ಮುಂಬೈ: ಬಾಬರಿ ಮಸೀದಿ ಕೆಡವಿದಾಗ ನೀವು ನಿಮ್ಮ ಗೂಡು ಸೇರಿದಿರಿ. ನಿಮ್ಮಿಂದ ನಾವು ಹಿಂದುತ್ವದ ಪಾಠ ಕಲಿಯಬೇಕಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿರ್ಧಾರ ನಿಮ್ಮ ಸರ್ಕಾರದ್ದಲ್ಲ. ನ್ಯಾಯಾಲಯದಿಂದ ಈ ತೀರ್ಮಾನ ಹೊರಬಿದ್ದಿದೆ. ರಾಮಮಂದಿರವನ್ನು ನಿರ್ಮಿಸಲು ನೀವು ಜನರ ಬಳಿಗೆ ಹೋಗಿದ್ದೀರಿ. ಎಲ್ಲಿದೆ ನಿಮ್ಮ ಹಿಂದುತ್ವ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಧ್ವನಿವರ್ಧಕಗಳನ್ನು ತೆಗೆದು ಹಾಕಿ : ಯುಪಿ ಸರ್ಕಾರ ಆದೇಶ
ಕಳೆದ ಕೆಲವು ದಿನಗಳಿಂದ ಶಿವಸೇನೆ ಹಿಂದುತ್ವವನ್ನು ಬಿಟ್ಟು ಹೋಗಿದೆ ಎಂದು ಬಿಜೆಪಿಯವರು ಕಿರುಚುತ್ತಿದ್ದಾರೆ. ನಾವು ಏನು ಬಿಟ್ಟಿದ್ದೇವೆ? ಒಮ್ಮೆ ಹಾಕಿ ಮತ್ತೆ ತೆಗೆಯಲು ಹಿಂದುತ್ವವೇನು ಧೋತಿಯೇ? ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಿಂದುತ್ವದ ಬಗ್ಗೆ ನಮಗೆ ಉಪನ್ಯಾಸ ನೀಡುತ್ತಿರುವವರು ಹಿಂದುತ್ವಕ್ಕಾಗಿ ಏನು ಮಾಡಿದ್ದಾರೆ ಎಂದು ಕೇಳಿಕೊಳ್ಳಬೇಕು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮಸೀದಿಗಳ ಆಜಾನ್ ಹಾಗೂ ಹನುಮಾನ್ ಚಾಲೀಸಾ ವಿವಾದ ಜೋರಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ, ಶಿವಸೇನಾ ವಿರುದ್ಧ ಹರಿಹಾಯ್ದಿತ್ತು. ಆಡಳಿತಾರೂಢ ಪಕ್ಷದ ನೇತೃತ್ವ ವಹಿಸಿರುವ ಉದ್ಧವ್ ಠಾಕ್ರೆ, ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ – ಜಿಗ್ನೇಶ್ ಮೇವಾನಿ ವಿರುದ್ಧ ಮತ್ತೊಂದು ಕೇಸ್