ಚಾಮರಾಜನಗರ: ಒಂದು ಕಡೆ ಜಿಲ್ಲಾಧಿಕಾರಿ ಬೆಳೆ ಬೆಳೆಯಿರಿ ಇಲ್ಲವಾದ್ರೆ ನೋಟಿಸ್ ಕೊಡ್ತೀನಿ ಎನ್ನುತ್ತಾರೆ. ಇನ್ನೊಂದೆಡೆ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಿ ಮಾಡಲು ಮನೆಗೆ ಬರುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೈತರು, ನಾವು ಸಾಲ ಮಾಡಿ ಓಡಿಹೋಗಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಸಾಲ ನೀಡ್ತೀವಿ, ಹಳೇ ಸಾಲ ತೀರಿಸಿ ಎಂದು ವಿಜಯ ಬ್ಯಾಂಕ್ ಅಧಿಕಾರಿಗಳು ಚಾಮರಾಜನಗರ ತಾಲೂಕಿನ ಹಾಲೂರು ಗ್ರಾಮದಲ್ಲಿ ಬೆಳ್ಳಂಬೆಳ್ಳಿಗೆ ರೈತರ ಮನೆ ಬಾಗಿಲಿಗೆ ಹೋಗಿ ಸಾಲ ವಸೂಲಾತಿಗೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದು ಯಾವ ಬೆಳೆಯನ್ನು ಬೆಳೆದಿಲ್ಲ. ಹೀಗಿರುವಾಗ ನಾವು ಹಳೇ ಸಾಲ ಹೇಗೆ ತೀರಿಸುವುದು. ನಮಗೆ ಹೊಸ ಸಾಲವೇನೂ ಬೇಡ. ನಾವು ಬೆಳೆ ಬೆಳೆದು ಹಳೇ ಸಾಲವನ್ನು ತೀರಿಸುತ್ತೀವಿ. ನಮಗೇನೂ ಹೊಸ ಸಾಲದ ಅಗತ್ಯವಿಲ್ಲ. ನಮಗೂ ಸ್ವಾಭಿಮಾನ ಇದೆ. ನಾವೇನು ಮಲ್ಯ ರೀತಿ ದೇಶ ಬಿಟ್ಟು ಹೋಗಲ್ಲ. ಸಾಲ ತೀರಿಸುತ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ಹಾಲೂರಿನಲ್ಲಿರುವ ವಿಜಯಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ರು.