ಬೆಂಗಳೂರು: ಕಳೆದ ಒಂದೂವರೆ ತಿಂಗಳಿನಿಂದ ಕಾಂಗ್ರೆಸ್ ಹೈಕಮಾಂಡ್ ಗೋಡೆ ಮೇಲೆ ಅದೊಂದೆ ಬರಹ. ತಿಂಗಳಿನಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವವರಿಗೆ ಕಾಣುತ್ತಿರುವುದು ಒಂದೇ ಬರಹ. ಯಾರೇ ಹೋದರು ಎಷ್ಟೇ ಪ್ರಯತ್ನಿಸಿದರೂ ಹೈ ಕಮಾಂಡ್ ಪ್ರತಿಕ್ರಿಯೆ ನಾಳೆ ಬಾ. ಸಿದ್ದರಾಮಯ್ಯ ನಡೆಗೆ ಬೆಚ್ಚಿ ನಾಳೆ ಬಾ ಆಟ ಶುರು ಮಾಡ್ತಾ ಕಾಂಗ್ರೆಸ್ ಹೈ ಕಮಾಂಡ್ ಅನ್ನೋ ಅನುಮಾನ ರಾಜ್ಯ ಕೈ ಪಾಳಯದಲ್ಲಿ ಹುಟ್ಟಿಕೊಂಡಿದೆ.
ಹೌದು ಕೆಪಿಸಿಸಿ, ಸಿಎಲ್ ಪಿ ಹಾಗೂ ವಿಪಕ್ಷ ನಾಯಕನ ಸ್ಥಾನ ಮೂರಕ್ಕೂ ಆಯ್ಕೆ ಕಸರತ್ತನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನು ಮುಂದುವರಿಸಿದೆ. ಅದೇ ಕಾರಣಕ್ಕೆ ಯಾರೇ ಹೋಗಿ ಲಾಬಿ ಮಾಡಿದರೂ, ನಾಳೆ ಬಾ ಅನ್ನೋ ಉತ್ತರವನ್ನಷ್ಟೆ ಕಾಂಗ್ರೆಸ್ ಹೈ ಕಮಾಂಡ್ ಕೊಡುತ್ತಿದೆ. ಇದಕ್ಕೆ ಮೂಲ ಕಾರಣ ಸಿದ್ದರಾಮಯ್ಯ ನಡೆಗೆ ಹೈ ಕಮಾಂಡ್ ಬೆಚ್ಚಿದೆ ಎನ್ನಲಾಗುತ್ತಿದೆ.
ಯಾವ ಕಾರಣಕ್ಕೂ ವಿರೋಧ ಪಕ್ಷದ ನಾಯಕ ಹಾಗೂ ಸಿಎಲ್ ಪಿ ನಾಯಕನ ಸ್ಥಾನವನ್ನ ಪ್ರತ್ಯೇಕಿಸಬಾರದು. ಎರಡು ಒಬ್ಬರಿಗೆ ಕೊಡಬೇಕು ಅನ್ನೋದು ಸಿದ್ದರಾಮಯ್ಯ ವಾದ. ಆದರೆ ರಾಜ್ಯದ ಇತರೆ ನಾಯಕರು ಇದಕ್ಕೆ ಸಿದ್ಧರಿಲ್ಲ. ಜೊತೆಗೆ ಕೈ ಹೆ ಕಮಾಂಡ್ ಸಹಾ ಒಬ್ಬರಿಗೆ ಎರಡು ಸ್ಥಾನ ಕೊಡಲು ಸಿದ್ಧವಿಲ್ಲ. ಅತ್ತ ಸಿದ್ದರಾಮಯ್ಯಗೆ ಅಧಿಕಾರ ನೀಡಿದರು. ವಿಪಕ್ಷ ನಾಯಕನ ಸ್ಥಾನವಷ್ಟೆ ನೀಡಲು ಹೈ ಕಮಾಂಡ್ ಮನಸ್ಸು ಮಾಡಿದೆ ಎನ್ನಲಾಗಿದೆ.
ಆದ್ದರಿಂದ ನೀಡುವ ಅಧಿಕಾರವನ್ನೇ ಸತಾಯಿಸಿ ನೀಡಿದರೆ ಎಲ್ಲರು ಅನಿವಾರ್ಯವಾಗಿ ಒಪ್ಪಿಕೊಳ್ತಾರೆ ಎಂದು ಕೈ ಹೈ ಕಮಾಂಡ್ ನಿರ್ಧರಿಸಿದಂತಿದೆ. ಆದ್ದರಿಂದ ಸಿದ್ದರಾಮಯ್ಯ ವರಸೆಗೆ ಸತಾಯಿಸುವುದು ಸೂಕ್ತ ಎಂದು ನಾಳೆ ಬಾ ಬೋರ್ಡ್ ತಗಲು ಹಾಕಿದೆ ಹೈ ಕಮಾಂಡ್ ಎನ್ನುವ ಮಾತು ಕೈ ಪಾಳಯದಲ್ಲಿ ಜೋರಾಗೆ ಕೇಳಿ ಬರುತ್ತಿದೆ.