ನವದೆಹಲಿ: ಭಾರತದ ಇತಿಹಾಸದಲ್ಲಿ ಬಿಪಿನ್ ರಾವತ್ ಅವರು ಪ್ರಥಮ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್)ರಾಗಿ ನೇಮಕಗೊಂಡಿದ್ದರು. ಭೂ, ವಾಯು ಮತ್ತು ನೌಕಾ ಸೇನೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಿಡಿಎಸ್ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಈ ಹೊಸ ಹಾಗೂ ಪ್ರಮುಖ ಹುದ್ದೆಗೆ 2021 ಜನವರಿಯಲ್ಲಿ ಬಿಪಿನ್ ರಾವತ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿತ್ತು.
ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಿದ ಬಳಿಕ ಕೇಂದ್ರ ಸರ್ಕಾರ, ಮಿಲಿಟರಿ ಅಫೇರ್ಸ್ ಡಿಪಾರ್ಟ್ಮೆಂಟ್ ಎಂಬ ಹೊಸ ಇಲಾಖೆಯನ್ನು ಸೃಷ್ಟಿಸಿತ್ತು. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಅವರದ್ದಾಗಿದೆ. ಈ ಹುದ್ದೆಯಲ್ಲಿರುವ ಬಿಪಿನ್ ರಾವತ್ ಅವರು 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ
ಜವಾಬ್ದಾರಿ ಏನು?
ಸಿಡಿಎಸ್ ಪ್ರಸ್ತುತ ಇರುವ ಸೇನೆಯ ಮೂರು ವಿಭಾಗಕ್ಕೆ (ಭೂ, ವಾಯು, ನೌಕಾಪಡೆ) ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವಯ ಅಧಿಕಾರಿಯಾಗಿದ್ದರು. ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಲಹೆಯನ್ನು ಸರ್ಕಾರಕ್ಕೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿದೆ.
ಮಿಲಿಟರಿ ಅಫೇರ್ಸ್ ಡಿಪಾರ್ಟ್ಮೆಂಟ್ಗೆ ದೆಹಲಿಯ ಸೌಥ್ ಬ್ಲಾಕ್ನಲ್ಲಿ ಕಚೇರಿ ಒದಗಿಸಲಾಗಿದ್ದು, ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಡಿಎಸ್ ಹುದ್ದೆಗೆ ಪ್ರತ್ಯೇಕ ಕಾರಿನ ಧ್ವಜ, ಟೋಪಿ, ಭುಜ ಪಟ್ಟಿ, ಮತ್ತು ಬೆಲ್ಟ್ ಅನ್ನು ವಿನ್ಯಾಸ ಮಾಡಲಾಗಿದೆ.
ಮೂರು ಸೇನೆಗಳ ನಡುವೆ ಉತ್ತಮ ಸಂವಹನ ಸಮನ್ವಯ ಸಾಧಿಸುವುದು ಮುಖ್ಯ ಉದ್ದೇಶ. ಸೇನೆಗೆ ಹಂಚಿಯಾಗುವ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಮೂರು ಸೇನೆಗಳ ಸಂಬಂಧ ಏಕ ವ್ಯಕ್ತಿಯಾಗಿ ಪ್ರಧಾನಿಗಳಿಗೆ ಸಲಹೆ ನೀಡುವುದು. ಮೂರು ಸೇನೆಗಳ ಸಂಬಂಧ ಆಡಳಿತ್ಮಾಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ತ್ರಿಸೇನೆಗಳ ಜಂಟಿ ನಿರ್ವಹಣೆ ಹಾಗೂ ತರಬೇತಿ ಕೂಡಾ ಈ ಮಹಾದಂಡನಾಯಕ ವ್ಯಾಪ್ತಿಯಲ್ಲಿ ಬರುತ್ತದೆ. ಸೈಬರ್, ಬಾಹ್ಯಾಕಾಶ, ವಿಶೇಷ ಭದ್ರತಾ ದಳಗಳು ಕೂಡಾ ಸಿಡಿಎಸ್ ಕಚೇರಿ ವ್ಯಾಪ್ತಿಗೆ ಬರುತ್ತದೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್
ಸಿಡಿಎಸ್ ವಿಶೇಷತೆ ಏನು?:
ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡುತ್ತಿದ್ದರು. ಈ ಹುದ್ದೆಗೆ ಆಯ್ಕೆ ಆಗಿರುವ 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
20 ವರ್ಷಗಳ ಹಿಂದೆಯೇ ಪ್ರಸ್ತಾಪ:
20 ವರ್ಷಗಳ ಹಿಂದೆಯೇ ಸಿಡಿಎಸ್ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಕಾರ್ಯರೂಪಕ್ಕೆ ಬಾರದೇ ಹಾಗೆ ಉಳಿದಿತ್ತು. ಕಾರ್ಗಿಲ್ ಯುದ್ಧದ ನಂತರ ಭದ್ರತಾ ಲೋಪ ಮತ್ತು ಸೇನಾಪಡೆಗಳ ನಡುವೆ ಇರುವ ಅಂತರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 1999ರಲ್ಲಿ ಸಂಸತ್ತಿನ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ನೇತೃತ್ವವನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ವಹಿಸಿಕೊಂಡಿದ್ದರು. ಸುದೀರ್ಘ ಅಧ್ಯಯನ ನಡೆಸಿದ ಸಮಿತಿಯು, ಮೂರೂ ಸೇನಾಪಡೆಗಳ ನಡುವೆ ಹಲವೆಡೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆಯಾಗಿದ್ದನ್ನು ಗುರುತಿಸಿತ್ತು. ಹೀಗಾಗಿ ಮೂರೂ ಸೇನಾಪಡೆಗಳು ಸೇರಿ ಓರ್ವ ಮುಖ್ಯಸ್ಥರನ್ನು ನೇಮಿಸುವಂತೆ ವರದಿ ನೀಡಿತ್ತು. ಆದರೆ ಬದಲಾದ ರಾಜಕೀಯ ಹಾಗೂ ಅಧಿಕಾರಿಗಳ ಆಕ್ಷೇಪದಿಂದಾಗಿ ಸಮಿತಿಯ ಶಿಫಾರಸು ಕಾರ್ಯರೂಪಕ್ಕೆ ಬಂದಿರಲಿಲ್ಲ.
2012 ರಲ್ಲಿ ನರೇಶ್ ಚಂದ್ರಾ ನೇತೃತ್ವದ ಟಾಸ್ಕ್ ಫೆÇೀರ್ಸ್, 2016 ರಲ್ಲಿ ಲೆಫ್ಟಿನೆಂಟ್ ಜನರಲ್ ಡಿಬಿ ಶೇಕತ್ಕಾರ್ ಸಮಿತಿ ಸಿಡಿಎಸ್ ನೇಮಕವಾಗಬೇಕೆಂದು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಮೂರು ಸೇನೆಯ ಪ್ಲಾನಿಂಗ್, ಬಜೆಟ್, ಸಂಗ್ರಹಣೆ, ಶಸ್ತ್ರಾಸ್ತ್ರ ಖರೀದಿ, ತರಬೇತಿ ವಿಚಾರದ ಬಗ್ಗೆ ಸಿಡಿಎಸ್ ಗಮನ ಹರಿಸಿ ಕೇಂದ್ರ ರಕ್ಷಣಾ ಇಲಾಖೆಯ ಜೊತೆ ಸೇತುವೆಯಾಗಿ ಕೆಲಸ ಮಾಡಲಿದೆ.
ಘೋಷಣೆ ಮಾಡಿದ್ದ ಮೋದಿ:
2019ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಭೂ, ವಾಯು ಹಾಗೂ ನೌಕಾ ಪಡೆಗಳು ನಮ್ಮ ಹೆಮ್ಮೆ. ಈ ಮೂರೂ ಸೇನಾ ಪಡೆಗಳ ಮಧ್ಯೆ ಸಮನ್ವಯತೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನೇಮಕ ಮಾಡಲಾಗುತ್ತದೆ ಎಂದು ಐತಿಹಾಸಿಕ ಘೋಷಣೆ ಮಾಡಿದ್ದರು. ಇದನ್ನೂ ಓದಿ: ಬಿಪಿನ್ ರಾವತ್ ಸ್ಥಿತಿ ಗಂಭೀರ – Mi-17 V5 ಹೆಲಿಕಾಪ್ಟರ್ ವಿಶೇಷತೆ ಏನು?
ಸಿಡಿಎಸ್ ನೇಮಕಕ್ಕಾಗಿ ದೀರ್ಘಕಾಲದಿಂದ ಸೇನಾ ಅಧಿಕಾರಿಗಳು ಒತ್ತಾಯಿಸುತ್ತಾ ಬಂದಿದ್ದಾರೆ. ಸದ್ಯ ನಾವು ಅದನ್ನು ಕಾರ್ಯಗತಕ್ಕೆ ತರಲು ನಿರ್ಧಸಿದ್ದೇವೆ. ಈ ನೇಮಕವು ಮೂರು ಪಡೆಗಳ ಉನ್ನತ ಮಟ್ಟದಲ್ಲಿ ಪರಿಣಾಮಕಾರಿ ನಾಯಕತ್ವವನ್ನು ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದರು.