ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆಯವರು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ಪ್ರತೀ ಪುಸ್ತಕದಲ್ಲೂ ಅಫಿಡವಿಟ್ಟು ಅಂತ ತನ್ನ ಬಗ್ಗೆ ಬರೆದುಕೊಳ್ಳುತ್ತಿದ್ದರು.
ಆ ಅಫಿಡವಿಟ್ ನಲ್ಲೇನಿದೆ?: ಹೆಸರು ರವಿ ಬೆಳಗೆರೆ. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ. ಎ ಮಾಡಿದ್ದೇನೆ. ಪತ್ರಿಕೋದ್ಯಮ ನನ್ನ ಹೊಟ್ಟೆ ತುಂಬಿಸುತ್ತಿದೆ. `ಪ್ರಾರ್ಥನಾ’ ನಾನು ಕಟ್ಟಿದ ಶಾಲೆ.
ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ಅನುದಾನ ಅಕಾಡೆಮಿ ನನ್ನ `ಚಲಂ’ ಕೃತಿಗೆ 2010ನೇ ಸಾಲಿನ ಅತ್ಯುತ್ತಮ ಅನುವಾದ ಎಂಬ ಪ್ರಶಸ್ತಿ ನೀಡಿದೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರು ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ. ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಬಂಧಿಸಿತ್ತು. ಆತನ ವಿಚಾರಣೆ ವೇಳೆ ಸುನೀಲ್ ಹೆಗ್ಗರವಳ್ಳಿ ರವಿ ಬೆಳಗೆರೆ ಸುಪಾರಿ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬಂಧಿಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮುಖ್ಯಸ್ಥ ಸತೀಶ್ ಕುಮಾರ್ ತಿಳಿಸಿದ್ದಾರೆ.