ಮಂಡ್ಯ: ದರ್ಶನ್, ಯಶ್ ಪ್ರಚಾರದ ಭಯ ನಮಗಿಲ್ಲ. ಇಲ್ಲಿಯವರೆಗೆ ಜಿಲ್ಲೆಗೆ ಅವರು ಏನು ಕೊಟ್ಟಿದ್ದಾರೆ? ಈಗ ಏನು ಕೊಡ್ತಾರೆ ಹೇಳಿಕೊಂಡು ಬರಲಿ. ಜೆಡಿಎಸ್ ಮತ್ತು ಕಾಂಗ್ರೆಸ್ ಈ ಜಿಲ್ಲೆಗೆ ಬೇಕಾದಷ್ಟು ಕೊಡುಗೆ ನೀಡಿದೆ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಪ್ರಚಾರದ ಭಯ ನಮಗಿಲ್ಲ. ಇದುವರೆಗೆ ಸುಮಲತಾ, ದರ್ಶನ್ ಹಾಗೂ ಯಶ್ ಜಿಲ್ಲೆಗೆ ಏನು ಕೊಟ್ಟಿದ್ದಾರೆ? ಈಗ ಏನು ಕೊಡ್ತಾರೆ ಹೇಳಿಕೊಂಡು ಬರಲಿ. ಜೆಡಿಎಸ್ ಮತ್ತು ಕಾಂಗ್ರೆಸ್ ಈ ಜಿಲ್ಲೆಗೆ ಬೇಕಾದಷ್ಟು ಕೊಡುಗೆ ನೀಡಿದೆ. ಅವರು ಅವರ ಕೆಲಸ ಮಾಡೋದು ಬಿಟ್ಟು ಬೇರೆ ಕೆಲಸಕ್ಕೆ ಬಂದಿದ್ದಾರೆ. ಜನ ಸಿನಿಮಾರಂಗದವರನ್ನ ಪರದೆ ಮೇಲೆ ನೋಡುತ್ತಿದ್ದರು. ಈಗ ನ್ಯಾಚುರಲ್ ಆಗಿ ನೋಡ್ತಿದ್ದಾರೆ. ಹೀಗಾಗಿ ಅವರನ್ನ ನೋಡಲು ಜನ ಹೋಗ್ತಿದ್ದಾರೆ. ನಾವೂ ಕೂಡ ಕೆಲವು ಸಂದರ್ಭದಲ್ಲಿ ನಟರನ್ನು ನೋಡಲು ಹೋಗಿದ್ದೇವೆ. ಸಿನಿಮಾ ನೋಡೋಕೆ ಜನ ಹಣ ಕೊಟ್ಟು ಹೋಗ್ತಾರೆ. ಈಗಲಾದರೂ ಜನರ ಕಷ್ಟ ಅವರಿಗೆ ಅರ್ಥವಾಗಲಿ ಎಂದು ಟಾಂಗ್ ಕೊಟ್ಟರು.
ಮಂಡ್ಯ ಜೆಡಿಎಸ್ ಭದ್ರಕೋಟೆ. ಜನ ಅಭಿವೃದ್ಧಿ ಬಿಟ್ಟು ಬೇರೆ ಕಡೆ ಗಮನ ಕೊಡ್ತಾರಾ? ಸುಮಲತಾ, ದರ್ಶನ್ ಹಾಗೂ ಯಶ್ ಏನಾದರೂ ನಮ್ಮ ಕೈಗೆ ಸಿಗ್ತಾರಾ ಎಂದು ಪ್ರಶ್ನಿಸಿದರು. ಅಲ್ಲದೇ ದೇವೇಗೌಡರ ಕುಟುಂಬ ಯಾವಾಗ ಹೋದರೂ ನಮಗೆ ಸಿಗ್ತಾರೆ. ನಾವು ಅವರ ಪರ ಇರಬೇಕೇ ಅಥವಾ ಯಾವಾಗಲೋ ಒಮ್ಮೆ ಸಿಗುವ ನಟರ ಪರ ಇರಬೇಕೇ ಎಂದು ಪ್ರಶ್ನಿಸಿದರು.
ನಂತರ ಐಟಿ ದಾಳಿ ವಿಚಾರ ಪ್ರತಿಕ್ರಿಯಿಸಿ, ನಮಗೆ ಭಯ ಹುಟ್ಟಿಸಲು ಐಟಿ ರೇಡ್ ಮಾಡಿಸುತ್ತಿದ್ದಾರೆ. ಬಿಜೆಪಿಯವರೇ ಈ ಐಟಿ ದಾಳಿಗೆ ಕಾರಣ. ಮಂಡ್ಯ ಸೀಟಿನ ಬಗ್ಗೆ ಬಿಜೆಪಿ ಅವರಿಗೆ ಕಣ್ಣಿದೆ. ಯಾವುದೇ ಕಾರಣಕ್ಕೂ ಅವರು ಗೆಲ್ಲುವುದಕ್ಕೆ ಆಗಲ್ಲ ಎಂದು ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿ ಗೆದ್ದರೆ ಬಿಜೆಪಿಗೆ ಹೋಗುವ ಸಾಧ್ಯತೆ ಜಾಸ್ತಿಇದೆ. ಮೋದಿ ಅವರು ಕೂಡ ಸುಮಲತಾರಿಗೆ ಆಶೀರ್ವಾದ ಮಾಡಿದ್ದಾರೆ ಅಂತ ಮಾಹಿತಿ ಇದೆ. ಐಟಿ ದಾಳಿ ಬಗ್ಗೆ ನಮಗೆ ಭಯವಿಲ್ಲ. ಐಟಿ ದಾಳಿಯಲ್ಲಿ ಬರಿ ಪೇಪರ್ ಸಿಕ್ಕಿರಬಹುದು ಎಂದು ವ್ಯಂಗ್ಯವಾಡಿದರು.