ಜೈಪುರ: ಹಿಂದುತ್ವದ ಜ್ಞಾನ ಎಲ್ಲಿಂದ ಬಂತು ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಶ್ನಿಸಿದ್ದಾರೆ.
ಚುನಾವಣಾ ನಿಮಿತ್ತ ರಾಜಸ್ಥಾನದ ಜೋಧಪುರದಲ್ಲಿನ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಹಿಂದೂ ಧರ್ಮಧ ಬಗ್ಗೆ ಎಲ್ಲಾ ಗೊತ್ತಿದೆ ಎಂದು ಸಾಧು-ಸಂತರೇ ಇದುವರೆಗೂ ಹೇಳಿಕೊಂಡಿಲ್ಲ. ಏಕೆಂದರೆ ಹಿಂದೂ ಧರ್ಮವನ್ನು ಯಾರು ಕೂಡ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ಅಗಾಧವಾಗಿದೆ. ಅಲ್ಲದೇ ಹಿಂದುತ್ವದ ಬಗ್ಗೆ ನನಗೂ ಗೊತ್ತಿದೆ ಎಂದು ನಾನು ಹೇಳಿಕೊಂಡಿಲ್ಲ. ಆದರೆ ಇದು ಕೇವಲ ನಾಮಧಾರಿಗಳಿಗೆ ಮಾತ್ರ ಗೊತ್ತಿರುತ್ತದೆ ಎನ್ನುವ ಮೂಲಕ ರಾಹುಲ್ ಗಾಂಧಿಯವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಕೆಲವರು ಚುನಾವಣಾ ಸಂದರ್ಭದಲ್ಲಿ ಹಿಂದುತ್ವದ ಮೊರೆ ಹೋಗುತ್ತಾರೆ. ಆದರೆ ನೀವು ಅಭಿವೃದ್ಧಿಯನ್ನು ನೋಡಿ ಮತ ಹಾಕುತ್ತೀರೋ ಅಥವಾ ಜಾತಿ-ಧರ್ಮದ ಮೇಲೆ ಮತ ಹಾಕುತ್ತೀರಾ ಎಂದು ಮತದಾರರಿಗೆ ಪ್ರಶ್ನಿಸಿದರು.
ಕಾಂಗ್ರೆಸ್ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಇನ್ನು ರಾಜಸ್ಥಾನದಲ್ಲಿಯೂ ಕಾಂಗ್ರೆಸ್ಸಿಗೆ ಸ್ಥಾನ ಸಿಗುವುದಿಲ್ಲ. ಮತದಾರರು ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ನೀಡುವ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ರಾಹುಲ್ ಗಾಂಧಿ ಹೇಳಿದ್ದೇನೆ?
ಶನಿವಾರ ರಾಜಸ್ಥಾನದ ಉದಯ್ಪುರದಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ಅವರು, ಹಿಂದೂ ಧರ್ಮದ ಬಗ್ಗೆ ಪ್ರಧಾನಿ ಮೋದಿಗೆ ಎಷ್ಟು ಗೊತ್ತಿದೆ? ಅವರು ಯಾವ ರೀತಿಯ ಹಿಂದೂ? ಅವರಿಗೆ ಹಿಂದೂ ಧರ್ಮದ ತಳಹದಿಯೇ ಗೊತ್ತಿಲ್ಲ. ಗೀತೆ ಏನು ಹೇಳುತ್ತದೆ ಎಂದರೆ, ಜ್ಞಾನ ಎಲ್ಲೆಡೆಯೂ ಇದೆ. ನಮ್ಮ ಸುತ್ತಮುತ್ತಲಿರುವ ಎಲ್ಲರಲ್ಲೂ ಜ್ಞಾನವಿರುತ್ತದೆ. ನಮ್ಮ ಪ್ರಧಾನ ಮಂತ್ರಿಗಳು ನಾನು ಹಿಂದೂ ಎಂದು ಹೇಳುತ್ತಾರೆ. ಆದರೆ ಅವರಿಗೆ ಧರ್ಮದ ಆಳವೇ ಗೊತ್ತಿಲ್ಲವೆಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv