ಬೆಳಗಾವಿ(ಚಿಕ್ಕೋಡಿ): ಶಾಸಕ ಉಮೇಶ್ ಕತ್ತಿ ಅಥವಾ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಅವರಿಬ್ಬರಿಗೂ ಸಿಕ್ಕಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹುಕ್ಕೇರಿ ತಾಲೂಕಿನ ಪಾಶ್ಚಪೂರ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿಯಿಂದ ಉಮೇಶ್ ಕತ್ತಿ ಅಥವಾ ಬಾಲಚಂದ್ರ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂದು ನಿರೀಕ್ಷೆ ಇತ್ತು. ಆದರೆ ಇಬ್ಬರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಮಂತ್ರಿಗಿರಿ ಸಿಗದೇ ಇದ್ದಿದ್ದು ಅವರ ಪಕ್ಷದ ಆಂತರಿಕ ವಿಚಾರ ಎಂದು ಬಿಜೆಪಿ ಸರ್ಕಾರದ ಸಚಿವ ಸಂಪುಟದ ಬಗ್ಗೆ ಪ್ರತಿಕ್ರಿಯಿಸಿದರು.
ಇತ್ತ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಿ, ಅವರು ಇಂದು ಎರಡು ವಸ್ತುಗಳನ್ನ ಕಳೆದುಕೊಂಡಿದ್ದಾರೆ. ಅವರ ಆಸೆ ಪಟ್ಟಿದ್ದ ವಸ್ತು ಕೂಡ ಸಿಗಲಿಲ್ಲ, ಮಂತ್ರಿಗಿರಿಯು ಅವರಿಗೆ ಸಿಗಲಿಲ್ಲ. ರಮೇಶ ಎರಡೂ ವಸ್ತು ಕಳೆದುಕೊಂಡಿದ್ದು ನಮಗೂ ನಿರಾಶೆಯಾಗಿದೆ ಎಂದು ವ್ಯಂಗ್ಯವಾಡಿದರು.
ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ತಪ್ಪಿದ್ದು ಇದೇ ಮೊದಲೇನಲ್ಲ. ಕೆಲವೊಂದು ಸಂದರ್ಭಗಳಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವುದು ಬಿಡುವುದು ಅವರ ಪಕ್ಷದ ನಿರ್ಧಾರ ಎಂದು ಹೇಳಿದರು.
ಇನ್ನೊಂದೆಡೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಉಮೇಶ್ ಕತ್ತಿ ಬಂಡಾಯ ಎದ್ದಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಶಾಸಕನಾಗಿ 35 ವರ್ಷ ಆಯಿತು. ನಾನು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. 1996ಯಿಂದ 1999ವರೆಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. 2008-2013ವರೆಗೂ ಕೂಡ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಕೂಡ ಮಂತ್ರಿ ಆಗಬೇಕೆಂಬ ಆಸೆ ಇತ್ತು. ಆದರೆ ಅರ್ಧ ಸಂಪುಟ ವಿಸ್ತರಣೆ ಮಾಡಿದ್ದಾರೆ. ಈಗ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ಇನ್ನು ಅರ್ಧ ಸಂಪುಟ ವಿಸ್ತರಣೆ ಮಾಡಬೇಕಿದೆ. ಕಾದು ನೋಡಬೇಕಿದೆ. ನಾನು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
8 ಸಲ ಜನ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ಹಿರಿಯನಾಗಿದ್ದೇನೆ. ನಾನು ಚಿಕ್ಕ ವಯಸ್ಸಿನಲ್ಲೇ ಶಾಸಕನಾಗಿದ್ದೆ. 6-8 ಬಾರಿ ಶಾಸಕನಾಗಿ, 13 ವರ್ಷಗಳ ಕಾಲ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನನಗೆ ಆಸೆ ಇದೆ, ವಯಸ್ಸಿದೆ. ಕೆಲಸ ಮಾಡುವ ಹಂಬಲ ಇದೆ. ಬೆಳಗಾವಿಯಲ್ಲಿ ಅತಿವೃಷ್ಟಿಯಿಂದ ತೊಂದರೆಯಾಗುತ್ತಿದ್ದು, ಅದನ್ನು ನಿಭಾಯಿಸಬೇಕು ಎಂಬ ಮನಸ್ಸಿದೆ. ಸಿಎಂ ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂಬ ಭರವಸೆ ಇದೆ ಎಂದರು.
ಬೆಳಗ್ಗೆ 6 ಗಂಟೆಯವರೆಗೂ ನನ್ನ ಹೆಸರು ಇತ್ತು. ಆದರೆ 6.10ಕ್ಕೆ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ನಾನು ಹಾಗೂ ತಿಪ್ಪರೆಡ್ಡಿ ಹಿರಿಯರು. ಸಾಕಷ್ಟು ಜನರು ಆಶೀರ್ವಾದ ಮಾಡಿದ್ದಾರೆ. ಜನರ ಸೇವೆ ಮಾಡುವ ಇಚ್ಛೆ ನಮಗಿದೆ. ಅಂತಹ ಸಂದರ್ಭದಲ್ಲಿ ಹಿರಿಯರನ್ನು ಕೈಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಯುವಕರನ್ನು ಬೆಳೆಸಬೇಕು ಎಂದು ಬಯಸುತ್ತಿದ್ದಾರೆ. ಇನ್ನು ಸಂಪುಟ ವಿಸ್ತರಣೆ ಆಗಬೇಕಿದೆ. ಕಾದು ನೋಡಬೇಕು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.