ದರ್ಶನ್ ಚಿತ್ರದ ಟೈಟಲ್‍ಗೆ ನಮಗೆ ಯಾವುದೇ ಆಕ್ಷೇಪವಿಲ್ಲ: ರಾಜಮಾತೆ ಪ್ರಮೋದಾದೇವಿ

Public TV
1 Min Read
MYS WODEYAR PRESSMEET COLLAGE

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ‘ಒಡೆಯರ್’ ಚಿತ್ರದ ಟೈಟಲ್ ವಿವಾದಕ್ಕೆ ರಾಜಮಾತೆ ಪ್ರಮೋದಾದೇವಿ ಪ್ರತಿಕ್ರಿಯಿಸಿದ್ದಾರೆ.

ಒಡೆಯರ್ ಹೆಸರಿನ ಸಿನಿಮಾ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಚಿತ್ರಕ್ಕೆ ಒಡೆಯರ್ ಎಂದು ಹೆಸರಿಟ್ಟಿರಿವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಈ ಚಿತ್ರದಲ್ಲಿ ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ ನನ್ನ ಆಕ್ಷೇಪವಿದೆ ಎಂದು ಹೇಳಿದ್ದಾರೆ.

ಒಡೆಯರ್ ಹೆಸರು ನಮಗೆ ಬಳುವಳಿಯಾಗಿ ಬಂದದ್ದು. ಒಡೆಯರ್ ಹೆಸರು ತುಂಬಾ ಜನ ಇಟ್ಟುಕೊಂಡಿದ್ದಾರೆ. ಆದರೆ ನಮ್ಮ ಮನೆತನಕ್ಕೆ ಸಂಬಂಧಪಟ್ಟಂತೆ ಬಂದರೆ ಅದಕ್ಕೆ ಆಕ್ಷೇಪವಿದೆ. ಈ ವಿಚಾರದಲ್ಲಿ ಒಡೆಯರ್ ಅಭಿಮಾನಿಗಳು ಕೊಟ್ಟಿರುವ ದೂರಿನ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

MYS WODEYAR PRESSMEET

ಏನಿದು ವಿವಾದ?
ನಟ ದರ್ಶನ ಅಭಿನಯದ `ಒಡೆಯರ್’ ಚಿತ್ರದ ಹೆಸರು ಬದಲಾವಣೆ ಮಾಡಬೇಕೆಂದು ಎರಡು ಸಂಘಟನೆಯ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಒಡೆಯರ್ ಎಂಬ ಪದ ಮೈಸೂರು ಅರಸರ ಸ್ವತ್ತು. ನಮಗೆ ಅವರ ಮೇಲೆ ಅಪಾರ ಗೌರವ ಅಭಿಮಾನವಿದೆ. ನಮ್ಮ ನಾಡಿನ ನೆಲ ಜಲ ವಿಚಾರದಲ್ಲಿ ಅವರ ಕೊಡುಗೆ ಅಪಾರವಿದೆ. ಮೈಸೂರು ಜನತೆ ಅರಸರನ್ನ ಭಗವಂತನ ರೀತಿ ಕಾಣುತ್ತೇವೆ. ಚಿತ್ರದಲ್ಲಿ ರೌಡಿಸಂ, ಹಾಸ್ಯ, ವ್ಯಾಪಾರಿ ಚಿತ್ರಗಳಿಗೆ ಒಡೆಯರ್ ಹೆಸರು ಇಡಲು ಬಿಡುವುದಿಲ್ಲ. ಟೈಟಲ್ ಬದಲಾಯಿಸದಿದ್ದರೆ ಚಿತ್ರಿಕರಣಕ್ಕೆ ಅಡ್ಡಿ ಪಡಿಸುವುದಾಗಿ ಎಚ್ಚರಿಸುತ್ತಿದ್ದೇವೆ ಎಂದು ಕನ್ನಡ ಕ್ರಾಂತಿದಳ ಸಂಘಟನೆ ಮೈಸೂರಿನ ಕೆ.ಆರ್. ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿತ್ತು.

ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲೇ ಅರಸು ಯುವಜನ ವೇದಿಕೆ ಒಡೆಯರ್ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ದೂರು ದಾಖಲಿಸಿತ್ತು. ಈ ಹಿಂದೆ ಮೈಸೂರಿನಲ್ಲಿ ಕನ್ನಡ ಕ್ರಾಂತಿ ದಳದಿಂದ `ಒಡೆಯರ್ ಟೈಟಲ್‍ಗೆ ವಿರೋಧ ವ್ಯಕ್ತಪಡಿಸಿ ಈ ಶೀರ್ಷಿಕೆಯನ್ನ ಹಿಂಪಡೆಯುವಂತೆ ಆಗ್ರಹಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *