ಬೆಳಗಾವಿ: ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ರಾಜು ಕಾಗೆ ಅವರ ಭಾಷಣದ ಮಧ್ಯೆ ಗ್ರಾಮಸ್ಥರು ಕಾಂಗ್ರೆಸ್ಗೆ ಜೈ ಅಂತಾ ಘೋಷಣೆ ಕೂಗಿದ್ದಾರೆ.
ರಾಜು ಕಾಗೆ ಅವರು ಜಿಲ್ಲೆಯ ಅಥಣಿ ತಾಲೂಕಿನ ಶಿರೂರು ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ ವೇಳೆ ಮುಜುಗರಕ್ಕೆ ಒಳಗಾಗಿದ್ದಾರೆ. ಶಾಸಕರು ಭಾಷಣ ಮಾಡುತ್ತಿದ್ದಂತೆ ಕೆಲ ಗ್ರಾಮುಸ್ಥರು ಅಡ್ಡಿಪಡಿಸಿದ್ರು. ನಮ್ಮ ಊರಿಗೆ ಯಾಕೆ ಬಂದಿದ್ದೀರಿ? 15 ವರ್ಷಗಳಲ್ಲಿ ನಮ್ಮೂರಲ್ಲಿ ಏನು ಮಾಡಿದ್ರಿ ಅಂತಾ ರಾಜು ಕಾಗ ಅವ್ರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ರು.
ಒಂದು ಕಡೆ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದರೆ, ಕೆಲ ಬಿಜೆಪಿಗೆ ಜೈ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದ್ರು. ಕೂಡಲೇ ಪ್ರಶ್ನೆ ಕೇಳುತ್ತಿದ್ದ ಗ್ರಾಮಸ್ಥರು ಅವರ ವಿರುದ್ಧವಾಗಿ ಕಾಂಗ್ರೆಸ್ಗೆ ಜೈ ಅಂತಾ ಕೂಗುವ ಮೂಲಕ ತಿರುಗೇಟು ನೀಡಿದ್ರು.
ಇದೇ ಮೊದಲೇನಲ್ಲ: ನಾಲ್ಕು ದಿನಗಳ ಹಿಂದೆ ಚಮಕೇರಿ ಗ್ರಾಮಕ್ಕೆ ತೆರಳಿದಾಗಲೂ ರಾಜು ಕಾಗೆ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ನಾಲ್ಕು ಬಾರಿ ಕಾಗವಾಡ ಕ್ಷೇತ್ರದಿಂದ ಶಾಸಕರಾದ್ರೂ ಗ್ರಾಮಗಳ ಅಭಿವೃದ್ಧಿ ಆಗಿಲ್ಲ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಜು ಕಾಗೆ ಒಟ್ಟು ನಾಲ್ಕು ಬಾರಿ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2000ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಯು ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ರು. ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾದ ರಾಜು ಕಾಗೆ ಸತತವಾಗಿ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಶಾಸಕರಾಗಿದ್ದಾರೆ.