ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾದ ಚಿಂಚೊಳಿ ಶಾಸಕ ಉಮೇಶ್ ಜಾಧವ್ ಮಾತೃ ಪಕ್ಷಕ್ಕೆ ಹಿಂದಿರುಗುತ್ತಿದ್ದಾರೆ ಎಂಬ ಸುದ್ದಿಯೊಂದು ಕಾಂಗ್ರೆಸ್ ಅಂಗಳದಲ್ಲಿ ಬೆಳಗ್ಗೆ ಹರಿದಾಡಿತ್ತು. ಶಾಸಕರಾದ ಉಮೇಶ್ ಜಾಧವ್ ಸ್ವಕ್ಷೇತ್ರದಲ್ಲಿಯೂ ಕಾಣಿಸುತ್ತಿಲ್ಲ. ಮೂರು ದಿನಗಳ ಹಿಂದೆ ಮತ್ತೆ ಮುಂಬೈ ರೆಸಾರ್ಟ್ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿತ್ತು. ಸದ್ಯ ಉಮೇಶ್ ಜಾಧವ್ ಬೆಂಗಳೂರಿನಲ್ಲಿದ್ದು, ಯಾರ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಉಮೇಶ್ ಜಾಧವ್ ಮುಂಬೈನಿಂದ ಬಂದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೇರವಾಗಿ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಕ್ಷೇತ್ರದ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಅಂತ ಹೇಳಿದ್ದರು. ಬೆಂಬಲಿಗರೊಂದಿಗೆ ನಡೆದ ಸಭೆಯಲ್ಲಿ ಬಿಜೆಪಿ ಸೇರಲು ಕ್ಷೇತ್ರದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದವು.
ಮನವೊಲಿಕೆ ಮಾಡಿದ್ರಾ ಈಶ್ವರ್ ಖಂಡ್ರೆ?
ರಾಜಕೀಯ ಗಾಡ್ ಫಾದರ್, ಕೆಪಿಸಿಸಿ ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ ಅಸಮಾಧಾನಿತ ಉಮೇಶ್ ಜಾಧವ್ ಜೊತೆ ಚರ್ಚಿಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರಂತೆ. ಈ ವೇಳೆ ಉಮೇಶ್ ಜಾಧವ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಟಿಕೆಟ್ ಮತ್ತೆ ನನಗೆ ಕೊಡಬೇಕು ಹಾಗೂ ನನ್ನ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಎಂಬ ಎರಡು ಷರತ್ತುನ್ನು ವಿಧಿಸಿದ್ದಾರೆ ಎನ್ನಲಾಗುತ್ತಿತ್ತು.
ಉಮೇಶ್ ಜಾಧವ್ ಷರತ್ತುಗಳನ್ನು ಒಪ್ಪಿ ಕೂಡಲೇ ಕೆಪಿಸಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಹೀಗಾಗಿ ಬಿಜೆಪಿಗೆ ಜಿಗಿಯೋ ತಮ್ಮ ನಿರ್ಧಾರದಿಂದ ಶಾಸಕ ಜಾಧವ್ ಹಿಂದೆ ಸರಿದಿದ್ದಾರೆ ಎಂಬ ಚರ್ಚೆ ರಾಜಕೀಯ ಅಂಗಳದಲ್ಲಿ ಆರಂಭವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಉಮೇಶ್ ಜಾಧವ್ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv