ಉಡುಪಿ: ಮೋದಿ ಕರ್ನಾಟಕದ ಜನಕ್ಕೆ ಏನು ಮಾಡಿದ್ದಾರೆ. ಅವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.
ಸ್ಥಳೀಯ ಚುನಾವಣೆ ಮತಯಾಚನೆ ಸಂದರ್ಭ ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಯಮಾಲಾ, ಅಕ್ಕಿ ನಿಮ್ಮ ಯೋಜನೆ ಅಂತ ಸುಳ್ಳು ಹೇಳಿದ್ದೀರಿ. ನಿಮ್ಮ ಸುಳ್ಳು ಹೆಚ್ಚು ಕಾಲ ಉಳಿಯೋದಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಜನಪರ ನಾಯಕರಾಗಿದ್ದಾರೆ. ಇವರ ಮುಂದೆ ಬಿಜೆಪಿಯವರ ಸುಳ್ಳು, ಗಿಮಿಕ್ ಗಳು ವರ್ಕೌಟ್ ಆಗಲ್ಲ. ಸ್ಥಳೀಯ ಚುನಾವಣೆಯಲ್ಲಿ ಮೋದಿಯನ್ನು ನೋಡಿ ಜನ ಮತ ಹಾಕುವುದಿಲ್ಲ ಎಂದು ಭವಿಷ್ಯ ನುಡಿದ್ರು.
ಈ ಬಾರಿ ಸ್ಥಳೀಯ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಸರ್ಕಾರ ಮಾಡಿದ್ದ ಅಭಿವೃದ್ಧಿ ಯಾರೂ ಮಾಡಿಲ್ಲ. ಸಿದ್ದರಾಮಯ್ಯವರ ಸರ್ಕಾರ ಎಲ್ಲಾ ವರ್ಗವನ್ನು ತಲುಪಿತ್ತು. ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ರೈತರ ಸಾಲಮನ್ನಾ ಮಾಡಿದ್ದೇವೆ. ಕೊಡಗಿನ ನೆರೆಗಾಗಿ ತಾತ್ಕಾಲಿಕವಾಗಿ 25 ಕೋಟಿ ರೂ. ಅನುದಾನ ತಂದಿದ್ದೇವೆ. ಜನರಿಗೆ ಸ್ಪಂದಿಸುತ್ತಾ ಈ ಸರ್ಕಾರ ಜನರ ಪರವಾಗಿದೆ. ಜನಪರ ಸರ್ಕಾರ ಈ ಹಿಂದೆಯೂ ಇತ್ತು ಸಮ್ಮಿಶ್ರ ಸರ್ಕಾರದಲ್ಲೂ ಇದೆ ಎಂಬುದು ಜನರಿಗೆ ಗೊತ್ತಿದೆ. ಪಾಲಿಕೆ ಚುನಾವಣೆ ಬಗ್ಗೆ ಜನರಿಗೆ ನಾವು ತಿಳಿಸಿಕೊಡಬೇಕು. ಈಗಿನ ಮತ್ತು ಹಿಂದಿನ ಸರ್ಕಾರ ಒಂದು ಕಪ್ಪು ಚುಕ್ಕೆ ಮಾಡಿಕೊಂಡಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ನಾನು ಒಬ್ಬ ಪ್ರಚಾರಕಿ ಅಲ್ಲ, ನಾನು ಒಬ್ಬ ಹೆಣ್ಣು ಮಗಳು ಸರ್ಕಾರ ನನಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವ ಸ್ಥಾನವನ್ನು ಕೊಟ್ಟಿದ್ದಾರೆ. ಅದು ಸಿಕ್ಕಿರುವುದು ನನ್ನ ಋಣ. ಹೀಗಾಗಿ ಆ ಋಣವನ್ನು ತೀರಿಸಲು ಬಂದಿದ್ದು, ಇದು ನನಗೆ ಕೃಷ್ಣ ಮತ್ತು ಮೂಕಾಂಬಿಕೆ ದೇವರು ನೀಡಿರುವ ಆಶೀರ್ವಾದ ಎಂದು ಭಾವಿಸಿಕೊಳ್ಳುತ್ತೇನೆ ಅಂತಾ ಅಂದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv