ರಾಮನಗರ: ಕನಕಪುರದಲ್ಲಿ (Kanakapura) ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ, ವೋಟನ್ನೂ ತಗೋಂಡು ಚುನಾವಣೆ ಗೆಲ್ತೀವಿ ಎಂದು ಸಚಿವ ಅಶ್ವಥ್ ನಾರಾಯಣ (Aswath Narayan) ತಿರುಗೇಟು ನೀಡಿದ್ದಾರೆ.
ʻಬಿಜೆಪಿ ಅಭ್ಯರ್ಥಿಗೆ ಕನಪುರದಲ್ಲಿ ಒಳ್ಳೆಯ ಆಥಿತ್ಯ ಕೊಡ್ತಿವಿʼ ಎಂಬ ಡಿಕೆಶಿ ಹೇಳಿಕೆ ಕುರಿತು ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಥಿತ್ಯವನ್ನೂ ಸ್ವೀಕರಿಸ್ತೀವಿ. ಮಿಲ್ಟ್ರಿ ಹೋಟೆಲ್ (Military Hotels) ಊಟಾನೂ ಮಾಡ್ತೀವಿ, ವೋಟನ್ನೂ ತಗೋಡು ಚುನಾವಣೆಯಲ್ಲೂ ಗೆಲ್ತೀವಿ, ಈ ಬಾರಿ ಜಯಭೇರಿ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್ ಸಿಗ್ಲಿಲ್ಲ ಅಂತಾ ಬೆಂಬಲಿಗರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್ ವಂಚಿತೆ ನಾಗಶ್ರೀ
ಕನಕಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆರ್.ಅಶೋಕ್ ಸ್ಪರ್ಧೆ ಕುರಿತು ಮಾತನಾಡಿ, ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರುದ್ಧದ ಅಲೆ ಇದೆ. ಜನರಿಗೆ ಸಂಪೂರ್ಣ ಅತೃಪ್ತಿ ಇದೆ. ಹಾಗಾಗಿ ಅಲ್ಲಿ ಬಿಜೆಪಿ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ. ಹಾಗಾಗಿ ನಮ್ಮ ಪಕ್ಷದ ಹಿರಿಯ ನಾಯಕ ಆರ್.ಅಶೋಕ್ ಅವರನ್ನ ಕಣಕ್ಕಿಳಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಏ.18ವರೆಗೆ ಹೊಸ ಮೀಸಲಾತಿ ಅನ್ವಯ ನೇಮಕಾತಿ, ಪ್ರವೇಶಾತಿ ನೀಡುವಂತಿಲ್ಲ: ಮುಸ್ಲಿಮರು, ಒಕ್ಕಲಿಗ & ಲಿಂಗಾಯತರ ಪರ ವಾದ ಏನಿತ್ತು?
ರಾಮನಗರ ಜಿಲ್ಲೆಯ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಎಲ್ಲಾ ಕಡೆಯಲ್ಲೂ ರಾಜಿಯಿಲ್ಲದೇ ಚುನಾವಣೆ ಮಾಡ್ತೀವಿ. ಎಲ್ಲಾ ಕಡೆ ಸಂಘಟನೆ ಮಾಡಿ ಗೆಲುವು ಸಾಧಿಸುತ್ತೇವೆ. ಎಲ್ಲರೂ ಡಿ.ಕೆ ಶಿವಕುಮಾರ್ ಸಾಕಪ್ಪ ಸಾಕು ಅಂತಿದ್ದಾರೆ. ಕಾಂಗ್ರೆಸ್ಸೂ ಸಾಕು, ಶಿವಕುಮಾರೂ ಸಾಕು, ಬಿಜೆಪಿನೇ ಬೇಕು ಅಂತಿದ್ದಾರೆ. ಇದು ನಮಗೆ ಅನುಕೂಲವಾಗಲಿದೆ ಎಂದು ಕುಟುಕಿದ್ದಾರೆ.
ಇದೇ ವೇಳೆ ಬಿಜೆಪಿ ಅಸಮಾಧಾನ ವಿಚಾರ ಕುರಿತು ಮಾತನಾಡಿ, ಹೌದು ಅಲ್ಲಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿರೋದು ನಿಜ. ಆದ್ರೆ ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ. ಹಾಗಾಗಿ ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇವೆ. ಜನರು ಮೋದಿ ಆಡಳಿತವನ್ನ ಒಪ್ಪಿಕೊಂಡಿದ್ದಾರೆ. ಜನರ ಭಾವನೆಗಳನ್ನ ಗೌರವಿಸುವ ನಮ್ಮ ಪಕ್ಷ ಗೆಲ್ಲುವುದು ನಿಶ್ಚಿತ ಎಂದು ಹೇಳಿದ್ದಾರೆ.