ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕಿಳಿದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವತಃ ತಾವೇ ಬೈಕ್ ಓಡಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಇಂದು ಮಳವಳ್ಳಿ ತಾಲೂಕಿನಲ್ಲಿ ಡಿ ಬಾಸ್ ಸುಮಲತಾ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ರಾಮಂದೂರು ಗ್ರಾಮಕ್ಕೆ ತೆರಳಿದ್ದು, ಅವರ ಅಭಿಮಾನಿಗಳು ಪ್ರೀತಿಯಿಂದ ದರ್ಶನ್ರನ್ನು ಸ್ವಾಗತಿಸಿ ಬೈಕ್ ಓಡಿಸುವಂತೆ ಕೋರಿದ್ದಾರೆ. ಆದ್ದರಿಂದ ಫ್ಯಾನ್ಸ್ ಬಲವಂತಕ್ಕೆ ಮನಸೋತ ದಚ್ಚು ಸ್ವತಃ ತಾವೇ ಬೈಕ್ ಓಡಿಸಿ ಅವರನ್ನು ಖುಷಿಪಡಿಸಿದರು.
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ನಲ್ಲಿ ಹಿಂದೆ ಒಬ್ಬ ಅಭಿಮಾನಿಯನ್ನು ಕೂರಿಸಿಕೊಂಡು, ದರ್ಶನ್ ಊರೊಳಗೆ ಒಂದು ರೌಂಡ್ ಹೋಗಿ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಕೂಡ ಡಿ ಬಾಸ್ಗೆ ಸಾಥ್ ನೀಡಿದ್ದು, ಅವರ ಬೈಕ್ ಹಿಂದೆಯೇ ತಾವು ಹೋಗಿ ಅಭಿಮಾನ ಮೆರೆದರು.
ಗುರುವಾರದಂದು ಕೆಆರ್ ಪೇಟೆ ಸೋಮನಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ಡಿ ಬಾಸ್ ಆಗಮಿಸಿದ್ದರು. ಆಗ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದರು. ಈಗ ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ಮತ್ತೊಮ್ಮೆ ದಚ್ಚು ಎಲ್ಲರ ಗಮನ ಸೆಳೆದಿದ್ದಾರೆ.