– ಕೃಷ್ಣಮಠದಲ್ಲಿ ಐವರು ಸ್ವಾಮೀಜಿಗಳ ಜೊತೆ ಮಾತುಕತೆ
– ಮೋದಿ ಹಣೆಗೆ ಮಾಧ್ವ ಸಂಪ್ರದಾಯದ ತಿಲಕ ಹಚ್ಚಿದ ಸ್ವಾಮೀಜಿ
ಉಡುಪಿ: ಉಡುಪಿಯ ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಲಕ್ಷ ಕಂಠ ಭಗವದ್ಗೀತೆ ಪಠಣ ನಡೆಯಿತು, ಸಾವಿರಾರು ಭಕ್ತರು ಭಗವದೀತೆಯ ಶ್ಲೋಕ ಪಠಿಸಿದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ದನಿಗೂಡಿಸಿದರು.
ರೋಡ್ ಶೋ ಮುಗಿಸಿ ದೇವರ ದರ್ಶನ ಪಡೆದು ಮಧ್ಯಾಹ್ನ 12.15ರ ಸುಮಾರಿಗೆ ವೇದಿಕೆ ಬಳಿಗೆ ಬಂದ ಪ್ರಧಾನಿಗಳು ʻಪುರುಷೋತ್ತಮ ಯೋಗʼ ಎನ್ನುವ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕ ಪಠಿಸಿ, ಕೃಷ್ಣನನ್ನ ನೆನೆದರು. ಭಗವದ್ಗೀತೆ ಸಮಾವೇಶದಲ್ಲಿ ಸುಮಾರು 18 ಸಾವಿರ ಭಕ್ತರು ಪಾಲ್ಗೊಂಡಿದ್ದರು. ವೇದಿಕೆ ಸೇರಿ ಹಲವೆಡೆ ಎಸ್ಪಿಜಿ ಹಾಗೂ ಪೊಲೀಸ್ ಕಣ್ಗಾವಲು ಇದ್ದು ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಇನ್ನೂ ಪ್ರಧಾನಿ ಮೋದಿ ಅವರು ಪಠಿಸಿದ ಭಗವದ್ಗೀತೆಯ 15ನೇ ಅಧ್ಯಾಯ ಅತ್ಯಂತ ವಿಶೇಷ ಮತ್ತು ಮಹತ್ವವುಳ್ಳದ್ದಾಗಿದೆ. ʻನಿನ್ನ ಕರ್ಮವನ್ನ ನೀನು ಮಾಡು ಫಲಾಫಲದ ಚಿಂತೆ ಬಿಡುʼ… ಎನ್ನುವ ಮಾತನ್ನು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಕಿವಿಮಾತು. ಜಗತ್ತು ಆತ್ಮ ಪರಮಾತ್ಮನ ಕುರಿತಾದ ಗೂಡತತ್ವ. ಜ್ಞಾನವನ್ನ ಗ್ರಹಿಸುವ ಮೂಲಕ ಅಂತಿಮ ಸತ್ಯ ದರ್ಶನ ಪಡೆಯಬಹುದು. 15ನೇ ಅಧ್ಯಾಯವನ್ನ ಅರ್ಥ ಮಾಡಿಕೊಂಡವನು ಪರಿಪೂರ್ಣತೆ ಕಾಣುತ್ತಾನೆʼ ಎಂಬುದು ಈ ಅಧ್ಯಾಯದ ಮಹತ್ವ.
ಅಲ್ಲದೇ ಇದು ಸಂಸಾರದ ಅಶ್ವತ್ಥ ಮರವನ್ನ ಉದಾಹರಣೆಯಾಗಿ ಬಳಸಿಕೊಂಡು ಜಗತ್ತಿನ ಸೃಷ್ಟಿ, ಅದರ ಅನಿಶ್ಚಿತತೆ ಮತ್ತು ವೈರಾಗ್ಯದ ಮೂಲಕ ಅದರಿಂದ ಮುಕ್ತಿ ಪಡೆಯುವ ಮಾರ್ಗವನ್ನ ವಿವರಿಸುತ್ತದೆ. ಈ ಅಧ್ಯಾಯವು ಈಶ್ವರನ (ದೇವರ) ಸರ್ವವ್ಯಾಪಕತೆಯನ್ನು ವಿವರಿಸುತ್ತದೆ, ಪ್ರತಿಯೊಂದು ಸೃಷ್ಟಿಯಲ್ಲೂ ಅವನ ಇರುವಿಕೆಯನ್ನ ತೋರಿಸುತ್ತದೆ. ಇದು ಆತ್ಮದ ನಿಜವಾದ ಸ್ವರೂಪ ತಿಳಿಸುತ್ತದೆ ಮತ್ತು ವ್ಯಕ್ತಿ, ಜಗತ್ತು ಮತ್ತು ದೇವರ ನಡುವಿನ ಸಂಬಂಧವನ್ನ ವಿವರಿಸುತ್ತದೆ.
ಕೃಷ್ಣಮಠದಲ್ಲಿ ಐವರು ಸ್ವಾಮೀಜಿಗಳ ಜೊತೆ ಮಾತುಕತೆ
ಇದಕ್ಕೂ ಮುನ್ನ ಕೃಷ್ಣ ಮಠದಿಂದ ಗೀತಾ ಮಂದಿರಕ್ಕೆ ತೆರಳಿದ ಕೃಷ್ಣಮಠದ ಐವರು ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು.
ಮಾಧ್ವ ಸಂಪ್ರದಾಯದ ತಿಲಕ
ಇದಾದ ಬಳಿಕ ಸ್ವಾಮೀಜಿಗಳು ಪ್ರಧಾನಿ ಮೋದಿ ಹಣೆಗೆ ತಿಲಕವಿಟ್ಟು ತುಳಸಿಮಣಿ ನೀಡಿದರು. ಬಳಿಕ ಕನಕದಾಸರ ವಿಗ್ರಹಕ್ಕೆ ಮೋದಿ ಹೂಮಾಲೆ ಅರ್ಪಿಸಿದರು. ಕನಕನ ಕಿಂಡಿಯ ಮೇಲಿರುವ ಶ್ರೀ ಕೃಷ್ಣನ ಮೂರ್ತಿಗೆ ನಮಸ್ಕರಿಸಿದರು. ಇದೇ ವೇಳೆ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಹಣೆಗೆ ತಿಲಕವಿಟ್ಟು ಪ್ರಸಾದ ನೀಡಿದರು. ನಂತರ ಮೋದಿಗೆ ಅಂಗಾರಕ ಅಕ್ಷತೆ ನೀಡಿ ಮಾಧ್ವ ಸಂಪ್ರದಾಯದ ತಿಲಕ ಹಚ್ಚಲಾಯಿತು.

