ನಟ ಯಶ್ (Yash) ಅವರ ಹುಟ್ಟುಹಬ್ಬದಂದು (ಜ.8) ಕಟೌಟ್ ನಿಲ್ಲಿಸಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ನಿಧನರಾಗಿದ್ದಾರೆ. ತಡರಾತ್ರಿ ಸಂಭವಿಸಿದ ದುರ್ಘಟನೆ ವೇಳೆ ಯಶ್ ಎಲ್ಲಿದ್ದರು, ಏನ್ಮಾಡ್ತಿದ್ದರು? ಎಂಬುದರ ಮಾಹಿತಿ ಇಲ್ಲಿದೆ.
ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿ ಬಳಿಕ ಗೋವಾದಲ್ಲಿದ್ರು ಯಶ್. ದುರ್ಘಟನೆ ಸುದ್ದಿ ತಿಳಿದ ಕೂಡಲೇ ಯಶ್ ಹುಟ್ಟುಹಬ್ಬದ ಖುಷಿಗೆ ಬ್ರೇಕ್ ಹಾಕಿ ಗೋವಾದಿಂದ ಹುಬ್ಬಳ್ಳಿಗೆ ವಿಮಾನ ಮೂಲಕ ಹುಬ್ಬಳ್ಳಿ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಗದಗದ ಸೊರಣಗಿ ಗ್ರಾಮಕ್ಕೆ ತೆರಳಿ ಮೃತರಾಗಿರೋ ಮೂವರು ಅಭಿಮಾನಿಗಳ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ತಿಳಿಸಿದ್ದಾರೆ.
‘ಟಾಕ್ಸಿಕ್’ ಸಿನಿಮಾಗಾಗಿ ಮಲೇಷಿಯಾ, ಶ್ರೀಲಂಕಾ ಸೇರಿದಂತೆ ಕೆಲವೊಂದು ಸ್ಥಳಗಳನ್ನ ಯಶ್ ಫೈನಲ್ ಮಾಡಲು ಹೋಗಿದ್ದರು. 2025ರ ಏಪ್ರಿಲ್ನಲ್ಲಿ ‘ಟಾಕ್ಸಿಕ್’ ಸಿನಿಮಾ ಬರೋದಾಗಿ ಯಶ್ ಅನೌನ್ಸ್ ಮಾಡಿರೋದ್ರಿಂದ ಅದಕ್ಕಾಗಿ ಸಕಲ ತಯಾರಿ ಕೂಡ ಮಾಡ್ತಿದ್ದಾರೆ. ಇದರ ನಡುವೆ ದುರಂತ ಸುದ್ದಿ ಕೇಳಿದ ಕೂಡಲೇ ಮೃತಪಟ್ಟಿರೋ ಮೂವರ ಅಭಿಮಾನಿಗಳ ಕುಟುಂಬಕ್ಕೆ ಭೇಟಿ ನೀಡಿ, ಅವರ ಆಕ್ರಂದನಕ್ಕೆ ಯಶ್ ಮಿಡಿದಿದ್ದಾರೆ.
ಯಶ್ ಬರ್ತ್ಡೇಗಾಗಿ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ನಿಧನರಾಗಿರುವ ಮೂವರು ಅಭಿಮಾನಿಗಳ ಕುಟುಂಬಸ್ಥರನ್ನು ಯಶ್ ಭೇಟಿಯಾಗಿ ಕುಟುಂಬದ ಜೊತೆ ಇರೋದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ:ಮುತ್ತಣ್ಣನಾದ ಡೈನಾಮಿಕ್ ಪ್ರಣಂ ದೇವರಾಜ್
ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯರಾತ್ರಿ ವೇಳೆ, ಹತ್ತಾರು ಜನ ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ವಿದ್ಯುತ್ ತಂತಿ ಯುವಕರ ಗಮನಕ್ಕೆ ಬಂದಿಲ್ಲ. ಇದರಿಂದ ಈ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.