತ್ತರಿಸಬೇಕು’ ಎಂದು ಜಾರಿಕೊಂಡರು.
ಕೂಡಲೇ ಈ ಪ್ರಶ್ನೆಗೆ ಉತ್ತರಸಿದ ಜೂನಿಯರ್ ಎನ್.ಟಿ.ಆರ್. ನಾವಿಬ್ಬರೂ ವಿಲನ್. ಜತೆಗೆ ರಾಜಮೌಳಿ ಅವರೂ ವಿಲನ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲಿಗೆ ಇಬ್ಬರಲ್ಲ ಒಬ್ಬರು ನೆಗೆಟಿವ್ ಶೇಡ್ ರೀತಿಯ ಪಾತ್ರವನ್ನು ಮಾಡಿದ್ದಾರೆ ಎನ್ನುವುದು ಖಾತ್ರಿಯಾಗಿದೆ. ಇದನ್ನೂ ಓದಿ : ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photos
ಆರ್.ಆರ್.ಆರ್. ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ರಾಮ್ ಚರಣ್ ತೇಜ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಹಿಟ್ ಆಗಿವೆ. ಟ್ರೇಲರ್ ಕೂಡ ಭರವಸೆ ಮೂಡಿಸಿದೆ. ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.