ದೇಶದ ಅತ್ಯಂತ ಸ್ವಚ್ಛ ನಗರಿ ಎಂದೇ ಹೆಸರುವಾಸಿಯಾಗಿರುವ ಮಧ್ಯಪ್ರದೇಶದ ಇಂದೋರ್ನಲ್ಲಿ (Indore) ಕಲುಷಿತ ನೀರು (Contaminated Water) ಸೇವಿಸಿ ಕಳೆದ ಕೆಲವು ದಿನಗಳಲ್ಲಿ 23 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಭಗೀರಥಪುರ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹಾಗಿದ್ರೆ ಇಂದೋರ್ ದುರಂತಕ್ಕೆ ಕಾರಣವೇನು? ಕಲುಷಿತ ನೀರು ಸೇವನೆಯಿಂದ ಮನುಷ್ಯನ ದೇಹದ ಮೇಲಾಗುವ ಪರಿಣಾಮವೇನು? ತಡೆಗಟ್ಟುವುದು ಹೇಗೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಇಂದೋರ್ ಕಲುಷಿತ ನೀರು ದುರಂತ:
ಡಿಸೆಂಬರ್ 25ರ ಸುಮಾರಿಗೆ ಭಗೀರಥಪುರ ನಿವಾಸಿಗಳು ತಾವು ಬಳಸುವ ಕುಡಿಯುವ ನೀರಿನಲ್ಲಿ ವಿಚಿತ್ರ ವಾಸನೆ ಬರುತ್ತಿರುವುದಾಗಿ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳುವಷ್ಟರಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಮುಖ್ಯ ಕುಡಿಯುವ ನೀರಿನ ಪೈಪ್ಲೈನ್ನಲ್ಲಿ ಸೋರಿಕೆಯಾಗಿದ್ದು , ಆ ಪೈಪ್ಲೈನ್ ಶೌಚಾಲಯವೊಂದರ ಕೆಳಭಾಗದಲ್ಲಿ ಹಾದುಹೋಗಿತ್ತು. ಈ ಸೋರಿಕೆಯಿಂದಾಗಿ ಶೌಚಾಲಯದ ತ್ಯಾಜ್ಯ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿರುವುದು ಈ ಮಾರಣಾಂತಿಕ ಅತಿಸಾರ ಮತ್ತು ವಾಂತಿ ಭೇದಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತಕ್ಕೆ ಕಾರಣಗಳೇನು?
ಭಗೀರಥಪುರಕ್ಕೆ ನೀರು ಪೂರೈಸುವ ನೀರಿನ ಪೈಪ್ಲೈನ್ನ ಕೀಲುಗಳು ಸಡಿಲಗೊಂಡು ಸೋರಿಕೆಯಾಗುತ್ತಿದ್ದುದು ಈ ದುರಂತಕ್ಕೆ ಮುಖ್ಯ ಕಾರಣವಾಗಿದೆ. ಅಚ್ಚರಿಯೆಂದರೆ, ಕುಡಿಯುವ ನೀರಿನ ಪೈಪ್ಲೈನ್ ಹಾದುಹೋಗಿರುವ ಜಾಗದ ಮೇಲೆಯೇ ಇತ್ತೀಚೆಗೆ ಶೌಚಾಲಯವೊಂದನ್ನು ನಿರ್ಮಿಸಲಾಗಿದ್ದು, ಅದಕ್ಕೆ ಸೂಕ್ತ ಸೆಪ್ಟಿಕ್ ಟ್ಯಾಂಕ್ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯದ ತ್ಯಾಜ್ಯವು ನೇರವಾಗಿ ಪೈಪ್ಲೈನ್ ಇದ್ದ ಗುಂಡಿಗೆ ಸೇರುತ್ತಿತ್ತು. ಈ ಕಲುಷಿತ ನೀರು ಪೈಪ್ಲೈನ್ನ ಸಡಿಲ ಕೀಲುಗಳ ಮೂಲಕ ಕುಡಿಯುವ ನೀರಿನೊಂದಿಗೆ ಬೆರೆತಿದೆ. ನೀರು ವಿವಿಧ ಬಡಾವಣೆಗಳಿಗೆ ಹಂಚಿಕೆಯಾಗುವ ಮೊದಲೇ ಮುಖ್ಯ ಲೈನ್ನಲ್ಲಿ ಈ ಮಾಲಿನ್ಯ ಉಂಟಾಗಿದ್ದರಿಂದ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ. ಅಲ್ಲದೆ, ಭಗೀರಥಪುರ ಪೊಲೀಸ್ ಚೆಕ್ ಪೋಸ್ಟ್ ಬಳಿ ಇರುವ ಈ ಸೋರಿಕೆಯನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದ್ದು, ರೋಗವು ವ್ಯಾಪಕವಾಗಿ ಹರಡಲು ದಾರಿ ಮಾಡಿಕೊಟ್ಟಿದೆ.
ಭಗೀರಥಪುರದಲ್ಲಿ ನಡೆಯುತ್ತಿರುವ ಸಮೀಕ್ಷೆಯ ಸಂದರ್ಭದಲ್ಲಿ ಆರೋಗ್ಯ ತಂಡಗಳು 2,354 ಮನೆಗಳಿಂದ 9,416 ಜನರನ್ನು ಪರೀಕ್ಷೆಗೆ ಒಳಪಡಿಸಿವೆ. ಈವರೆಗೆ 398 ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ 256 ರೋಗಿಗಳು ಚೇತರಿಸಿಕೊಂಡಿದ್ದು, ಬಿಡುಗಡೆ ಮಾಡಲಾಗಿದೆ. ಇದೀಗ ಸೋಂಕು ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆಯು ಈಗಾಗಲೇ 2,703 ಮನೆಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿದ್ದು, ಸುಮಾರು 12,000ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಕಲುಷಿತ ನೀರು ಸೇವಿಸಿದರೆ ಏನಾಗುತ್ತದೆ?
ಕಲುಷಿತ ನೀರು ಸೇವನೆ ಮಾಡುವುದರಿಂದ ಹೆಚ್ಚಾಗಿ ಅತಿಸಾರಕ್ಕೆ ಕಾರಣವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಲುಷಿತ ನೀರು ಕುಡಿಯುವುದು ಹೊಟ್ಟೆಯ ತೊಂದರೆಗೆ ಸೀಮಿತವಾಗಿಲ್ಲ, ಇದರಿಂದ ಪ್ರಮುಖ ಅಂಗಗಳ ಮೇಲೆ ದಾಳಿ ಮಾಡುವ ಅನೇಕ ಮಾರಕ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಕಲುಷಿತ ನೀರಿನಲ್ಲಿ ಇರುವ ಬ್ಯಾಕ್ಟೀರಿಯಾ, ವೈರಸ್ಗಳು ಹಾಗೂ ಪರಾವಲಂಬಿಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೂಲಕ ರಕ್ತಪ್ರವಾಹ ಪ್ರವೇಶಿಸುತ್ತವೆ. ಒಳಚರಂಡಿ ನೀರು ಇಲ್ಲವೇ ಕೈಗಾರಿಕಾ ತ್ಯಾಜ್ಯವು ನೀರಿನ ಮೂಲಗಳೊಂದಿಗೆ ಬೆರೆತರೆ, ಆ ನೀರು ಕಾಲರಾ, ಟೈಫಾಯಿಡ್ ಹಾಗೂ ಹೆಪಟೈಟಿಸ್ನಂತಹ ರೋಗಗಳಿಗೆ ಕಾರಣವಾಗುತ್ತದೆ.
ಕೆಲವೊಮ್ಮೆ ಪೈಪ್ಲೈನ್ಗಳಲ್ಲಿ ಸೋರಿಕೆಯಿಂದ ಕಲುಷಿತವಾಗುವ ನೀರನ್ನು ಜನವಸತಿ ಪ್ರದೇಶಗಳಿಗೆ ಪೂರೈಕೆ ಮಾಡಿದರೆ, ಅದರಲ್ಲಿರುವ ಸೂಕ್ಷ್ಮಜೀವಿಗಳು ಯಕೃತ್ತು ಮತ್ತು ಕರುಳಿಗೆ ಶಾಶ್ವತ ಹಾನಿ ಉಂಟುಮಾಡಬಹುದು. ಈ ಕಾಯಿಲೆಗಳಿಂದ ಉಂಟಾಗುವ ಎಲೆಕ್ಟ್ರೋಲೈಟ್ ಅಸಮತೋಲನದ ಜೊತೆಗೆ ನಿರ್ಜಲೀಕರಣವು ಮೂತ್ರಪಿಂಡ ವೈಫಲ್ಯ ಹಾಗೂ ನರಮಂಡಲದ ಸಮಸ್ಯೆಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ನೀರಿನ ಶುದ್ಧತೆಯನ್ನು ನಿರ್ಲಕ್ಷಿಸುವುದು ಮಾರಕವಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.
ಟೈಫಾಯಿಡ್, ಕಾಲರಾ:
ಟೈಫಾಯಿಡ್, ಕಾಲರಾಕ್ಕೆ ಅಶುದ್ಧ ನೀರು ಮುಖ್ಯ ಕಾರಣವಾಗಿದೆ. ಟೈಫಾಯಿಡ್ ಸಾಲ್ಮೊನೆಲ್ಲಾ ಟೈಫಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಅಧಿಕ ಜ್ವರ ಹಾಗೂ ಕರುಳಿನ ಹುಣ್ಣುಗಳಿಗೆ ಕಾರಣವಾಗಬಹುದು. ಕಾಲರಾದಲ್ಲಿ ನೀರು ಎಷ್ಟು ವೇಗವಾಗಿ ಕಳೆದುಹೋಗುತ್ತದೆ ಎಂದರೆ ರೋಗಿಯ ಸ್ಥಿತಿ ಗಂಟೆಗಳಲ್ಲಿ ಗಂಭೀರವಾಗಬಹುದು. ಎರಡೂ ರೋಗಗಳು ಕಲುಷಿತ ನೀರಿನ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವೇಗವಾಗಿ ಹರಡಬಹುದು.
ಹೆಪಟೈಟಿಸ್ ಎ & ಇ:
ಅಶುದ್ಧ ನೀರನ್ನು ಕುಡಿಯುವುದರಿಂದ ಹೆಪಟೈಟಿಸ್ ಎ ಮತ್ತು ಇ ನಂತಹ ವೈರಲ್ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ವೈರಸ್ಗಳು ನೇರವಾಗಿ ಯಕೃತ್ತಿನ ಮೇಲೆ ದಾಳಿ ಮಾಡುತ್ತವೆ. ಇದು ಕಾಮಾಲೆ, ಹಸಿವಿನ ಕೊರತೆ ಮತ್ತು ತೀವ್ರ ದೌರ್ಬಲ್ಯದಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ಹೆಪಟೈಟಿಸ್ ಇ ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ. ಈ ಯಕೃತ್ತಿನ ಉರಿಯೂತವು ದೀರ್ಘಕಾಲೀನ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು, ತಿಂಗಳುಗಳ ಚೇತರಿಕೆಯ ಅಗತ್ಯ ಇರುತ್ತದೆ.
ಭೇದಿ, ಕರುಳಿನ ಹುಳುಗಳ ಸಮಸ್ಯೆ:
ಕಲುಷಿತ ನೀರಿನಲ್ಲಿ ಇರುವ ಪರಾವಲಂಬಿಗಳು ಭೇದಿ ಮತ್ತು ಕರುಳಿನ ಹುಳುಗಳನ್ನು ಉಂಟುಮಾಡುತ್ತವೆ. ಇವು ರಕ್ತಸಿಕ್ತ ಮಲ, ಸೆಳೆತ ಸಮಸ್ಯೆ ಕಾಡುತ್ತವೆ. ಕಲುಷಿತ ನೀರನ್ನು ದೀರ್ಘಕಾಲದವರೆಗೆ ಕುಡಿಯುವುದರಿಂದ ಕರುಳಿನ ಸೋಂಕುಗಳು ಉಂಟಾಗಬಹುದು. ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯಬಹುದು. ಮಕ್ಕಳಲ್ಲಿ ಈ ಸಮಸ್ಯೆಯು ಅಪೌಷ್ಟಿಕತೆ, ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಶುದ್ಧ ನೀರಿನಲ್ಲಿರುವ ಸೂಕ್ಷ್ಮ ಪರಾವಲಂಬಿಗಳು ಕರುಳಿನ ಒಳಪದರವನ್ನು ಕ್ರಮೇಣ ದುರ್ಬಲಗೊಳಿಸುತ್ತವೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕಲುಷಿತ ನೀರು ಸೇವನೆಯಿಂದ ಪ್ರತಿ ವರ್ಷ ಸುಮಾರು 10 ಲಕ್ಷ ಸಾವುಗಳು ಸಂಭವಿಸುತ್ತವೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಅತಿಸಾರ ರೋಗ ಕಂಡುಬರುತ್ತದೆ.
ತಡೆಗಟ್ಟುವುದು ಹೇಗೆ?
ಕಲುಷಿತ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ, ಕುದಿಸಿದ ನೀರನ್ನು ಕುಡಿಯುವುದು. ಕುದಿಸುವುದರಿಂದ ಹೆಚ್ಚಿನ ಸೂಕ್ಷ್ಮಜೀವಿಗಳು ಸಾಯುತ್ತವೆ. ಹೆಚ್ಚುವರಿಯಾಗಿ ಕ್ಲೋರಿನ್ ಮಾತ್ರೆಗಳನ್ನು ಬಳಸಿ, ನಿಯಮಿತವಾಗಿ ನೀರಿನ ಸಂಗ್ರಹ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಮನೆಯ ಹೊರಗೆ ತೆರೆದ ಗಾಳಿಯಲ್ಲಿ ಇಡಲಾಗುವ ಪಾನೀಯಗಳು ಹಾಗೂ ಐಸ್ ಸೇವಿಸುವುದನ್ನು ತಪ್ಪಿಸಿ. ನೀವು ಜ್ವರ ಅಥವಾ ಅತಿಸಾರದ ಲಕ್ಷಣಗಳನ್ನು ಅನುಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

