ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸದನದಲ್ಲಿ ಮಾಡಿದ ಮಾನಸಿಕ ಅಸ್ಥಿರತೆಯ ಭಾಷಣ ನೋಡಿ ನನಗೆ ಅಯ್ಯೋ ಅನ್ನಿಸಿತು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬಹುಮತ ಸಾಬೀತಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ವಿಶ್ವಾಸ ಮತದ ಬಳಿಕ ಯಡಿಯೂರಪ್ಪನವರು ಹತಾಶರಾಗಿದ್ದಾರೆ. ಸದ್ಯ ಅವರಿಗೆ ದೇವೇಗೌಡರು ಮತ್ತು ನಾನು ಪ್ರಮುಖ ವೈರಿಗಳಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಭಾಷಣದ ಉದ್ದಕ್ಕೂ ನಮ್ಮ ಕುಟುಂಬದ ಮೇಲೆ ಹರಿಹಾಯ್ದರು ಎಂದು ಟೀಕಿಸಿದರು.
ಇಂದು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡುವಲ್ಲಿ ದೇವೇಗೌಡರು ಪ್ರಮುಖ ಪಾತ್ರವಹಿಸುತ್ತಾರೆ. ಈ ಹಿಂದೆ ದೇವೇಗೌಡರು ಚುನಾವಣೆ ಫಲಿತಾಂಶದ ಬಳಿಕ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರೆ ಮಗನನ್ನು ಕುಟುಂಬದಿಂದಲೇ ಬಹಿಷ್ಕಾರ ಹಾಕ್ತೀನಿ ಅಂತಾ ಹೇಳಿದ್ರು. ಒಂದು ವೇಳೆ ದೇವೇಗೌಡರು ಆ ಮಾತು ಹೇಳದೇ ಇದ್ದಿದ್ರೆ ನಾನು ಬಿಜೆಪಿ ಜೊತೆ ಸೇರಿಕೊಳ್ಳುತ್ತೇನೆ ಎಂಬ ಲೆಕ್ಕಾಚಾರ ಹಾಕಿಕೊಂಡಿದ್ರು ಎಂದು ತಿಳಿಸಿದ್ರು.
ಯಡಿಯೂರಪ್ಪರವರು ಭಾಷಣದುದ್ದಕ್ಕೂ ವಿಷ, ಹಾವು, ನಾಗರ ಹಾವು, ಕೆರೆ ಹಾವು, ಕೆಟ್ಟ ಹಾವು ಏನೇನೋ ಭಾಷೆ ಬಳಕೆ ಮಾಡಿದ್ದು, ಅದು ಅವರ ವಿಕೃತ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಪ್ರದರ್ಶನ ಮಾಡಿದೆ. ನಾನು ಈಗಾಗಲೇ ಎಲ್ಲ ರೈತರಿಗೆ ಸಾಲಮನ್ನಾ ಮಾಡುತ್ತೇನೆ ಅಂತಾ ತಿಳಿಸಿದ್ದೇನೆ. ಆದ್ರೆ ಸೋಮವಾರ ಕರ್ನಾಟಕ ಬಂದ್ ಮಾಡುತ್ತೇನೆ ಅಂತಾ ಹೇಳುವುದು ಕೇವಲ ಪೊಲಿಟಿಕಲ್ ಗಿಮಿಕ್ ಅಂತಾ ಲೇವಡಿ ಮಾಡಿದ್ರು.