– ಅಂಗಡಿಗೆ ಹೋದಾಗ ಪದಾರ್ಥಗಳ ಬೆಲೆ ಹೇಳ್ತಾರೆ ಎಂದಿದ್ದೇಕೆ?
ಬೆಂಗಳೂರು: ಅಂಗಡಿಗೆ ಹೋಗಿ ಯಾವುದೋ ಪದಾರ್ಥದ ಬೆಲೆ ಎಷ್ಟು ಅಂತ ಕೇಳಿದಾಗ ಅವರು ಬೆಲೆ ಹೇಳುತ್ತಾರೆ. ಆದರೆ ಆ ರೀತಿ ನಾವೇನೂ ಜೆಡಿಎಸ್ನವರ ಬಳಿ ಹೋಗಿ ಕೇಳಿಲಿಲ್ಲ. ನಾವು ಯಾರನ್ನೂ ಕೊಂಡುಕೊಳ್ಳಲು ಹೋಗಿಲ್ಲ ಎಂದು ಸಚಿವ ಜಿ. ಪರಮೇಶ್ವರ್ (G Paramshewara) ಹೇಳಿದ್ದಾರೆ.
ಸಿಪಿವೈ ಹೇಳಿಕೆಯಿಂದ ಜೆಡಿಎಸ್ (JDS) ಶಾಸಕರಿಂದ ಒಗ್ಗಟ್ಟು ಪ್ರದರ್ಶನ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವೇನೂ ಅವರನ್ನು ಕೊಂಡುಕೊಳ್ಳಲು ಹೋಗಿಲ್ಲ. ಅಂಗಡಿಗೆ ಹೋಗಿ ಯಾವುದೋ ಪದಾರ್ಥದ ಬೆಲೆ ಎಷ್ಟು ಅಂತ ಕೇಳಿದಾಗ ಅವರು ಬೆಲೆ ಹೇಳುತ್ತಾರೆ. ಆದರೆ ಆ ರೀತಿ ನಾವೇನೂ ಜೆಡಿಎಸ್ನವರ ಬಳಿ ಹೋಗಿ ಕೇಳಿಲಿಲ್ಲ. ಯೋಗೇಶ್ವರ್ ಅವರು ಹಾಗೇ ಏನೋ ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ. ಅದನ್ನೇ ಜೆಡಿಎಸ್ನವರು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದರು.ಇದನ್ನೂ ಓದಿ: ನಾನು, ನನ್ನ ಮಗ ಜೈಲಿಗೆ ಹೋಗುವಂತಹ ತಪ್ಪು ಮಾಡಿಲ್ಲ: ಹೆಚ್.ಡಿ.ರೇವಣ್ಣಗೆ ಜಿಟಿಡಿ ತಿರುಗೇಟು
ಸಂಪುಟ ಪುನಾರಚನೆ ಬಗ್ಗೆ ಮಾತನಾಡಿ, ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ಡಿಸಿಎಂ ಅವರು ದೆಹಲಿಗೆ ಹೋಗಿದ್ದಾರೆ. ಖಾತೆ ಬದಲಾವಣೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಇಷ್ಟು ಕಾಲ ವರಿಷ್ಠರು ಏನು ಜವಾಬ್ದಾರಿ ಕೊಟ್ಟಿದ್ದಾರೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಈಗಲೂ ಅವರು ಏನೇ ಜವಾಬ್ದಾರಿ ಕೊಟ್ಟರೂ ಮಾಡುವುದಿಕ್ಕೆ ನಾನು ತಯಾರಾಗಿರುತ್ತೀನಿ. ಪಕ್ಷದ ಸೂಚನೆಯನ್ನು 35 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೇನೆ. ಸರ್ಕಾರ, ಪಕ್ಷದಲ್ಲಿ ಕೊಟ್ಟ ಜವಾಬ್ದಾರಿ ಮಾಡಿಕೊಂಡು ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೇಳಿದ್ದೇನೆ. ಒಂದೊಮ್ಮೆ ಆ ವಿಚಾರ ವರಿಷ್ಠರ ಮುಂದೆ ಇದ್ದರೆ ಬದಲಾವಣೆ ಮಾಡುತ್ತಾರೆ ಎಂದರು.
ವರ್ಕಿಂಗ್ ಕಮಿಟಿಗಳ ಸಭೆ ನಾಳೆ ಇದ್ದು, ಸಾಮಾನ್ಯವಾಗಿ ಈ ಸಭೆಗೆ ಸಿಎಂ, ಕೆಪಿಸಿಸಿ (KPCC) ಅಧ್ಯಕ್ಷರನ್ನು ಕರೆಯುತ್ತಾರೆ. ಅದಕ್ಕಾಗಿ ಇಂದು (ನ.28) ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಇದಾದ ನಂತರ ಹೈಕಮಾಂಡ್ ಜೊತೆ ಸಂಪುಟ ಪುನಾರಚನೆ ಬಗ್ಗೆ ಅವರಿಬ್ಬರೂ ಚರ್ಚೆ ಮಾಡಬಹುದೇನೋ? ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗೂ ಇದ್ದು, ಅಲ್ಲಲ್ಲೇ ಮಾತುಗಳು ಕೇಳಿಬರುತ್ತಿವೆ. ಈ ಎರಡೂ ವಿಚಾರಗಳ ಬಗ್ಗೆ ಸಿಎಂ, ಡಿಸಿಎಂ ಚರ್ಚೆ ಮಾಡಿ ಏನು ತೀರ್ಮಾನ ಮಾಡಿಕೊಂಡು ಬರುತ್ತಾರೆ ಗೊತ್ತಿಲ್ಲ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ (MUDA Scam) ಸಿಎಂ ಕುಟುಂಬಕ್ಕೆ ಜಮೀನು ಮಾರಿದ ಮೂಲ ಮಾಲೀಕರ ಮಕ್ಕಳಿಂದ ದೂರು ವಿಚಾರವಾಗಿ ಮಾತನಾಡಿ, ಈಗಾಗಲೇ ಲೋಕಾಯುಕ್ತದಲ್ಲಿ ಮುಡಾ ತನಿಖೆ ನಡೆಯುತ್ತಿದೆ. ಬಹುಶ: ಲೋಕಾಯುಕ್ತದವರು ಇದನ್ನು ಗಮನಿಸಬಹುದು. ತನಿಖೆ ಮಾಡುವವರು ಇದನ್ನು ಗಮಿಸಿಯೇ ತನಿಖೆ ಮಾಡುತ್ತಾರೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಅಬಕಾರಿ ಲಂಚದ ವಿರುದ್ಧ ಕಾಂಗ್ರೆಸ್ (Congress) ಕಾರ್ಯಕರ್ತನಿಂದ ಲೋಕಾಯುಕ್ತ ದೂರು ವಿಚಾರವಾಗಿ ಮಾತನಾಡಿ, ಪೊಲೀಸ್ ಇಲಾಖೆಗೆ ದೂರು ಬಂದರೆ ತಕ್ಷಣ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಲೋಕಾಯುಕ್ತಕ್ಕೆ ಕೊಟ್ಟಿರುವ ಕಾರಣ ಲೋಕಾಯುಕ್ತದವರೇ ಅದನ್ನು ನೋಡುತ್ತಾರೆ. ಆದರೆ ನಮ್ಮ ಇಲಾಖೆಗೆ ದೂರು ಬಂದಿಲ್ಲ. ನಮ್ಮ ಇಲಾಖೆಗೆ ದೂರು ಬಂದರೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯಿಂದ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ