ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನಮಗೆ ತೃಪ್ತಿ ತಂದಿದ್ದು, ನಾಲ್ಕು ರಾಜ್ಯಗಳಲ್ಲಿ ನಾವು ಸರ್ಕಾರ ನಡೆಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಂಜಾಬ್ನಲ್ಲಿ ಬಿಜೆಪಿ ಶೇಖಡಾವಾರು ಹೆಚ್ಚು ಮತಗಳನ್ನು ಗಳಿಸಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶ ಜನತೆ ನೀಡಿದ ಭರವಸೆಯನ್ನು ನಾವು ಈಡೇರಿಸುತ್ತೇವೆ.ಪಂಜಾಬ್ನಲ್ಲಿ ನಾವು ಸೋಲನ್ನು ಸ್ವೀಕರಿಸಿದ್ದೇವೆ. ಸೋತಿದ್ದು ಯಾಕೆ ಎನ್ನುವುದನ್ನು ಅಧ್ಯಯನ ನಡೆಸುತ್ತೇವೆ ಎಂದು ಹೇಳಿದರು.
ಬಡವನಿಂದ ಹಿಡಿದು ಇಡೀ ದೇಶದ ಜನತೆ ಬಿಜೆಪಿಯ ಜೊತೆಗಿದ್ದಾರೆ. ನರೇಂದ್ರ ಮೋದಿ ವಿರುದ್ಧ ಪ್ರಚಾರ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ತಿಳಿಸಿದರು.
ಈ ಜಯಕ್ಕೆ ಕಾರಣರಾದ ದೇಶದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು. ಬಿಜೆಪಿಯ ಈ ಜಯ ಜನರ ಜಯ ಮತ್ತು ಮೋದಿಯವರ ಆಡಳಿತಕ್ಕೆ ಸಿಕ್ಕಿದ ಜಯ ಎಂದು ಅಮಿತ್ ಶಾ ಬಣ್ಣಿಸಿದರು.