ಬೆಂಗಳೂರು: ಇಬ್ಬರು ಪಕ್ಷೇತರ ಶಾಸಕರು ಬೆಂಬಲ ನೀಡಿದ ಪರಿಣಾಮ ದೋಸ್ತಿ ಸರ್ಕಾರದ ಶಾಸಕರ ಸಂಖ್ಯೆ 118ಕ್ಕೆ ಕುಸಿದಿದೆ. ಮುಳಬಾಗಿಲು ಶಾಸಕ ನಾಗೇಶ್, ರಾಣೇಬೆನ್ನೂರು ಶಾಸಕ ಆರ್.ಶಂಕರ್ ಅವರು ಸರ್ಕಾರ ನಡೆಗೆ ಬೇಸತ್ತು ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.
ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಸಂಕ್ರಾಂತಿಯಂತೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಇಬ್ಬರು ಬೆಂಬಲ ನೀಡಿದರೂ ಬಿಜೆಪಿ ಸರ್ಕಾರ ರಚಿಸಲು ಇನ್ನು 13 ಶಾಸಕರ ಬೆಂಬಲ ಬೇಕಿದೆ. ಇಬ್ಬರ ಬೆಂಬಲದಿಂದಾಗಿ ಬಿಜೆಪಿ ಬೆಂಬಲಿಸಲಿರುವ ಶಾಸಕರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. 13 ಶಾಸಕರು ರಾಜೀನಾಮೆ ಕೊಟ್ಟರೆ ಸರ್ಕಾರ ಅಲ್ಪ ಮತಕ್ಕೆ ಕುಸಿಯಲಿದೆ.
ಆಪರೇಷನ್ ಕಮಲದ ಮೊದಲ ಹಂತದಲ್ಲಿ ಪಕ್ಷೇತರರು ಬೆಂಬಲ ವಾಪಸ್ ಪಡೆದರೆ, ಬುಧವಾರ ಮತ್ತಷ್ಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಬಿಜೆಪಿಯ ಮುಂದಿನ ಪ್ಲಾನ್ ಏನು?
6 ಅತೃಪ್ತ ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಕೊಡಿಸುವುದು. ರಾಜೀನಾಮೆ ನೀಡಿದ ಬಳಿಕ ಬಿಜೆಪಿಯವರು ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಹೇಳಲಿದ್ದಾರೆ. ಅಲ್ಪ ಮತಕ್ಕೆ ಕುಸಿದ ಕಾರಣ ರಾಷ್ಟ್ರಪತಿ ಆಡಳಿತ ಹೇರುವಂತೆ ಮನವಿ ಮಾಡಲಿದ್ದಾರೆ. ಈ ಸಮಯದಲ್ಲಿ ಉಳಿದ ಅತೃಪ್ತ ಶಾಸಕರನ್ನು ಸೆಳೆಯುವ ಕೆಲಸ ಮಾಡಲಿದೆ. ಮತ್ತಷ್ಟು ಶಾಸಕರನ್ನು ಸೆಳೆದ ಬಳಿಕ ನಮ್ಮಲ್ಲಿ ಸರ್ಕಾರ ರಚಿಸಲು ಬಹುಮತವಿದೆ. ಸರ್ಕಾರ ರಚಿಸಲು ಅನುಮತಿ ನೀಡಿ ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv