ಬೆಂಗಳೂರು: ಹೈಕಮಾಂಡ್ ಹೇಳಿದಾಗ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಸದಾಶಿವ ನಗರದ ನಿವಾಸದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಡಿಕೆಶಿ ಯಾವಾಗ ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ ಹೈಕಮಾಂಡ್ ಹೇಳಿದಾಗ ಎಂದು ಉತ್ತರ ನೀಡಿ ತೆರಳಿದರು.
ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಇಬ್ಬರು ಮಾತನಾಡಿದ್ದೇವೆ ಎಂದು ಸಿಎಂ ತಿಳಿಸಿದರು. ನಾವು ಪಕ್ಷದ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ಇದೇ ಡಿ.8 ರಿಂದ ಅಧಿವೇಶನ ಇರುವುದರಿಂದದ ನಮ್ಮ ರಣ ನೀತಿ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದೇವೆ ಎಂದರು.
ನಾವು ಹಿಂದೆಯೂ ಒಗ್ಗಟ್ಟಾಗಿದ್ದೆವು, ಈಗಲೂ ಒಗ್ಗಟ್ಟಾಗಿದ್ದೇವೆ. ನಮ್ಮಿಬ್ಬರದ್ದು ಒಂದೇ ಸಿದ್ಧಾಂತ. 2028ಕ್ಕೆ ಮತ್ತೆ ನಾವು ಕಾಂಗ್ರೆಸ್ (Congress) ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಬಿಜೆಪಿಯವ್ರು ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸೋದಾಗಿ ಹೇಳಿದ್ದಾರೆ. ಅವರು ಏನೇ ವಿಚಾರ ಪ್ರಸ್ತಾಪ ಮಾಡಿದರೂ ನಾವು ಒಟ್ಟಾಗಿ ಎದುರಿಸುತ್ತೇವೆ ಎಂದು ಹೇಳಿದರು. ಡಿ.8 ರಂದು ಸಂಸದರ ಸಭೆ ಇರುವ ಕಾರಣ ದೆಹಲಿಗೆ ನಾವು ಹೋಗುತ್ತೇವೆ. ಸಮಯ ಸಿಕ್ಕಿದರೆ ಹೈಕಮಾಂಡ್ ಕರೆದರೆ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.
ನಿಮ್ಮ ಮನೆಯ ಬ್ರೇಕ್ಫಾಸ್ಟ್ಗೂ ಡಿಕೆಶಿ ಅವರ ನಿವಾಸದ ಬ್ರೇಕ್ಫಾಸ್ಟ್ಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಇವನು ವೆಜಿಟೇರಿಯನ್, ನಾನು ನಾನ್ ವೆಜಿಟೇರಿಯನ್. ಆದರೆ ಇವತ್ತು ಇವನ ಮನೆಯಲ್ಲಿ ನಾನ್ವೆಜ್ ಇತ್ತು. ನಮ್ಮ ಮನೆಯಲ್ಲಿ ವೆಜ್ ಇತ್ತು. ಇಲ್ಲಿ ಒರಿಜಿನಲ್ ನಾಟಿ ಕೋಳಿ ಸಿಗುವುದಿಲ್ಲ. ಹಳ್ಳಿಯಿಂದ ನಾಟಿಕೋಳಿ ತರಿಸು ಎಂದಿದ್ದೆ ಎಂದರು.
ಡಿಸೆಂಬರ್ 3 ರಂದು ಮಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಅ ಸಭೆಗೆ ವೇಣುಗೋಪಾಲ್ ಬರುತ್ತಾರೆ. ನಾನು ವೇಣುಗೋಪಾಲ್ ಅವತ್ತು ಮಾತನಾಡುತ್ತೇವೆ ಎಂದು ಹೇಳಿದರು.

