– ಮತಗಟ್ಟೆಗಳಿಗೆ ಬೆಂಕಿ, ಧ್ವಂಸ, ಕಚ್ಚಾಬಾಂಬ್ ಸ್ಫೋಟ
– ಪಂಚಾಯತ್ ಚುನಾವಣೆಗೆ ಈ ವರ್ಷ 35 ಮಂದಿ ಬಲಿ
– ಟಿಎಂಸಿ ವಿರುದ್ಧ ಬಿಜೆಪಿ, ಕಾಂಗ್ರೆಸ್ ಕಿಡಿ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ನ (TMC) ಮಮತಾ ಬ್ಯಾನರ್ಜಿ (Mamata Banerjee) ಮುಖ್ಯಮಂತ್ರಿಯಾಗಿರುವ ಪಶ್ಚಿಮ ಬಂಗಾಳದಲ್ಲಿ (West Bengal) ಪ್ರಜಾಪ್ರಭುತ್ವ ನಗೆಪಾಟಲಿಗೀಡಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲೇ (Panchayat Election) ನೆತ್ತರು ಹರಿದಿದೆ.
ರಾಜ್ಯದ ಹಲವೆಡೆ ಟಿಎಂಸಿ-ಬಿಜೆಪಿ-ಕಾಂಗ್ರೆಸ್-ಸಿಪಿಎಂ ಕಾರ್ಯಕರ್ತರ ಮಧ್ಯೆ ಹಿಂಸಾಚಾರ ಸಂಭವಿಸಿದ್ದು, ಈವರೆಗೆ 16 ಮಂದಿ ಬಲಿಯಾಗಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಈ ವರ್ಷ ಸಾವನ್ನಪ್ಪಿದ್ದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ಹಬ್ಬ ಸಾವಿನ ಹಬ್ಬವಾಗಿ ಬದಲಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಶನಿವಾರ ನಡೆದ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ನುಗ್ಗಿ ದಾಂಧಲೆ ನಡೆಸಿ, ಮತಪೆಟ್ಟಿಗಳಿಗೆ ಬೆಂಕಿ ಹಚ್ಚಿ ಉದ್ಧಟತನ ಪ್ರದರ್ಶಿಸಲಾಗಿದೆ. ಮತಗಟ್ಟೆ ಅಧಿಕಾರಿಗಳ ಕೊಲೆ ಮಾಡಿದ್ದರೆ ಏಜೆಂಟ್ಗಳನ್ನು ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಗೆ ಜಾಮೀನು
ದುಷ್ಕರ್ಮಿಗಳು ಬ್ಯಾಲೆಟ್ ಬಾಕ್ಸನ್ನೇ ಕದ್ದೊಯ್ದಿದ್ದಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ಗನ್ ಹಿಡಿದು ಬೆದರಿಸಿ ಕಲ್ಲು ತೂರಿದ ಪ್ರಸಂಗ ನಡೆದಿದೆ. ಮತಗಟ್ಟೆ ಸುತ್ತಮುತ್ತ ನಾಡ ಬಾಂಬ್ಗಳ ಮಳೆಗೆರೆದಿದ್ದಾರೆ. ಇದಕ್ಕೆಲ್ಲಾ ಆಡಳಿತರೂಢ ಟಿಎಂಸಿಯೇ ಕಾರಣ ಅಂತ ಬಿಜೆಪಿ ಮತ್ತು ಕಾಂಗ್ರೆಸ್ ದೂರಿದೆ.
ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿದೆ. ಮುರ್ಷಿದಾಬಾದ್, ಮಾಲ್ಡಾ, ಕೂಚ್ಬೆಹಾರ್, ಹೂಗ್ಲಿ, ನಾರ್ತ್ 24 ಪರಗಣ ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದೆ.
ಎಲ್ಲೆಲ್ಲಿ ಏನಾಗಿದೆ?
ನಾರ್ತ್ 24 ಪರಗಣ ಜಿಲ್ಲೆಯ ಬಾರಕ್ಪೋರ್ನಲ್ಲಿ ಟಿಎಂಸಿ ಕಾರ್ಯಕರ್ತರು ಗನ್ ಹಿಡಿದು ಬೆದರಿಸಿ ಕಲ್ಲು ತೂರಿದ್ದಾರೆ. ಕೋಚ್ ಬೆಹಾರ್ ಜಿಲ್ಲೆಯ ದಿನ್ಹಾಟಾ ಏರಿಯಾದ ಬರನಚಿನಾ ಪಂಚಾಯತ್ ಪೋಲಿಂಗ್ ಬೂತ್ನಲ್ಲಿ ಮತ ಪೆಟ್ಟಿಗೆಗೆ ಬೆಂಕಿ ಇಡಲಾಗಿದೆ.
ಕೋಚ್ ಬೆಹಾರ್ನ ಸರ್ಕಾರಿ ಶಾಲೆಗೆ ನುಗ್ಗಿರುವ ಕಿಡಿಗೇಡಿಗಳು ಮತಕೇಂದ್ರವನ್ನು ಧ್ವಂಸಗೊಳಿಸಿ, ಮತಪೆಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಯುವಕನೋರ್ವ ರಾಶಿರಾಶಿ ಬ್ಯಾಲೆಟ್ ಪೇಪರ್ಗಳನ್ನು ಕೈಯಲ್ಲಿ ಹಿಡಿದು ಕೊಂಡಿದ್ದ ದೃಶ್ಯ ಡೈಮಂಡ್ ಹಾರ್ಬರ್ನ ಮತಗಟ್ಟೆ ಕಾಣಿಸಿದೆ. ಮುರ್ಷಿದಾಬಾದ್ನ ಮತ ಕೇಂದ್ರದ ಸುತ್ತ ನಾಡ ಬಾಂಬ್ಗಳ ಸುರಿಮಳೆಯೇ ಸುರಿಸಲಾಗಿದೆ.
ಹೂಗ್ಲಿ ಜಿಲ್ಲೆಯ ಮತಗಟ್ಟೆಯೊಂದಕ್ಕೆ ನುಗ್ಗಿದ ಕಿಡಿಗೇಡಿಗಳು 2 ಬ್ಯಾಲೆಟ್ ಬಾಕ್ಸ್ ಕದ್ದು ಕೆರೆಗೆ ಎಸೆದಿದ್ದಾರೆ. ಮತ್ತಷ್ಟು ಬಾಕ್ಸ್ಗಳನ್ನು ಚರಂಡಿ ನೀರಿನಲ್ಲಿ ಮುಳುಗಿಸಿಟ್ಟಿದ್ದಾರೆ.
ನಾರ್ತ್ 24 ಪರಗಣ ಜಿಲ್ಲೆಯ ಪಿರ್ಗಚ್ಚಾ ಗ್ರಾಮದಲ್ಲಿ ಅಭ್ಯರ್ಥಿ ಓರ್ವನನ್ನು ಕೊಲೆ ಮಾಡಲಾಗಿದೆ. ಗ್ರಾಮದಲ್ಲಿ ಭಾರೀ ಘರ್ಷಣೆ ಸಂಭವಿಸಿದ್ದು, ರಸ್ತೆಯಲ್ಲಿ ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ. ಕೋಚ್ಬೆಹಾರಿನ ಫಲಿಮಾರಿ ಮತಗಟ್ಟೆಯೊಂದರಲ್ಲಿ ಬಿಜೆಪಿ ಏಜೆಂಟ್ ಒಬ್ಬರ ತಲೆಯೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಮಾಲ್ಡಾ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಗರೊಂದಿಗೆ ನಡೆದ ಘರ್ಷಣೆಯಲ್ಲಿ ಟಿಎಂಸಿ ನಾಯಕನ ಸಹೋದರ ಸಾವನ್ನಪ್ಪಿದ್ದಾನೆ.
Web Stories