ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲ್ಲ ಎಂದು ನಿರ್ಧರಿಸಿದ್ದಾರೆ.
ಅಕ್ಟೋಬರ್ 11ರಂದು ಅಮಿತಾಬ್ ಅವರ ಹುಟ್ಟುಹಬ್ಬವಿದ್ದು, ಅವರು 77ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಅಮಿತಾಬ್ ತಮ್ಮ ಹುಟ್ಟುಹಬ್ಬ ಆಚರಿಸಲು ಇಷ್ಟಪಡುತ್ತಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, “ಆಚರಿಸಲು ಏನು ಇದೆ? ಇದು ಸಾಮಾನ್ಯ ದಿನದಂತೆ. ನಾನು ಇನ್ನೂ ಕೆಲಸ ಮಾಡುತ್ತಿರುವುದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ದೇಹವು ನನ್ನ ಆತ್ಮದೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ನಾನು ಅಭಿಮಾನಿಗಳಲ್ಲಿ ಕೇಳುತ್ತೇನೆ” ಎಂದರು.
ಇದೇ ವೇಳೆ ಅಮಿತಾಬ್ ತಮ್ಮ ಬಾಲ್ಯದ ಹುಟ್ಟುಹಬ್ಬದ ದಿನಗಳನ್ನು ನೆನಪಿಸಿಕೊಂಡು, ನನ್ನ ತಂದೆ ಹರಿವನಶ್ರೈ ಬಚ್ಚನ್ ಯಾವಾಗಲೂ ಒಂದು ಕವಿತೆಯನ್ನು ರಚಿಸಿ, ನನ್ನ ಹುಟ್ಟುಹಬ್ಬದಂದು ಹೇಳುತ್ತಿದ್ದರು. ಇದು ಒಂದು ಕುಟುಂಬದ ಸಂಪ್ರದಾಯ. ಆದರೆ 1984ರಲ್ಲಿ ನಡೆದ ನನ್ನ ಅಪಘಾತದ ನಂತರ ನನ್ನ ತಂದೆ ಹುಟ್ಟುಹಬ್ಬದ ಕವಿತೆಯನ್ನು ಹೇಳಿದಾಗ ಈ ಸಂಪ್ರದಾಯ ಸಂಪೂರ್ಣವಾಗಿ ಹೊಸ ಅರ್ಥ ಪಡೆದುಕೊಂಡಿತ್ತು. ಇದು ನನಗೆ ಹೊಸ ಜೀವನದಂತೆ ಇತ್ತು. ಕವಿತೆಯನ್ನು ಓದುವಾಗ ನನ್ನ ತಂದೆ ಅಳಲು ಶುರು ಮಾಡಿದ್ದರು. ನಾನು ಅವರನ್ನು ಮೊದಲ ಬಾರಿ ಆ ರೀತಿ ನೋಡಿದೆ ಎಂದು ಹೇಳಿದ್ದಾರೆ.
ಸಮಯ ಬದಲಾದಂತೆ ಕೆಲವೊಂದು ಆಚರಣೆಗಳು ಬದಲಾಗುತ್ತದೆ. ನಾನು ನನ್ನ ತಂದೆಯ ಕವಿತೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆ ದಿನ ನನ್ನ ತಾಯಿಯ ಉತ್ಸಾಹ ಕೂಡ ಇರುತ್ತಿತ್ತು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲು ನನಗೆ ಆಸಕ್ತಿ ಇಲ್ಲ. ಬಳಿಕ ನಿಮ್ಮ ಯಾವುದಾದರೂ ಈಡೇರದ ಕನಸ್ಸು ಇದೆಯಾ ಎಂದು ಪ್ರಶ್ನಿಸಿದಾಗ, ನನಗೆ ತುಂಬಾ ಈಡೇರದ ಕನಸುಗಳಿವೆ. ನನಗೆ ಪಿಯಾನೋ ನುಡಿಸಬೇಕು. ಹಲವು ಭಾಷೆಗಳನ್ನು ಕಲಿಯಬೇಕು ಹಾಗೂ ಗುರು ದತ್ ಅವರ ಜೊತೆ ಕೆಲಸ ಮಾಡಬೇಕು ಎಂದು ಉತ್ತರಿಸಿದ್ದಾರೆ.