ಬೆಂಗಳೂರು: ಮಧ್ಯರಾತ್ರಿಯೇ ನಮ್ಮನ್ನ ಹೈದ್ರಾಬಾದ್ಗೆ ಕರೆತಂದಿದ್ದೀರಿ, ನಾವೇನು ತಪ್ಪಿಸಿಕೊಂಡು ಹೋಗಿತ್ತಿದ್ವಾ ಎಂದು ಪ್ರಶ್ನಿಸುವ ಮೂಲಕ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.
ಅಡ್ಡ ಮತದಾನ ಹಾಗೂ ಕುದುರೆ ವ್ಯಾಪಾರದ ಭೀತಿಯಿಂದ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಪಕ್ಷದ ಮುಖಂಡರು ಹೈದರಾಬಾದ್ ಹೊಟೇಲ್ ಗೆ ಕರೆ ತಂದಿದ್ದಾರೆ. ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಕೆಲ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಸುಪ್ರೀಂ ಕೋರ್ಟ್ ಆದೇಶದವರೆಗೂ ಕಾಯಬಹುದು ಅಂತಾ ನಾವು ನಿಮಗೆ ಹೇಳಿದ್ದೇವು. ಆದರೂ ನೀವು ಕೇಳಲೇ ಇಲ್ಲ. ರಸ್ತೆ ಮಾರ್ಗವಾಗಿ ನಮ್ಮನ್ನ ಕರೆ ತಂದಿದ್ದೀರಿ. ದೂರ ಪ್ರಯಾಣ ಮಾಡಿ ಬೇಸತ್ತಿದ್ದೇವೆ. ನಮಗೆ ನಮ್ಮ ಮೊಬೈಲ್ ನೀಡಿ ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಲವು ಕಾಂಗ್ರೆಸ್ ನಾಯಕರು ಹೊಟೇಲ್ ಗೆ ಕರೆದುಕೊಂಡು ಹೋಗುವ ಏಕ ಪಕ್ಷೀಯ ನಿರ್ಧಾರ ಕೆಲ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ನಮಗೆ ಆತಂಕ ಇತ್ತು, ನೀವು ಏನು ಹೇಳಿದರೂ ನಾನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ನಿಮ್ಮನ್ನ ಕರೆದುಕೊಂಡು ಬಂದಿದ್ದೇವೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪ ನಡೆಯಲಿದೆ. ಹೀಗಾಗಿ, ಇಂದು ಸಂಜೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಮರಳಿ, ತಡರಾತ್ರಿ ಹೊತ್ತಿಗೆ ಹೊಟೇಲ್ಗೆ ಹೋಗಿ ಅಲ್ಲಿಂದ ಬೆಳಿಗ್ಗೆ ನೇರವಾಗಿ ವಿಧಾನ ಸೌಧಕ್ಕೆ ಹೋಗೋಣ ಎಂದು ಡಿ.ಕೆ.ಶಿವಕುಮಾರ್ ಹೊಟೇಲ್ನಲ್ಲಿ ಸಭೆ ನಡೆಸಿ ಹೇಳಿದ್ದಾರೆ.
ಕೊನೆಯ ಕ್ಷಣದವರೆಗೂ ನಿಮಗೆ ಬಿಜೆಪಿ ನಾಯಕರಿಂದ ಕರೆ ಬರಹುದು. ನೀವು ಎಚ್ಚರಿಕೆಯಿಂದ ಇರಬೇಕು. ಬಹುಮತ ಸಾಬೀತು ಪಡಿಸುವ ವೇಳೆ ಬಿಎಸ್ವೈ ಸರ್ಕಾರದ ವಿರುದ್ಧ ಇರುವಂತೆ ಶಾಸಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.