ಕೋಲ್ಕತ್ತಾ: ರಾಜಧಾನಿಯ 15 ಕಿ.ಮೀ. ದೂರದಲ್ಲಿರುವ ಸೋಡೆಪುರದಲ್ಲಿ ಎರಡು ಮರಗಳಿಗೆ ಸಂಪ್ರದಾಯಬದ್ಧವಾಗಿ ಎರಡು ಸಾವಿರ ಅತಿಥಿಗಳ ಸಮ್ಮುಖದಲ್ಲಿ ಮದುವೆ ಮಾಡಲಾಗಿದೆ. ಅತಿಥಿಗಳೆಲ್ಲ ಮದುವೆ ಆಯೋಜಕರು ಮತ್ತು ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ನವದಂಪತಿಯಿಂದ ಆಶೀರ್ವಾದ ಪಡೆದುಕೊಂಡು ಹಿಂದಿರುಗಿದ್ದಾರೆ.
12 ವರ್ಷಗಳಿಂದಲೂ ಪ್ರಣಯ್ (ಆಲದ ಮರ) ಸೇಡೆಪುರದಲ್ಲಿಯೇ ಇದ್ದಾನೆ. ಪ್ರಣಯ್ 2 ವರ್ಷದವನಿದ್ದಾಗ ಆತನಿಗೆ ದೇಬರತಿ (ಅರಳಿ ಮರ) ಸಾಥ್ ನೀಡಿದ್ದಳು. ಕಳೆದು 10 ವರ್ಷಗಳಿಂದಲೂ ಪ್ರಣಯ್ ಮತ್ತು ದೇಬರತಿ ಜೊತೆಯಾಗಿಯೇ ಇದ್ದಾರೆ. ಅಂದಿನಿಂದ ಸೇಡೆಪುರದಲ್ಲಿರುವ ಮರಗಳು ಸ್ಥಳೀಯರಿಗೆ ಸ್ವಚ್ಛ ಗಾಳಿಯನ್ನು ನೀಡುತ್ತಾ ಬಂದಿದೆ. ಇತ್ತೀಚೆಗೆ ಸೋಮ ನಾಗ ಎಂಬ ಮಹಿಳೆ ಆಲದ ಮರವನ್ನು ಮತ್ತು ಸುನಿತಾ ಸರ್ಕಾರ ಎಂಬವರು ಅರಳಿ ಮರವನ್ನು ದತ್ತು ಪಡೆದುಕೊಂಡಿದ್ದರು.
ಗೌತಮ್ ದಾಸ್ ಎಂಬವರ ಸಲಹೆಯ ಮೇರೆಗೆ ಎರಡು ಮರಗಳಿಗೆ ಮದುವೆ ಮಾಡಲು ಇಬ್ಬರ ಕುಟುಂಬಸ್ಥರು ನಿರ್ಧರಿಸಿ, ಎರಡು ಸಾವಿರ ಜನರಿಗೆ ಲಗ್ನ ಪತ್ರಿಕೆಯನ್ನು ನೀಡಿದ್ದರು. ಮದುವೆ ದಿನ ಸಂಪ್ರದಾಯದಂತೆ ಸೋಮನಾಗ ಎಲ್ಲ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿ ಉಪವಾಸದ ವ್ರತ ಪಾಲನೆ ಮಾಡಿದ್ದರು. ಸೋಮನಾಗ ಹಾಗು ಪತಿ ಸುಪ್ರಕಾಶ್ ನಾಗ್ ಆಲದ ಮರದ (ವರ) ತಂದೆ-ತಾಯಿ ಸ್ಥಾನದಲ್ಲಿ ನಿಂತು ಎಲ್ಲ ಅತಿಥಿಗಳನ್ನು ಬರಮಾಡಿಕೊಂಡರು.
ಅರಳಿ ಮರದ (ವಧು) ತಂದೆ-ತಾಯಿ ಸ್ಥಾನದಲ್ಲಿ ಸುನಿತಾ ಸರ್ಕಾರ್ ಹಾಗು ಅವರ ಪತಿ ಕಮಲ್ ನಿಂತು ಮದುವೆ ಮಾಡಿದರು. ಆರು ಅಡಿ ದೂರದಲ್ಲಿರುವ ಎರಡು ಮರಗಳನ್ನು ಅಲಂಕರಿಸಲಾಗಿತ್ತು. ಆಲದ ಮರಕ್ಕೆ ಪಂಚೆ ತೊಡಿಸಿದ್ರೆ, ಅರಳಿ ಮರಕ್ಕೆ ಬನಾರಸ ಸೀರೆಯನ್ನು ತೊಡಿಸಲಾಗಿತ್ತು.
ಮಂತ್ರೋಚ್ಛಾರಣೆ, ಗಟ್ಟಿಮೇಳದ ಸಂಗೀತದ ಮಧ್ಯೆ ಗೋಧುಳಿ ಶುಭ ಮುಹೂರ್ತದಲ್ಲಿ ಮದುವೆ ನಡೆಯಿತು. ಮದುವೆ ಆಗಮಿಸಿದ್ದ ಎಲ್ಲ ಅತಿಥಿಗಳಿಗೆ ಸ್ವೀಟ್ ಜೊತೆ ಕಿಚಡಿಯನ್ನು ನೀಡಲಾಯ್ತು. ಬ್ಯಾಂಡ್ ಪಾರ್ಟಿ, ವಿಡಿಯೋ ಗ್ರಾಫರ್, ಫೋಟೋಗ್ರಾಫರ್ ಗಳನ್ನು ಮದುವೆಗೆ ಕರೆಸಿ ಸುಂದರ ಕ್ಷಣಗಳನ್ನು ಸೆರೆಹಿಡಿಯಲಾಯ್ತು. ಅತಿಥಿಗಳು ವಧು-ವರನ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.